ಜೈಲಿನಿಂದ ಬಿಡುಗಡೆಯಾದ ರಾಗಿಣಿ ಜಡೇ ಮುನೇಶ್ವರ ಸ್ವಾಮಿಗೆ ಪೂಜೆ !
ಬೆಂಗಳೂರು, ಜನವರಿ 25: ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣದಲ್ಲಿ ಕೆಲ ತಿಂಗಳಿನಿಂದ ಜೈಲು ಸೇರಿದ್ದ ನಟಿ ರಾಗಿಣಿ ಸೋಮವಾರ ಬಿಡುಗಡೆಯಾಗಿದ್ದಾರೆ. ಸುಪ್ರೀಂಕೋರ್ಟ್ ನ ತೀರ್ಪಿನ ಅನ್ವಯ ಸ್ಥಳೀಯ ನ್ಯಾಯಾಲಯದಲ್ಲಿ ಜಾಮೀನಿನ ಷರತ್ತುಗಳನ್ನು ಪೂರೈಸಿದರು. ಈ ಹಿನ್ನೆಲೆಯಲ್ಲಿ ಬಿಡುಗಡೆಯ ಆದೇಶವನ್ನು ಜೈಲು ಅಧಿಕಾರಿಗಳಿಗೆ ರಾಗಿಣಿ ಪರ ವಕೀಲರು ಸಲ್ಲಿಸಿದರು.
ಆದೇಶ ಪ್ರತಿ ಸ್ವೀಕರಿಸಿದ ಕೂಡಲೇ ರಾಗಣಿ ಅವರನ್ನು ಜೈಲು ಅಧಿಕಾರಿಗಳು ಪರೀಕ್ಷಿಸಿ ಬಿಡಗುಡೆ ಮಾಡಿದರು. ಬಿಡುಗಡೆಯಾದ ಕೂಡಲೇ ಸಮೀಪದ ಜಡೇ ಮುನೇಶ್ವರ ಸ್ವಾಮಿ ದೇವಾಲಯಕ್ಕೆ ರಾಗಿಣಿ ಪೂಜೆ ಸಲ್ಲಿಸಿದರು. ಬಳಿಕ ತನ್ನ ತಂದೆ ಹಾಗೂ ತಾಯಿ ಜತೆಗೆ ಜೈಲು ಬಳಿ ಸೇರಿದ್ದ ಸಿನಿ ಗೆಳೆಯರೊಂದಿಗೆ ಕಾರಿನಲ್ಲಿ ಮನೆಗೆ ತೆರಳಿದರು.
ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂಕೋರ್ಟ್ ನಿಂದ ಜಾಮೀನು
ಇನ್ನು ರಾಗಿಣಿ ಬಿಡುಗಡೆಯಾಗಿ ಹೊರ ಬಂದರೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲಿಲ್ಲ. ವಕೀಲರ ಸಲಹೆ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಲು ರಾಗಿಣಿ ನಿರಾಕರಿಸಿದರು. ತನ್ನ ಪೋಷಕರ ಜತೆ ಕಾರಿನಲ್ಲಿ ಬೆಂಗಳೂರಿನತ್ತ ತೆರಳಿದರು. ನೂರು ನಲವತ್ತಕ್ಕೂಹೆಚ್ಚು ದಿನ ಜೈಲಿನಲ್ಲಿ ಕಳೆದಿದ್ದ ರಾಗಿಣಿ ಗಣರಾಜ್ಯೋತ್ಸವ ದಿನಕ್ಕೂ ಮುನ್ನ ದಿನ ಬಿಡುಗಡೆಯಾಗಿ ಮನೆ ಸೇರಿದ್ದು ವಿಶೇಷ.
