ಸೇಫ್ ಸಿಟಿ ಪ್ರಾಜೆಕ್ಟ್ ಟೆಂಡರ್ ನಲ್ಲಿ ಎಲ್ಲವೂ ಲೀಗಲ್ : ಹೇಮಂತ್ ನಿಂಬಾಳ್ಕರ್ ಸ್ಪಷ್ಟನೆ
ಬೆಂಗಳೂರು, ಡಿಸೆಂಬರ್ 27: ನಿರ್ಭಯ ಸುರಕ್ಷತಾ ನಿಧಿ ಬಳಕೆ ಸಂಬಂಧ ರೂಪಿಸಿರುವ ಸೇಫ್ ಸಿಟಿ ಯೋಜನೆ ಕುರಿತು ಕೇಳಿ ಬಂದಿದ್ದ ಆರೋಪ ಕುರಿತು ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಭಾನುವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಸೇಫ್ ಸಿಟಿ ಯೋಜನೆ ಟೆಂಡರ್ ಆಹ್ವಾನ ಮತ್ತು ಪರಿಶೀಲನಾ ಸಮಿತಿ ಅಧ್ಯಕ್ಷರು ಆಗಿರುವ ನಿಂಬಾಳ್ಕರ್ ತಮ್ಮ ಮೇಲಿನ ಆರೋಪಗಳು ಸತ್ಯಕ್ಕೆ ದೂರವಾದುದು ಎಂದು ಹೇಳಿದ್ದಾರೆ.
ನಿರ್ಭಯಾ ನಿಧಿ ಟೆಂಡರ್ ಅಕ್ರಮ: ಐಪಿಎಸ್ ಅಧಿಕಾರಿಗಳ ನಡುವೆ ಡಿಶುಂ ಡಿಶುಂ !
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ನಿಂಬಾಳ್ಕರ್ ಅವರು, ಸೇಫ್ ಸಿಟಿ ಯೋಜನೆ ಟೆಂಡರ್ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿ ನಾನು ಸ್ಪಷ್ಟನೆ ನೀಡುತ್ತಿದ್ದೇನೆ. ಕಳೆದ ಎರಡು ದಿನಗಳಿಂದ ನನ್ನ ಮೇಲೆ ಆರೊಪ ಹೊರಿಸಿ ಸಾಮಾಜಿಕ ಜಾಲ ತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಟೆಂಡರ್ ಎಂಬುದು ಪಾರದರ್ಶಕವಾದ ಪ್ರಕ್ರಿಯೆ . ವಿವಿಧ ವಿಭಾಗಗಳಲ್ಲಿ ಟೆಂಡರ್ ಕುರಿತ ಮೂರು ಪ್ರತ್ಯೇಕ ಕಮಿಟಿಗಳಿವೆ. ಇದರ ಬೆನ್ನಲ್ಲೇ ನಾನು ಬರೆದ ಪತ್ರ ಹೊರಗೆ ಬಂದ ನಂತರ ನನ್ನ ಮೇಲೆ ಆರೋಪ ಹೊರಿಸಲಾಗಿದೆ. ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಬಿಡ್ ಮಾಡಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೇಫ್ ಸಿಟಿ ಯೋಜನೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಬಿಇಎಲ್ ಪ್ರಧಾನಿಗಳ ಕಚೇರಿಗೆ ಪತ್ರ ಬರೆದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಸೇಫ್ ಸಿಟಿ ಯೋಜನೆ ಸಂಬಂಧ ಕರೆದಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಮೂರು ಕಂಪನಿಗಳು ಮಾತ್ರ ಭಾಗವಹಿಸಿದ್ದವು. ಟೆಕ್ನಿಕಲ್ ಅರ್ಹತೆ ಆಧಾರದ ಮೇಲೆ ಕೆಲವು ಕಂಪನಿಗಳು ಅನರ್ಹತೆಗೊಂಡಿವೆ. ಜೂ. 