ಅಂಬೇಡ್ಕರ್ ಅಭಿವೃದ್ದಿ ನಿಗಮ ಕಚೇರಿ ವಿರುದ್ಧ ಪ್ರತಿಭಟನೆ
ಬೆಂಗಳೂರು, ಜನವರಿ 01: ಭ್ರಷ್ಟಾಚಾರದ ಕೂಪವಾಗಿರುವ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮದ ವಿರುದ್ದ ಜನವರಿ 7 ರಂದು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸಮತಾ ಸೈನಿಕ ದಳದ ಪದಾಧಿಕಾರಿಗಳು ತಿಳಿಸಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮತಾ ಸೈನಿಕ ದಳದ ರಾಮನಗರ ಜಿಲ್ಲಾಧ್ಯಕ್ಷ ಡಾ.ಜಿ ಗೋವಿಂದಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಬನಶಂಕರಿ ನಾಗು ಮತ್ತಿತರರು ಮಾತನಾಡಿ, ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮವಾಗಿ ಅಸಿತ್ವಕ್ಕೆ ಬಂದ ಸಂಸ್ಥೆಯು ಇದೀಗ ಐದಾರು ನಿಗಮಗಳಾಗಿ ವಿಭಜಿಸಲ್ಪಟ್ಟಿದೆ. ಮೂಲ ಸಂಸ್ಥೆಯಾದ ಡಾ ಬಿ.ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮ ಭ್ರಷ್ಟಾಚಾರಗಳ ಕೂಪವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಕೆನರಾ ಬ್ಯಾಂಕ್ ಕಲ್ಕೆರೆ ಶಾಖೆಯಲ್ಲಿ 6 ಕೋಟಿ ರೂಗಳಿಗೂ ಹೆಚ್ಚು ಹಣವನ್ನು ಫಲಾನುಭವಿಗಳಿಗೆ ನೀಡದೆ ಅಂಬೇಡ್ಕರ್ ನಿಗಮದ ಅಧಿಕಾರಿಗಳೇ ಗುಳಂ ಮಾಡಿದ್ದಾರೆ. ಈ ಬಗ್ಗೆ ನಿಗಮದ 9 ಅಧಿಕಾರಿಗಳು ಸೇವೆಯಿಂದ ಅಮಾನತ್ತುಗೊಂಡಿದ್ದಾರೆ. ಇದು ನಿಗಮದ ಭ್ರಷ್ಟಾಚಾರವನ್ನು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದರು.
ಈ ಹಿನ್ನಲೆಯಲ್ಲಿ ಜನವರಿ 7 ರಂದು ಅಂಬೇಡ್ಕರ್ ನಿಗಮದ ಭ್ರಷ್ಟಾಚಾರದ ಬಗ್ಗೆ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ನಿಗಮದ ಪ್ರಧಾನ ಕಚೇರಿಯ ಮುಂದೆ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಡಾ ಎಂ ವೆಂಕಟಸ್ವಾಮಿ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.