ತಂದೆ ತಾಯಿಯನ್ನು ನೋಡಿದ ಕೂಡಲೇ ರಾಗಿಣಿ ಕಣ್ಣಾಲಿಗಳು ಒದ್ದೆಯಾಗಿದ್ದವು. ಅವರ ತಾಯಿ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. ರಾಗಿಣಿಯನ್ನು ಹಾರೈಕೆ ಮಾಡಿದ್ದ ಸಿಬ್ಬಂದಿಯನ್ನು ಖುಷಿಯಿಂದ ಮಾತನಾಡಿಸಿ ತೆರಳಿದರು ಎಂದು ಜೈಲು ಸಿಬ್ಬಂದಿ ತಿಳಿಸಿದರು. ಕಾಟನ್ ಪೇಟೆ ಠಾಣೆಯಲ್ಲಿ ಸಿಸಿಬಿ ಪೊಲೀಸರು ದಾಖಲಿಸಿದ್ದ ಡ್ರಗ್ ಡೀಲ್ ಪ್ರಕರಣದಲ್ಲಿ ರಾಗಿಣಿ ಬಂಧನಕ್ಕೆ ಒಳಗಾಗಿದ್ದರು. ಮನೆ ಶೋಧ ನಡೆಸಿದಾಗ ಡ್ರಗ್ ಸಿಕ್ಕಿತ್ತು. ವಾಟ್ಸಪ್ ನಲ್ಲಿ ಡ್ರಗ್ ಬಗ್ಗೆ ಪೆಡ್ಲರ್ ಗಳ ಜತೆ ಸಂಭಾಷಣೆ ನಡೆಸಿದ್ದ ಸಾಕ್ಷಾಧಾರಗಳು ಲಭ್ಯವಾಗಿದ್ದವು. ಸುದೀರ್ಘ ವಿಚಾರಣೆ ಎದುರಿಸಿದ್ದ ರಾಗಿಣಿಯನ್ನು ಸಿಸಿಬಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ರಾಗಿಣಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಜಾಮೀನು ಅರ್ಜಿ ವಿಚಾರಣೆ ವೇಳೆಯಲ್ಲಿಯೇ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ರಾಗಿಣಿ, ಸಂಜನಾ ಹೆಸರು ಉಲ್ಲೇಖಿಸಿ ನ್ಯಾಯಾಧೀಶರಿಗೆ ಕನ್ನಡದಲ್ಲಿಯೇ ಪತ್ರ ಬರೆದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣ ತೀವ್ರ ಚರ್ಚೆಗೆ ನಾಂದಿ ಹಾಡಿತ್ತು. ರಾಗಿಣಿ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋದರೂ ಸಿಕ್ಕಿರಲಿಲ್ಲ. ಬಳಿಕ ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಗಿಣಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಸತತ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತ್ತು. ಕಳೆದ ಶನಿವಾರ ನ್ಯಾಯಾಲಯದ ಷರತ್ತುಗಳನ್ನು ಪೂರೈಸಲಾಗದೇ ರಾಗಿಣಿ ಬಿಡುಗಡೆಯಾಗಿರಲಿಲ್ಲ.
Recommended Video
ಸೋಮವಾರ ಮೂರು ಲಕ್ಷ ರೂ. ಬಾಂಡ್ ಹಾಗೂ ಇಬ್ಬರ ಶ್ಯೂರಿಟಿಯ ಜಾಮೀನು ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಸೀನಪ್ಪ ಅವರು ಬಿಡುಗಡೆಗೆ ಸೂಚಿಸಿದರು. ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದಾಗ ಹಾಜರಾಗಬೇಕು. ಯವುದೇ ಸಾಕ್ಷಾಧಾರಗಳನ್ನು ನಾಶಪಡಿಸುವಂತಿಲ್ಲ ಎಂಬ ಸಾಮಾನ್ಯ ಷರತ್ತಗಳನ್ನು ರಾಗಿಣಿ ಪಾಲಿಸಬೇಕಿದೆ. ರಾಗಿಣಿ ಬಂಧನದ ವೇಳೆ ಜೈಲು ಸೇರಿದ್ದ ನಟಿ ಸಂಜನಾಗೆ ಅನಾರೋಗ್ಯದ ಕಾರಣದ ಮೇಲೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತು.