ಮಕರ ಸಂಕ್ರಾಂತಿ: ಗವಿ ಗಂಗಾಧರ ದೇವಸ್ಥಾನದಲ್ಲಿ ನಡೆಯಿತು ವಿಸ್ಮಯ!
ಬೆಂಗಳೂರು, ಜನವರಿ 15: ಸಂಕ್ರಾಂತಿಯ ದಿನದಂದು ಬುಧವಾರ ಬೆಂಗಳೂರಿನ ಸುಪ್ರಸಿದ್ಧ ಗವಿಪುರದ ಗವಿ ಗಂಗಾಧರೇಶ್ವರ ದೇವಸ್ಥಾನ ವಿಶೇಷ ಕ್ಷಣಕ್ಕೆ ಸಾಕ್ಷಿಯಾಯಿತು.
ಸೂರ್ಯ ದಕ್ಷಿಣ ಪಥದಿಂದ ಉತ್ತರ ಪಥಕ್ಕೆ ಹೊರಳುವ ಸಮಯದಲ್ಲಿ, ತನ್ನ ಕಿರಣಗಳನ್ನು ಗರ್ಭಗುಡಿಯಲ್ಲಿರುವ ಶಿವಲಿಂಗದ ಸ್ಪರ್ಷಿಸಿ ಹೋಗುವುದು ಬೆರಗು ಮೂಡಿಸಿತು. ಈ ವೇಳೆ ಸಾವಿರಾರು ಭಕ್ತರು ದೇವಸ್ಥಾನದಲ್ಲಿ ಹಾಜರಿದ್ದು, ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಂಡರು. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಕೂಡ ದರ್ಶನ ಪಡೆದರು.
ಸಂಕ್ರಾಂತಿ; ನಮ್ಮ ಬದುಕನ್ನು ಒಳಿತಿನ ಕಡೆಗೆ ನಡೆಸುವ ಹಬ್ಬ
ಸೂರ್ಯ ಕಿರಣಗಳು ಗವಿ ಗಂಗಾಧರನಾಥ ದೇವಸ್ಥಾನದ ಗರ್ಭ ಗುಡಿಯಯಲ್ಲಿನ ಶಿವಲಿಂಗವನ್ನು ಸಂಜೆ 4.32 ಕ್ಕೆ ಸ್ಪರ್ಶಿಸಿತು. ಈ ವೇಳೆ ದೇವಸ್ಥಾನದಲ್ಲಿ ಮಂತ್ರ, ಓಂಕಾರ ಪಠಣಗಳು ನಡೆದವು. ಅರ್ಚಕರು ಶಿವಲಿಂಗದ ಮೇಲೆ ಎಳನೀರು ಅಭಿಷೇಕ ಮಾಡಿದರು. ಸುಮಾರು 4 ಸೆಕೆಂಡ್ಗಳ ಕಾಲ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿ ಮರೆಯಾಯಿತು.
ಶುಭ ಶಕುನ
"ಸೂರ್ಯ ಮೂರು ಸೆಕೆಂಡ್ ಶಿವಲಿಂಗದ ಮೇಲೆ ನಿಂತು, ಉತ್ತರಾಯಣ ಪ್ರವೇಶ ಮಾಡಿದ. ಕಳೆದ ವರ್ಷ ಜಾಸ್ತಿ ಹೊತ್ತು ಸೂರ್ಯ ರಶ್ಮಿ ಶಿವಲಿಂಗ ಸ್ಪರ್ಶಿಸಿತ್ತು. ಆದರೆ, ಈ ಬಾರಿ ಜಾಸ್ತಿ ಹೊತ್ತು ನಿಲ್ಲಲಿಲ್ಲ. ಇದು ಶುಭ ಶಕುನ" ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ಸೊಮಸುಂದರ್ ದೀಕ್ಷಿತ್ ಮಾಧ್ಯಮಗಳಿಗೆ ತಿಳಿಸಿರು.
ದೇವೇಗೌಡರ ಭೇಟಿ
ಇನ್ನು ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡ ಕೂಡ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. "ಮಕರ ಸಂಕ್ರಾಂತಿ ದಿನ ಶಿವಲಿಂಗನಿಗೆ ಸೂರ್ಯನ ಕಿರಣಗಳಿಂದ ಅಭಿಷೇಕ ನಡೆಯುವುದನ್ನು ನೋಡುವುದು ನಮ್ಮ ಪುಣ್ಯ. 1300 ವರ್ಷಗಳ ಹಿಂದೆ ದೇವಸ್ಥಾನ ಕಟ್ಟಿದ ಪುಣ್ಯಾತ್ಮರು ಈ ರೀತಿ ಚಮತ್ಕಾರ ಮಾಡಿದ್ದಾರೆ. ಇವತ್ತು ವಿಜ್ಞಾನ, ತಂತ್ರಜ್ಞಾನ ಎಲ್ಲವೂ ಬಂದಿವೆ, ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ'' ಎಂದರು.
ಶೋಭಾ ಕರಂದ್ಲಾಜೆ ಭೇಟಿ
ಶಿವಲಿಂಗದ ಮೇಲೆ ಸುರ್ಯ ರಶ್ಮಿ ಸ್ಪರ್ಶಿಸುವ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಕೂಡ ಆಗಮಿಸಿ ದರ್ಶನ ಪಡೆದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಮ್ಮ ಪೂರ್ವಜರು ಎಷ್ಟು ಶ್ರೇಷ್ಠ ಎಂಜಿನಿಯರ್ ಆಗಿದ್ದರು ಅನ್ನೋದಕ್ಕೆ, ಸೂರ್ಯ ಸಂಕ್ರಮಣದ ವೇಳೆ ಶಿವಲಿಂಗವನ್ನು ಸ್ಪರ್ಶಿಸುವ ಕ್ಷಣವೇ ಸಾಕ್ಷಿ. ಯಾರು ದೇವರನ್ನ ನಂಬಲ್ಲ, ಅವರು ಗವಿ ಗಂಗಾಧರನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಸಾಕ್ಷಾತ್ಕಾರ ಪಡೆದುಕೊಳ್ಳಬೇಕು. ಇದೊಂದು ವಿಸ್ಮಯ. ಹಬ್ಬಗಳ ಮೂಲಕ ನಮ್ಮ ಸಂಸ್ಕೃತಿಯನ್ನು ನಾವು ಎತ್ತಿ ಹಿಡಿಯಬೇಕು" ಎಂದು ಅನಿಸಿಕೆ ಹಂಚಿಕೊಂಡರು.
ಐತಿಹಾಸಿಕ ದೇವಸ್ಥಾನ
ಅಂತಾರಾಷ್ಟ್ರೀಯ ಖ್ಯಾತಿಯ ಸಿಲಿಕಾನ್ ಸಿಟಿ ಬೆಂಗಳೂರಿನ ದಕ್ಷಿಣ ಭಾಗದ ಕೇಂಪೆಗೌಡ ನಗರದ ಗವಿಪುರ ಬಡಾವಣೆಯಲ್ಲಿ ಗವಿ ಗಂಗಾಧರೇಶ್ವರ ದೇವಸ್ಥಾನ ನೆಲೆಸಿದೆ. ಸುಮಾರು 1300 ವರ್ಷಗಳ ಹಿಂದೆ ಹೊಯ್ಸಳ ಕಾಲದಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಮಕರ ಸಂಕ್ರಾಂತಿ ದಿನದಂದು ಸಾವಿರಾರು ಜನ ಇಲ್ಲಿ ಆಗಮಿಸಿ ಶಿವಲಿಂಗದ ದರ್ಶನ ಪಡೆಯುತ್ತಾರೆ.