ಸಮರ್ಥನಂ ಸಂಸ್ಥೆ ಟಿಇ ಕನೆಕ್ಟಿವಿಟಿ ವಾಕಥಾನ್ ಗೆ ಅಪೂರ್ವ ಬೆಂಬಲ
ಬೆಂಗಳೂರು ಡಿಸೆಂಬರ್ 8 2018: ಸಮರ್ಥನಂ ಸಂಸ್ಥೆ ಟಿ ಇ ಕನೆಕ್ಟಿವಿಟಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ 14 ನೇ "ಟಿಇ ಕನೆಕ್ಟಿವಿಟಿ ಬೆಂಗಳೂರು ವಾಕಥಾನ್" ಗೆ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳಿಂದ ಅಭೂತಪೂರ್ವ ಬೆಂಬಲ ದೊರೆಯಿತು.
ಬೆಂಗಳೂರಿನ ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂನಲ್ಲಿ ನಡೆದ ಈ ವಾಕಥಾನ್ ನಲ್ಲಿ ಸಾವಿರಕ್ಕೂ ಹೆಚ್ಚು ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ವಿಕಲಚೇತನರಿಗೆ ಸಮರ್ಥನಂ ಟ್ರಸ್ಟ್ ಬೆಂಗಳೂರು ವಾಕಥಾನ್
ಕಾರ್ಪೋರೇಟ್ ಸಿಬ್ಬಂದಿ, ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳು, ಯುವಕರು ಮತ್ತು ವೃದ್ದರು, ವಿದ್ಯಾರ್ಥಿಗಳು, ವಿಕಲಚೇತನರು ಸೇರಿದಂತೆ ಹಲವು ಕ್ಷೇತ್ರಗಳ ಸಾವಿರಕ್ಕೂ ಹೆಚ್ಚು ಜನರು ವಿಕಲಚೇತನರಿಗೆ ಡಿಜಿಟಲ್ ಸೇರ್ಪಡೆಯ ಉದ್ದೇಶದ ಈ ವಾಕಥಾನ್ ನಲ್ಲಿ ಹೆಜ್ಜೆ ಹಾಕಿದರು.
ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂನಲ್ಲಿ ವಾಕಥಾನ್ ಗೆ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹಸಿರು ನಿಶಾನೆ ತೋರಿಸಿದರು. ಜಯನಗರದ 4 ನೇ ಬ್ಲಾಕ್, 3 ನೇ ಬ್ಲಾಕ್ ಸೌತ್ ಎಂಡ್ ರಸ್ತೆಗಳಲ್ಲಿ ಸಾಗಿದ ವಾಕಥಾನ್ ಮತ್ತೆ ಸ್ಟೇಡಿಯಂ ಗೆ ಬಂದು ತಲುಪಿತು.
ಮೇಯರ್ ಗಂಗಾಂಬಿಕೆ ಅವರಿಂದ ಚಾಲನೆ
ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಈ ಮೆಗಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಯನಗರ ಶಾಸಕಿ ಸೌಮ್ಯ ರೆಡ್ಡಿ, ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಅಂಗವಿಕಲರ ಸಂಸ್ಥೆಯಾದ ಸಮರ್ಥನಂ ಟ್ರಸ್ಟ್ ನ ಸಂಸ್ಥಾಪಕ ವ್ಯವಸ್ಥಾಪಕ ಟ್ರಸ್ಟಿಯಾಗಿರುವ ಜಿ ಕೆ ಮಹಂತೇಶ್, ಭೈರಸಂದ್ರ ವಾರ್ಡ್ನ ಕಾರ್ಪೋರೇಟರ್ ನಾಗರಾಜು, ಟಿಇ ಕನೆಕ್ಟಿವಿಟಿ ಕಮ್ಯೂನಿಟಿ ಅಂಬಾಸಡರ್ ರಾಜ್ ರಾಜ್ಕುಮಾರ್, ಟಿಇ ಕನೆಕ್ಟಿವಿಟಿ ಇಂಡಿಯಾದ ನಿರ್ದೇಶಕ ಜೋಯ್ದೀಪ್ ನಾಗ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದೇ ವೇಳೆ ವಿಕಲಚೇತನರು ಡಿಜಿಟಲ್ ಸಾಧನಗಳಾದ ಸ್ಮಾರ್ಟ್ ಫೋನ್ ಹಾಗೂ ಅವುಗಳಲ್ಲಿನ ಎಲ್ಲಾ ಆಪ್ಗಳನ್ನು ಸುಲಭವಾಗಿ ಉಪಯೋಗಿಸಲು ಅನುವು ಮಾಡಿಕೊಡುವ ಸೊಸೈಟಿ ಜನರಲ್ ಹೊರತಂದಿರುವ ಕನೆಕ್ಟಿಬಲ್ ಆಪ್ ನ್ನು ಅನಾವರಣಗೊಳಿಸಲಾಯಿತು.
