ಡ್ರಗ್ ಡೀಲ್ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ತೆಲಗು ನಟ ತನೀಶ್ ಅಲ್ಲಾಡಿ!
ಬೆಂಗಳೂರು, ಮಾರ್ಚ್ 24 : ಮಾದಕ ಲೋಕಕ್ಕೂ ಹಾಗೂ ಸಿನಿಮಾ ರಂಗಕ್ಕೂ ಇರುವ ನಂಟು ಸದ್ಯಕ್ಕೆ ಬಿಡುವಂತೆ ಕಾಣುತ್ತಿಲ್ಲ. ಬಿಗ್ ಬಾಸ್ ಸ್ಪರ್ಧಿ ಮಸ್ತಾನ್ ಚಂದ್ರ ಮನೆ ಮೇಲೆ ದಾಳಿ ಮಾಡಿದ ಪ್ರಕರಣ ಇದೀಗ ಟಾಲಿವುಡ್ ಮೆಟ್ಟಿಲೇರಿದೆ. ಡ್ರಗ್ ಡೀಲ್ ಸಂಬಂಧ ತೆಲಗು ನಟ ತನೀಶ್ ಅಲ್ಲಾಡಿ ಬೆಂಗಳೂರು ಪೊಲೀಸರ ವಿಚಾರಣೆ ಎದುರಿಸಿದ್ದಾರೆ.
Recommended Video
ಮಸ್ತಾನ್ ಚಂದ್ರ ಬಂಧನಕ್ಕೆ ಒಳಗಾದ ಬಳಿಕ ನಿರ್ಮಾಪಕ ಶಂಕರೇಗೌಡ ಮನೆ ಮೇಲೆ ದಾಳಿ ನಡೆದಿತ್ತು. ಮಸ್ತಾನ್ ಚಂದ್ರ ವಿಚಾರಣೆ ವೇಳೆ ಟಾಲಿವುಡ್ ನಟ, ಬಿಗ್ ಬಾಸ್ ಸ್ಪರ್ಧಿ ತನೀಶ್ ಅಲ್ಲಾಡಿ ಹೆಸರು ಹೇಳಿದ್ದ. ಡ್ರಗ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಹಾಗೂ ಡ್ರಗ್ ಪೂರೈಕೆ ಮಾಡುತ್ತಿದ್ದ ಆರೋಪ ಎದುರಿಸುತ್ತಿದ್ದ ಚಿತ್ರ ನಿರ್ಮಾಪಕ ಶಂಕರೇಗೌಡ ಅವರ ಜತೆ ತನೀಶ್ ನಿಕಟ ಸಂಪರ್ಕ ಹೊಂದದ್ದ ಎಂಬ ಸಂಗತಿಯನ್ನು ಬಾಯಿಬಿಟ್ಟಿದ್ದಾನೆ.
ಈ ಮಾಹಿತಿ ಆಧರಿಸಿ ವಿಚಾರಣೆಗೆ ಹಾಜರಾಗುವಂತೆ ಗೋವಿಂದಪುರ ಪೊಲೀಸರು ಮಾರ್ಚ್ 13 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ನೋಟಿಸ್ ಹಿನ್ನೆಲೆಯಲ್ಲಿ ವಿಚಾರಣೆ ಎದುರಿಸಿದ್ದಾನೆ. ಇದನ್ನು ಉಲ್ಲೇಖಿಸಿ ತನೀಶ್ ಅಲ್ಲಾಡಿ ಸಾಮಾಜಿಕ ಜಾಲ ತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಎರಡು ವರ್ಷದ ಹಿಂದೆ ನಾನು ನಿರ್ಮಾಪಕ ಶಂಕರೇಗೌಡ ಅವರನ್ನು ಸಿನಿಮಾ ವಿಚಾರವಾಗಿ ಸಂಪರ್ಕಿಸಿದ್ದು ನಿಜ. ಬಿಗ್ ಬಾಸ್ ಸ್ಪರ್ಧೆ ಬಳಿಕ ಅವರನ್ನು ಭೇಟಿ ಮಾಡಿದ್ದೆ. ಸಿನಿಮಾ ವಿಚಾರವಾಗಿ ಮಾತುಕತೆ ನಡೆದಿತ್ತು. ಆದರೆ, ನಂತರ ಆ ಯೋಜನೆ ಸಫಲವಾಗಲಿಲ್ಲ. ಶಂಕರೇಗೌಡ ಹಾಗೂ ನಾನು ಸಿನಿಮಾ ವಿಚಾರವಾಗಿ ಸಂಪರ್ಕಿಸಿದ್ದೇನೆ ಹೊರತು ಡ್ರಗ್ ವಿಚಾರವಾಗಿ ಅಲ್ಲ. ಆದರೆ ಮಾಧ್ಯಮಗಳಲ್ಲಿ ನಾನೇ ದೊಡ್ಡ ಅಪರಾಧಿ ಎಂದು ಬಿಂಬಿಸುತ್ತಿದ್ದಾರೆ. ಅಗತ್ಯ ಬಿದ್ದರೆ ಮುಂದೆ ವಿಚಾರಣೆಗೆ ಕರೆಯುವುದಾಗಿ ಬೆಂಗಳೂರು ಪೊಲೀಸರು ಹೇಳಿದ್ದಾರೆ.
ಆದರೆ, ಪುನಃ ನನ್ನನ್ನು ಕರೆದಿಲ್ಲ. ಆದರೆ ಉದ್ದೇಶ ಪೂರ್ವಕವಾಗಿ ನನ್ನ ಹೆಸರನ್ನು ಮಾದಕ ವಸ್ತು ಪ್ರಕರಣದಲ್ಲಿತರಲಾಗುತ್ತಿದೆ ಎಂದು ತನೀಶ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.
ತನೀಶ್ ಅಲ್ಲಾಡಿ ಸಂಪರ್ಕಿಸಿದ್ದ ಚಿತ್ರ ನಿರ್ಮಾಪಕ ಶಂಕರೇಗೌಡ ಬಂಧನಕ್ಕೆ ಒಳಗಾಗಿದ್ದಾರೆ. ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ವಿಚಾರಣೆ ವೇಳೆ ತನೀಶ್ ಹೆಸರು ಮಾತ್ರವಲ್ಲದೇ, ಬೇರೆ ಚಿತ್ರ ನಟ - ನಟಿಯರ ಹೆಸರು ತಳಕು ಹಾಕಿಕೊಂಡಿದೆ.
ಬೆಂಗಳೂರಿನಲ್ಲಿ ಹೈಫೈ ಪಾರ್ಟಿ ಆಯೋಜಿಸುತ್ತಿದ್ದ ಶಂಕರೇಗೌಡ, ಒನ್ ಲವ್ ಕೋಡ್ ವರ್ಡ್ ಬಳಸಿ ಡ್ರಗ್ ಪೂರೈಕೆ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಶಂಕರೇಗೌಡ ಬಂಧನಕ್ಕೆ ಒಳಗಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ. ಇದೀಗ ತನೀಶ್ ಹೆಸರು ಕೂಡ ಕೇಳಿ ಬಂದಿದ್ದು, ಈ ಜಾಲದಲ್ಲಿ ಸಿಲಿಕಿದ್ದಾರೆ ಎನ್ನಲಾದ ಇತರರಿಗೂ ಇದೀಗ ಡ್ರಗ್ ಕಂಟಕ ಎದುರಾಗುವ ಲಕ್ಷಣ ಗೋಚರಿಸುತ್ತಿದೆ.