ನಾನು ಶಾಸಕ ಬೀದಿಗೆ ಬಂದಿದ್ದೇನೆ.. ದಯವಿಟ್ಟು ನನ್ನ ಕೈ ಹಿಡಿಯಿರಿ!
ಬೆಂಗಳೂರು, ನ. 20: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಎಂಎಲ್ಎ ಆಗಿರುವ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸ್ಥಿತಿ ಇದೀಗ ಮತ್ತಷ್ಟು ಅತಂತ್ರವಾಗಿದೆ. ಅಖಂಡ ಶ್ರೀನಿವಾಸಮೂರ್ತಿ ಅವರ ನಿವಾಸದ ಮೇಲೆ ನಡೆದ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಬಂಧಿಸಿ ಸಿಸಿಬಿ ವಿಚಾರಣೆಗೆ ನಡೆಸಿದೆ. ಆದರೆ ಸಂಪತ್ ರಾಜ್ ಅವರ ವಿಚಾರದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಅವರು ಇಟ್ಟಿರುವ ಬೇಡಿಕೆಯನ್ನು ಕಾಂಗ್ರೆಸ್ ನಾಯಕರು ಈಡೇರಿಸುವು ಹೋಗಲಿ, ಆ ಬಗ್ಗೆ ಚಕಾರ ಎತ್ತುತ್ತಿಲ್ಲ!
ದಾಳಿ ಆರೋಪ ಎದುರಿಸುತ್ತಿರುವವರು ಹಾಗೂ ದಾಳಿಗೆ ಒಳಗಾದವರು ಇಬ್ಬರೂ ಕಾಂಗ್ರೆಸ್ ಪಕ್ಷದವರೇ ಆಗಿದ್ದಾರೆ. ಹೀಗಾಗಿ ಅದು ಕಾಂಗ್ರೆಸ್ ಪಕ್ಷದಲ್ಲಿಯೇ ಸಮಸ್ಯೆ ತಂದಿಟ್ಟಿದೆ. ಈ ಎಲ್ಲ ವಿಚಾರಗಳಿಗೆ ಸಂಬಂಧಿಸಿದಂತೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಎದುರು ಮಾತನಾಡಿರುವ ಅವರು, ನನಗೆ ಇಲ್ಲಿಯವರೆಗೂ ಮಾಧ್ಯಮಗಳು ಮತ್ತು ಪೊಲೀಸ್ ಇಲಾಖೆ, ನ್ಯಾಯಲಯದಿಂದ ಸಿಕ್ಕಿದೆ. ನನ್ನ ಪ್ರಕರಣದಲ್ಲಿ ತಪ್ಪಿಸ್ಥರಿಗೆ ಶಿಕ್ಷೆ ಆಗಲಿ ಎಂದಿದ್ದಾರೆ.
ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಇಟ್ಟ ಪ್ರಕರಣ ಮಾಜಿ ಮೇಯರ್ ಸಂಪತ್ ರಾಜ್ ಜೈಲಿಗೆ
ಕಾಂಗ್ರೆಸ್ ಪಕ್ಷದಲ್ಲಿ ನನಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಬೆಂಬಲವಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೂ ಕೂಡ ಬೆಂಬಲ ಕೊಡಬೇಕು ಎಂದು ಮನವಿ ಮಾಡುತ್ತೇನೆ. ನಮ್ಮ ಮನೆಯನ್ನೇ ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ. ಹೀಗಾಗಿ ನಮ್ಮ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ನನಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಸಂಪತ್ ರಾಜ್ ಉಚ್ಛಾಟನೆ ಮಾಡಿ
ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿ ಅಂತ ನಮ್ಮ ನಾಯಕರಿಗೆ ಮನವಿ ಮಾಡಿದ್ದೇನೆ. ಆದರೆ ಇಲ್ಲಿಯವರೆಗೂ ಅವರನ್ನು ಉಚ್ಚಾಟನೆ ಮಾಡಿಲ್ಲ. ನ್ಯಾಯಲಯದಿಂದ ನನಗೆ ನ್ಯಾಯ ಸಿಕ್ಕಿದೆ. ಈಗಲೂ ಮಾಜಿ ಸಿಎಂ ಸಿದ್ದರಾಮಯ್ಯ, ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರು ನನಗೆ ನ್ಯಾಯ ಕೊಡಿಸುತ್ತಾರೆ ಎಂಬ ಭರವಸೆಯಿದೆ ಎಂದು ಅಖಂಡ ಶ್ರೀನಿವಾಸಮೂರ್ತಿ ಅವರು ಹೇಳಿದ್ದಾರೆ.
ನನಗೆ ಸಿದ್ದರಾಮಯ್ಯ ಶ್ರೀರಕ್ಷೆಯಿದೆ
ನಮ್ಮ ನಾಯಕ ಸಿದ್ದರಾಮಯ್ಯ ಅವರಿಂದ ನನಗೆ ನ್ಯಾಯ ಸಿಗುತ್ತದೆ. ಗಲಭೆಯಲ್ಲಿ ಮಾಜಿ ಸಚಿವರ ಕೈವಾಡ ಇರುವುದು ನನಗೆ ಗೊತ್ತಿಲ್ಲ. ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರು ನಮ್ಮ ಪಕ್ಕದ ಕ್ಷೇತ್ರದವರು. ಅವರೂ ನನಗೆ ಸಹಕಾರ ಕೊಡಬೇಕು. ನನಗೆ ಸಹಾಯ ಮಾಡಿ ಎಂದು ಅವರ ಬಳಿಯೂ ನಾನು ಮನವಿ ಮಾಡುತ್ತೇನೆ, ನನಗೆ ಸಿದ್ದರಾಮಯ್ಯ, ಜಮೀರ್ ಶ್ರೀರಕ್ಷೆ ಇದೆ ಎಂದು ಪದೇ ಪದೇ ಇಬ್ಬರೂ ನಾಯಕರ ಹೆಸರನ್ನು ಅಖಂಡ ಶ್ರೀನಿವಾಸಮೂರ್ತಿ ಅವರು ಹೇಳಿದ್ದಾರೆ.
ನಾಳೆ ಡಿಕೆಶಿ ಭೇಟಿ ಮಾಡುತ್ತೇವೆ
ಇನ್ನು ಪಕ್ಷದಲ್ಲಿನ ಕೆಲ ನಾಯಕರು ನನ್ನನ್ನು ಬೆಂಬಲಿಸುತ್ತಿಲ್ಲ ನಿಜ. ನಾನು ಶಾಸಕ ಬೀದಿಗೆ ಬಂದಿದ್ದೇನೆ. ನನ್ನ ಕೈ ಹಿಡಿಯಿರಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ಪಕ್ಷದ ನಾಯಕರ ಮೇಲೆ ನಂಬಿಕೆ ಇದೆ. ಸಹಕಾರ ಕೊಟ್ಟೆ ಕೊಡುತ್ತಾರೆ. ಡಾ. ಜಿ. ಪರಮೇಶ್ವರ್ ಅವರು ಇಲ್ಲಿಯವರೆಗೂ ನನ್ನೊಂದಿಗೆ ಏನೂ ಮಾತನಾಡಿಲ್ಲ. ನಾಳೆ ಶನಿವಾರ (ನ.21) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡುತ್ತೇನೆ ಎಂದಿದ್ದಾರೆ.
ಹೈಕಮಾಂಡ್ಗೆ ಪತ್ರ
ಭೇಟಿ ಮಾಡಿ ನಾನು ಮನವಿ ಮಾಡಿದ ಬಳಿಕವೂ ಸಹಕಾರ ಕೊಡದೆ ಇದ್ದರೆ ನಾನು ದೆಹಲಿಗೆ ಪತ್ರ ಬರೆಯುವ ಬಗ್ಗೆ ಚಿಂತನೆ ಮಾಡುತ್ತೇನೆ. ಅಂತಿಮವಾಗಿ ಹೈಕಮಾಂಡ್ಗೆ ಎಲ್ಲವನ್ನೂ ತಿಳಿಸುತ್ತೇನೆ. ಇಷ್ಟೆಲ್ಲ ಆದರೂ ನನ್ನನ್ನು ಯಾವ ಕಾರಣಕ್ಕೆ ಕೆಲ ನಾಯಕರು ಬೆಂಬಲಿಸುತ್ತಿಲ್ಲ ಅನ್ನೋದು ಗೊತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳಬೇಕು ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿಕೆ ನೀಡಿದ್ದಾರೆ.
Recommended Video