ಆತ್ಮಹತ್ಯೆ ಯತ್ನ : ಸಂತೋಷ್ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರು, ನವೆಂಬರ್ 28: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ವಿರುದ್ಧ ಸದಾಶಿವನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿರುವ ಆರೋಪದಡಿ ಐಪಿಸಿ ಸೆಕ್ಷನ್ 309 ಅಡಿ ಕೇಸು ದಾಖಲಿಸಿದ್ದಾರೆ. ಪತಿಯ ಆತ್ಮಹತ್ಯೆ ಪ್ರಯತ್ನ ಬಗ್ಗೆ ಸಂತೋಷ್ ಅವರ ಪತ್ನಿ ಜಾಹ್ನವಿ ಅವರಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ನನ್ನ ಹಾಗೂ ನನ್ನ ಪತ್ನಿ ನಡುವೆ ಯಾವುದೇ ಕಲಹ ಇರಲಿಲ್ಲ. ಸಣ್ಣ ಪುಟ್ಟ ಕಲಹವಿದ್ದರೂ ಅದನ್ನು ಸರಿ ಪಡಿಸಿಕೊಂಡಿದ್ದೆವು. ಇಬ್ಬರ ನಡುವೆ ಇತ್ತೀಚೆಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇರಲಿಲ್ಲ. ಇತ್ತೀಚೆಗೆ ಸಂತೋಷ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನಿದ್ದೆ ಮಾಡುತ್ತಿರಲಿಲ್ಲ. ಹೀಗಾಗಿ ನಿದ್ರೆ ಮಾಡಲು ಅವರು ನಿದ್ರೆ ಮಾತ್ರೆ ಮೊರೆ ಹೋಗುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ಸಂತೋಷ್ ಆತ್ಮಹತ್ಯೆ ಪ್ರಯತ್ನ ಪ್ರಕರಣ: ಯಡಿಯೂರಪ್ಪ ಪ್ರತಿಕ್ರಿಯೆ
ನಿನ್ನೆ ಕೆಲಸ ನಿಮಿತ್ತ ಹೋಗಿದ್ದರು. ಬೇಸರದಲ್ಲಿದ್ದ ಅವರು ಓದುವ ಕೋಣೆಗೆ ಹೋಗಿದ್ದರು. ಒತ್ತಡಕ್ಕೆ ಸಿಲುಕಿದಾಗ ಸಂತೋಷ್ ಪುಸ್ತಕ ಓದುತ್ತಿದ್ದರು. ಅದರಂತೆ ನಿನ್ನೆಯೂ ಪುಸ್ತಕ ಓದುವ ಕೋಣೆಗೆ ಹೋಗಿದ್ದರು. ಎಂದಿನಂತೆ ನಿದ್ರೆ ಮಾತ್ರೆ ಸೇವಿಸಿದ್ದರು, ಆದರೆ ಹೆಚ್ಚು ಮಾತ್ರೆ ಸೇವಿಸಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನನಗೆ ವಿಷಯ ತಿಳಿದ ಕೂಡಲೇ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಿದೆವು ಎಂದು ಜಾಹ್ನವಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಕೌಟುಂಬಿಕ ಕಲಹ ? : ಸಂತೋಷ್ ಹಾಗೂ ಪತ್ನಿ ಜಾಹ್ನವಿ ನಡುವಿನ ಕೌಟುಂಬಿಕ ಕಲಹವಿತ್ತು. ಇದರಿಂದ ಆತ್ಮಹತ್ಯೆಗೆ ಯತ್ನಿಸಿರಬಹುದ ಎಂಬ ಮಾತು ಕೇಳಿ ಬಂದ ಕೂಡಲೇ ಸಂತೋಷ್ ಪತ್ನಿ ಸ್ಪಷ್ಟನೆ ನೀಡಿದ್ದಾರೆ. ನನ್ನ ಹಾಗೂ ಸಂತೋಷ್ ನಡುವೆ ಯಾವುದೇ ಕಲಹವಿರಲಿಲ್ಲ. ಇಬ್ಬರೂ ಅನೋನ್ಯವಾಗಿದ್ದೇವೆ. ಸುಮ್ಮನೆ ಆರೋಪ ಮಾಡಲಾಗುತ್ತಿದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಂತೋಷ್ ಅವರ ಆಪ್ತರು ಹೇಳುವ ಪ್ರಕಾರ ಮೂರು ವರ್ಷದ ಹಿಂದೆ ಅರಸೀಕೆರೆ ಮೂಲದ ಜಾಹ್ನವಿ ಅವರನ್ನು ಮದುವೆಯಾಗಿದ್ದರು. ಸಂತೋಷ್ ಕೆಲ ನಡವಳಿಕೆಗಳ ಬಗ್ಗೆ ಪತ್ನಿ ಅಸಮಾಧಾನ ಹೊರ ಹಾಕಿ ಇಬ್ಬರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ವರ್ಷದ ಹಿಂದೆ ಪೊಲೀಸ್ ಠಾಣೆ ಮೆಟ್ಟಿಲೇರುವ ಸ್ಥಿತಿ ನಿರ್ಮಾಣವಾಗಿತ್ತು. ರಾಜಿ ಮೂಲಕ ಸಮಸ್ಯೆ ಇತ್ಯರ್ಥ ಮಾಡಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಯತ್ನ
Recommended Video
ಕಾರ್ಯದರ್ಶಿ ಹುದ್ದೆಗೆ ಕುತ್ತು ? : ಇನ್ನು ಸಂತೋಷ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಇಳಿಸಲಾಗುತ್ತಿದೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟು ಹಾಕಿತ್ತು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಬಿ. ಮರಮಕಲ್ ಅವರನ್ನು ವಜಾ ಮಾಡಲಾಗಿತ್ತು. ಇದರ ಬೆನ್ನಲ್ಲೇ ಮಾಧ್ಯಮ ಸಲಹೆಗಾರ ಪತ್ರಕರ್ತ ಮಹದೇವ ಪ್ರಕಾಶ್ ಅವರು ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಸಂತೋಷ್ ಅವರನ್ನು ರಾಜಕೀಐ ಕಾರ್ಯದರ್ಶಿ ಹುದ್ದೆಯಿಂದ ಕೆಳಗೆ ಇಳಿಯಲು ಸೂಚಿಸಲಾಗಿದೆ. ನವೆಂಬರ್ ತಿಂಗಳಾಂತ್ಯಕ್ಕೆ ರಾಜೀನಾಮೆ ನೀಡಬೇಕು, ತಪ್ಪಿದಲ್ಲಿ ವಜಾ ಮಾಡಲಿದ್ದಾರೆ ಎನ್ನಲಾಗಿತ್ತು. ದಿಢೀರ್ ರಾಜಕೀಯ ಬೆಳವಣಿಗೆ ಸಂತೋಷ್ ಬೇಸರಕ್ಕೆ ಕಾರಣವಾಗಿರಬಹುದಾ ? ಆತ್ಮಹತ್ಯೆಗೆ ಯತ್ನ ಪ್ರಕರಣದಲ್ಲಿ ಪೊಲೀಸರು ಸಂತೋಷ್ ಅವರ ಹೇಳಿಕೆ ಪಡೆಯಲಿದ್ದು, ಬಳಿಕ ಗೊತ್ತಾಗಲಿದೆ.