ಜಯನಗರದಲ್ಲಿ ಪುರಂದರೋತ್ಸವ-2015, ಸಂಗೀತ ನೃತ್ಯೋತ್ಸವ
ಬೆಂಗಳೂರು, ಅಕ್ಟೋಬರ್, 10 : ಕರ್ನಾಟಕ ಸಂಗೀತ ಪಿತಾಮಹ, ದಾಸ ಸಾಹಿತ್ಯದ ಮೇರು ದಿಗ್ಗಜ ಪುರಂದರದಾಸರ 450ನೇ ಜನ್ಮೋತ್ಸವದ ಪ್ರಯುಕ್ತ ಸಂಗೀತ ಸಂಭ್ರಮ ಸಂಸ್ಥೆಯು ಅಕ್ಟೋಬರ್ 10ರ ಶನಿವಾರ ಮತ್ತು 11ರ ಭಾನುವಾರದಂದು ಜಯನಗರದ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಲ್ಲಿ ಪುರಂದರೋತ್ಸವ-2015 ಹಮ್ಮಿಕೊಂಡಿದೆ.
ಸತತವಾಗಿ ಎರಡು ದಿನ ನಡೆಯುವ ಪುರಂದರೋತ್ಸವ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಜರುಗಲಿದ್ದು, ಈ ಕಾರ್ಯಕ್ರಮದ ಜವಾಬ್ದಾರಿಯನ್ನು ಸಂಗೀತ ಸಂಭ್ರಮದ ನಿರ್ದೇಶಕಿಯಾದ ಪಿ. ರಮಾ ವಹಿಸಿಕೊಂಡಿದ್ದಾರೆ.[ಕ್ಯಾನ್ಸರಿಗೆ ಬಲಿಯಾದ ವೇಣು ವಾದಕ ಎನ್ ರಮಣಿ]
ಪುರಂದರೋತ್ಸವದ ಮೊದಲ ದಿನ ಅಕ್ಟೋಬರ್ 10ರ ಶನಿವಾರದಂದು ನವರತ್ನ ಮಾಲಿಕಾ ತಂಡದ 2000 ಕಲಾವಿದರು ಕರೌಕೆ (karaoke) ಸಂಗೀತದಲ್ಲಿ ಶ್ರೀನಿವಾಸ ಕಲ್ಯಾಣ ಕಥೆಯನ್ನು ಪ್ರಸ್ತುತ ಪಡಿಸಲಿದ್ದಾರೆ. ಎರಡನೇ ದಿನವಾದ ಭಾನುವಾರದಂದು 60 ಮಂದಿ ನೃತ್ಯ ಕಲಾವಿದರಿಂದ 6 ನೃತ್ಯಗಳು ಜರುಗಲಿದ್ದು, ಇವರು ಪ್ರಸಿದ್ಧ ಸಂಗೀತಗಾರರ ದನಿಗೆ ಹೆಜ್ಜೆ ಹಾಕಲಿದ್ದಾರೆ.
ಈ ನೃತ್ಯ ಸಂಭ್ರಮದಲ್ಲಿ ನೃತ್ಯಾಂತರ ತಂಡದ ಕಲಾವಿದರು ಒಡಿಸ್ಸಿ ನೃತ್ಯ ಪ್ರದರ್ಶಿಸಲಿದ್ದು, ಎರಡು ದಿನದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮಧುಲಿತಾ ಮಹೋಪಾತ್ರ 9972530600 ಸಂಪರ್ಕಿಸಬಹುದು.