ನಡು ರಸ್ತೆಯಲ್ಲಿ ವ್ಯಕ್ತಿ ಮೇಲೆ ದಾಳಿ ಮಾಡಿದ್ದ ರೌಡಿ 'ಚಿನಾಲ್' ಗೆ ಬುದ್ಧಿ ಕಲಿಸಿದ ಪೊಲೀಸರು
ಬೆಂಗಳೂರು, ಆ. 21: ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ದೃಶ್ಯ ನೋಡಿದರೆ ಎಂಥವರಲ್ಲೂ ನಡುಕ ಹುಟ್ಟಿಸುತ್ತದೆ. ಸಾರ್ವಜನಿಕರು ಓಡಾಡುವ ಜಾಗದಲ್ಲಿ ವ್ಯಕ್ತಿಯನ್ನು ಕೆಳಗೆ ಬೀಳಿಸಿ ಮಚ್ಚು ಲಾಂಗುಗಳಿಂದ ಕೊಚ್ಚಿ ರೌಡಿ ಚಿನಾಲ್ ಅವಿನಾಶ್ ಗ್ಯಾಂಗ್ ಹೀಗೇ ವಿಕೃತಿ ಮೆರೆದಿತ್ತು. ಇದನ್ನು ನೋಡುತ್ತಿದ್ದ ಸಾರ್ವಜನಿಕರು ಪ್ರಶ್ನಿಸಲಾಗದೇ ಅಸಹಾಯಕರಾಗಿ ನಿಂತಿದ್ದರು. ಇದರ ಕಾರಣ ಕರ್ತ ಚಪ್ಪರ್ ರೌಡಿ ಚಿನಾಲ್ ಅವಿನಾಶ್ಗೆ ಕೊನೆಗೂ ಪೊಲೀಸರೇ ಸರಿಯಾಗಿ ಬುದ್ಧಿ ಕಲಿಸಿದ್ದಾರೆ.
ಬೆಳ್ಳಂಬೆಳಿಗ್ಗೆ ರೌಡಿ ಚಿನಾಲ್ ಅವಿ ಕಾಲಿಗೆ ಗುಂಡು ಇಳಿಸಿ ಜೀವನ ಪರ್ಯಂತ ಕೊರಗುವಂತೆ ಮಾಡಿದ್ದಾರೆ. ಕಳೆದ ಇಪ್ಪತ್ತೆರಡು ದಿನಗಳ ಹಿಂದೆ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಇಸ್ರೋ ಲೇಔಟ್ನಲ್ಲಿ ಭೀಕರ ಕೃತ್ಯ ನಡೆದಿತ್ತು. ಹಾಡಹಗಲೇ ಬೈಕ್ನಲ್ಲಿ ಹೋಗುತ್ತಿದ್ದ ಮುನಿರಾಜು ಎಂಬ ವ್ಯಕ್ತಿಯನ್ನು ಕೆಳಗೆ ಬೀಳಿಸಿ ಮಚ್ಚು ಲಾಂಗುಗಳಿಂದ ಕೊಚ್ಚಿದ್ದರು. ಕಣ್ಣೆದುರು ಮಾರಣಾಂತಿಕ ಹಲ್ಲೆ ಮಾಡುತ್ತಿದ್ದ ರೌಡಿ ಶೀಟರ್ ಅವಿನಾಶ್ ಮತ್ತು ಗ್ಯಾಂಗ್ ಅನ್ನು ಪ್ರಶ್ನಿಸುವ ಧೈರ್ಯ ಸಾರ್ವಜನಿಕರು ತೋರಲಿಲ್ಲ. ಮಹಿಳೆ ಹಾಗೂ ಯುವತಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಅದೇ ಮಾರ್ಗದಲ್ಲಿ ಹೋಗುತ್ತಿದ್ದರು. ಈ ಭೀಕರ ಕೃತ್ಯ ನೋಡಿದರೂ ಏನೂ ಮಾಡದೇ ಅಸಹಾಯಕರಾಗಿದ್ದರು. ಮುನಿರಾಜು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಈ ಘಟನೆ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು.
(1/3)ಸಂಜಯ್ ನಗರ ಪೊಲೀಸರ ಮೇಲೆ ರೌಡಿ ಶೀಟರ್ ನಿಂದ ಹಲ್ಲೆ..