ವಿಕಲಚೇತನರ ಏಳಿಗೆಗಾಗಿ ಸಮರ್ಥನಂ ಟ್ರಸ್ಟ್
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಸಮರ್ಥನಂ ಟ್ರಸ್ಟ್ ವಿಕಲಚೇನತರ ಅಭಿವೃದ್ದಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇಂತಹ ಕಾರ್ಯಕ್ರಮಗಳು ವಿಕಲಚೇತನರ ಜೀವನದಲ್ಲಿ ಹೊಸ ಸಾಧ್ಯತೆಗಳನ್ನು ಅನುವು ಮಾಡಿಕೊಡಲಿವೆ ಎಂದರು.
ಸಮರ್ಥನಂನ ಸಂಸ್ಥಾಪಕ ವ್ಯವಸ್ಥಾಪನಾ ಟ್ರಸ್ಟಿ ಮಹಾಂತೇಶ್ ಜಿಕೆ ಅವರು ಮಾತನಾಡಿ, ಈ ವರ್ಷದ ವಾಕಥಾನ್ನ ಥೀಮ್ ಡಿಜಿಟಲ್ ಸೇರ್ಪಡೆ' ಎಂಬುದನ್ನು ಘೋಷಿಸಲು ನಮಗೆ ಸಂತಸವೆನಿಸುತ್ತಿದೆ. ಈ ಡಿಜಿಟಲ್ ಕ್ಷೇತ್ರ ಜನರ ಜೀವನದಲ್ಲಿ ಬಹುದೊಡ್ಡ ಬದಲಾವಣೆಯನ್ನು ತಂದಿದೆ. ಈ ನಿಟ್ಟಿನಲ್ಲಿ ಸಮರ್ಥನಂ ಐಟಿ ಸಂವಹನ ಕ್ಷೇತ್ರದೊಂದಿಗೆ ಕೆಲಸ ಮಾಡುತ್ತಿದ್ದು, ಆರಂಭದಿಂದಲೇ ವಿಕಲಚೇತನರನ್ನು ಇದರಲ್ಲಿ ಸೇರ್ಪಡೆ ಮಾಡಿಕೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ಮತ್ತು ವೇದಿಕೆಗಳು ಆರಂಭವಾಗಿದ್ದು, ಸಮರ್ಥನಂನಲ್ಲಿನ ಪ್ರತಿಯೊಬ್ಬ ಫಲಾನುಭವಿಯೂ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುವಂತಾಗಿದೆ.
ಸಮಾನ ಸಂಪರ್ಕ ಕಲ್ಪಿಸುವ ಕಾರ್ಯ
"ನಾವು ಸಮಾನ ಸಂಪರ್ಕವನ್ನು ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕಾರ್ಯವನ್ನು ಮುಂದುವರಿಸುತ್ತೇವೆ ಮತ್ತು ಈ ಕೈಂಕರ್ಯದಲ್ಲಿ ಅಂದರೆ ಎಲ್ಲರಿಗೂ ಸಮಾನ ಅವಕಾಶ ಲಭಿಸಬೇಕೆಂಬ ಈ ಅಭಿಯಾನದಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಕೋರುತ್ತೇವೆ. ನಾವು ಕೈಗೊಂಡಿರುವ ಈ ಕಾರ್ಯಕ್ರಮದಲ್ಲಿ ಹಲವಾರು ಕಂಪನಿಗಳು ಕೈಜೋಡಿಸಿವೆ. ಈ ಅಭಿಯಾನದ ಟೈಟಲ್ ಪ್ರಾಯೋಜಕರು ನೀಡುತ್ತಿರುವ ಕೊಡುಗೆ ಮತ್ತು ಡಿಜಿಟಲ್ ಸೇರ್ಪಡೆಯನ್ನು ಪ್ರೋತ್ಸಾಹಿಸುತ್ತಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ'' ಎಂದು ಸಮರ್ಥನಂನ ಸಂಸ್ಥಾಪಕ ವ್ಯವಸ್ಥಾಪನಾ ಟ್ರಸ್ಟಿ ಮಹಾಂತೇಶ್ ಜಿಕೆ ಹೇಳಿದರು.
ಸುಸ್ಥಿರ ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದು
"ಈ ಸಂದರ್ಭದಲ್ಲಿ ಕನೆಕ್ಟಿಬಲ್ ಅನ್ನು ಪ್ರದರ್ಶಿಸುತ್ತಿರುವುದಕ್ಕೆ ಸಂತಸವೆನಿಸುತ್ತಿದೆ. ಏಕೆಂದರೆ, ನಮ್ಮ ಇತ್ತೀಚಿನ ಆವಿಷ್ಕಾರವೂ ಸಹ ಕನೆಕ್ಟಿಬಲ್ ಆಗಿದೆ. ಈ ಸಂಪರ್ಕ ಎಂಬುದು ಸಮಾಜದಲ್ಲಿರುವ ವಿಕಲಚೇತನ ಸಮುದಾಯವನ್ನು ಪರಸ್ಪರ ಸಂಪರ್ಕಿಸುವಂತೆ ಮಾಡುತ್ತದೆ. ಅಂದರೆ, ಉದ್ಯಮದ ಪರಿಣತರು, ಸೇವೆಗಳನ್ನು ಪಡೆಯಲು ನೆರವಾಗುವುದು, ಸುಸ್ಥಿರ ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದು ಸೇರಿದಂತೆ ಮತ್ತಿತರೆ ಮಾಹಿತಿಗಳನ್ನು ನೀಡಲು ಈ ಕನೆಕ್ಟಿವಿಟಿ ನೆರವಾಗುತ್ತದೆ'' ಎಂದರು.
ವಿಕಲಚೇತನರಿಗಾಗಿ ಡಿಜಿಟಲ್ ಉತ್ಪನ್ನ
ಟಿಇ ಕಮ್ಯೂನಿಟಿ ಅಂಬಾಸಿಡರ್ ಆಗಿರುವ ರಾಜ್ ರಾಜ್ಕುಮಾರ್ ಅವರು ಡಿಜಿಟಲ್ ಸೇರ್ಪಡೆ ಕುರಿತು ವಿವರ ನೀಡುತ್ತಾ, "2008 ರಲ್ಲಿ ಡಿಜಿಟಲ್ ಆಡಿಯೋ ಲ್ಯಾಬ್ ಆರಂಭಿಸುವ ಮೂಲಕ ನಾವು ಸಮರ್ಥನಂ ಜತೆಗೆ ಸಹಯೋಗವನ್ನು ಆರಂಭಿಸಿದ್ದೇವೆ. ಇದಲ್ಲದೇ, ಐಟಿ ಸೇವೆಗಳು ಸೇರಿದಂತೆ ಮತ್ತಿತರೆ ಐಟಿ ಸಂಬಂಧಿತ ವೃತ್ತಿಪರ ತರಬೇತಿಗಳನ್ನು ಜಂಟಿ ಸಹಯೋಗದಲ್ಲಿ ನೀಡುತ್ತಿದ್ದೇವೆ. ಇದೀಗ ನಾವು ವಿಕಲಚೇತನರನ್ನು ಸಬಲೀಕರಣಗೊಳಿಸುವಂತಹ ಡಿಜಿಟಲ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಸ್ಟಾರ್ಟಪ್ಗಳಿಗೆ ನೆರವು ನೀಡುತ್ತಿದ್ದೇವೆ'' ಎಂದರು.