— oneindiakannada (@OneindiaKannada) August 21, 2021
ಪೊಲೀಸರಿಂದ ಆರೋಪಿ ಮೇಲೆ ಗುಂಡು ಹಾರಿಸಿ ಬಂಧನ ..
ಅವಿನಾಶ್ ಎಂಬ ರೌಡಿ ಶೀಟರ್ ಮೇಲೆ ಗುಂಡು ಹಾರಿಸಿ ಬಂಧನ..
ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.. #Bengaluru #Sanjaynagar pic.twitter.com/i1lAhHqDID
ಚಿನಾಲ್ ಅವಿನಾಶ್ಗೆ ಗುಂಡೇಟು: ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದ ಸಂಜಯ್ ನಗರ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದರು. ಗುಡ್ಡದ ಹಳ್ಳಿ ಸಮೀಪ ಆತ ಇರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಸಂಜಯ್ ನಗರ ಠಾಣೆ ಸಿಬ್ಬಂದಿ ಸಂತೋಷ್ ಹಾಗೂ ಇತರೆ ಸಿಬ್ಬಂದಿ ಚಪ್ಪರ್ ರೌಡಿ ಚಿನಾಲ್ ಅವಿನಾಶ್ನನ್ನು ಬಂಧಿಸಲು ಹೋದಾಗ ಮಚ್ಚಿನಿಂದ ಬೀಸಿದ್ದಾನೆ. ಶರಣಾಗುವಂತೆ ಎಷ್ಟೇ ಕೇಳಿದರೂ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದಾನೆ. ಈ ವೇಳೆ ಸಂಜಯ್ ನಗರ ಪೊಲೀಸ್ ಇನ್ಸ್ಪೆಕ್ಟರ್ ಸರ್ವೀಸ್ ಪಿಸ್ತೂಲಿನಿಂದ ಗುಂಡು ಹಾರಿಸಿದ್ದು, ಅವಿನಾಶ್ ಬಲ ಭಾಗದ ಮೊಣಕಾಲಿನ ಕೆಳಗೆ ಪೆಟ್ಟು ಬಿದ್ದು ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಾಯಾಳು ಸಂತೊಷ್ ಬಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನಾ ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಧಮೇಂದ್ರ ಕುಮಾರ್ ಮೀನಾ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸಂಜಯ್ ನಗರದಲ್ಲಿ ಕಳೆದ 22 ದಿನಗಳ ಹಿಂದೆ ಮುನಿರಾಜು ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಬೈಕ್ ನಿಂದ ಕೆಳಗೆ ಬೀಳಿಸಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ತಲೆ ಮರೆಸಿಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದಾಗ ದಾಳಿ ಮಾಡಿದ್ದು, ಪೊಲೀಸರು ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ಪ್ರಕರಣ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಹೆಬ್ಬಾಳ ಬಳಿ ಈತನಿರುವ ಮಾಹಿತಿ ಆಧರಿಸಿ ಬಂಧಿಸಲು ಹೋದಾಗ ಶೂಟೌಟ್ ನಡೆದಿದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಉತ್ತರ ವಿಭಾಗದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅವಿನಾಶ್ ಎಸಗಿರುವ ಮತ್ತಷ್ಟು ಕೃತ್ಯಗಳನ್ನು ಪತ್ತೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
Recommended Video
ಚಿನಾಲ್ ಅವಿನಾಶ್ ವಿರುದ್ಧ ಒಟ್ಟು ಐದು ಪ್ರಕರಣ ದಾಖಲಾಗಿವೆ. ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಯಲಹಂಕದಲ್ಲಿ ಕೊಲೆ ಯತ್ನ, ಹೆಬ್ಬಾಳದಲ್ಲಿ ಕೊಲೆ ಯತ್ನ ಹಾಗೂ ಹಲ್ಲೆ, ಸಂಜಯನಗರದಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ನೋಡೋಕೆ ಚಪ್ಪರ್ ತರ ಕಂಡ್ರೂ ಕಿರಾತಕ. ಸಂಜಯ ನಗರದಲ್ಲಿ ಕಳೆದ 22 ದಿನಗಳ ಹಿಂದೆ ಮಾಡಿದ್ದ ಕೃತ್ಯ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಗುಂಡೇಟು ತಿಂದು ಜೈಲು ಸೇರಿದ್ದಾನೆ.