20 ರಂದು ನಡೆದ ಟೆಂಡರ್ ಸ್ಕೂಟನಿಯಲ್ಲಿ ಮೂರು ಕಂಪನಿಗಳನ್ನು ಅಂತಿಮಗೊಳಿಸಲಾಗಿತ್ತು. ಅದರಲ್ಲಿ ಬಿಇಎಲ್ ಕೂಡ ಇತ್ತು. ಎರಡನೇ ಸುತ್ತಿನ ಟೆಂಡರ್ ಕರೆದು ಅದನ್ನು ರದ್ದು ಪಡಿಸಲಾಗಿತ್ತು. ಚೀನಾ ವಸ್ತುಗಳನ್ನು ತಿರಸ್ಕರಿಸುವ ಉದ್ದೇಶದಿಂದ ಎರಡನೇ ಟೆಂಡರ್ ರದ್ದು ಮಾಡಲಾಗಿದೆ. ಮೂರನೇ ಸುತ್ತಿನ ಟೆಂಡರ್ ನವೆಂಬರ್ ನಲ್ಲಿ ಕರೆದಿದ್ದು, ಜನವರಿ 8 ರ ವರೆಗೂ ಚಾಲ್ತಿಯಲ್ಲಿದೆ. ಯಾರು ಬೇಕಾದರು ಈ ಟೆಂಡರ್ ನಲ್ಲಿ ಸ್ಪರ್ಧಿಸಬಹುದು ಎಂದು ನಿಂಬಾಳ್ಕರ್ ಹೇಳಿದ್ದಾರೆ. ಈ ಮೂಲಕ ಈಗಲೂ ಯಾವ ಕಂಪನಿ ಬೇಕಾದರೂ ಸೇಫ್ ಸಿಟಿ ಯೋಜನೆ ಸಂಬಂಧ ಕರೆದಿರುವ ಟೆಂಡರ್ ನಲ್ಲಿ ಅರ್ಹ ಕಂಪನಿಗಳು ಪಾಲ್ಗೊಳ್ಳಬಹುದು ಎಂಬ ಸಂದೇಶ ರವಾನಿಸಿದ್ದಾರೆ. ಮುಕ್ತ ಅವಕಾಶ ಇರುವುದರಿಂದ ಇದರಲ್ಲಿ ಬೇರೆ ಕಂಪನಿಗೆ ಸಹಾಯ ಮಾಡುವ ಪ್ರಶ್ನೆಯೇ ಉದ್ಭವಿಸುದಿಲ್ಲ ಎಂಬುದನ್ನು ಪರೋಕ್ಷವಾಗಿ ಸಾರಿ ಹೇಳಿದ್ದಾರೆ.
ಬಿಡ್ಡಿಂಗ್ ಪಾರದರ್ಶಕವಾಗಿ ನಡೆಯುವ ಪ್ರಕ್ರಿಯೆ. ವಿವಿಧ ಸಮಿತಿಗಳ ಅಡಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುವುದರಿಂದ ಯಾವುದೇ ರೀತಿಯ ಗೊಂದಲಗಳಿಗೆ ಇಲ್ಲಿ ಅವಕಾಶವಿಲ್ಲ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡರಂತೆ. ಸೋಶಿಯಲ್ ಮೀಡಿಯಾದಲ್ಲಿ ಅದು ಆಗುತ್ತಿದೆ. ವೈಯಕ್ತಿಕ ದ್ವೇಷಗಳಿಗೆ ನಾನು ಉತ್ತರ ಕೊಡುವುದು ಸಮಂಜಸವಲ್ಲ. ಈ ಸಂಬಂಧ ವಿಚಾರಣೆ ಸಮಿತಿ ರಚನೆಯಾಗಿದೆ. ಸಮಿತಿ ಅದನ್ನು ನಿರ್ಧಾರ ಮಾಡುತ್ತದೆ ಎಂದು ಹಿರಿಯ ಐಪಿಎಸ್ ಅಧಿಕಾರಿ, ಸೇಫ್ ಸಿಟಿ ಯೋಜನೆಯ ಟೆಂಟರ್ ಆಹ್ವಾನ ಮತ್ತು ಪರಿಶೀಲನಾ ಸಮಿತಿ ಅಧ್ಯಕ್ಷ ಹೇಮಂತ್ ನಿಂಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಹಿನ್ನೆಲೆ:
Recommended Video
ನಿರ್ಭಯ ನಿಧಿ ಸೇಫ್ ಸಿಟಿ ಯೋಜನೆ ಟೆಂಡರ್ ದೆಹಲಿ ಮೂಲದ ಕಂಪನಿಗೆ ಟೆಂಡರ್ ನೀಡಿರುವ ಸಂಬಂಧ ಗೃಹ ಇಲಾಖೆ ಕಾರ್ಯದರ್ಶಿ ಹೆಸರಿನಲ್ಲಿ ಕರೆ ಮಾಡಿ ದಾಖಲೆ ಕೇಳಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಎಂದು ಟೆಂಡರ್ ಆಹ್ವಾನ ಮತ್ತು ಪರಿಶೀಲನಾ ಸಮಿತಿ ಅಧ್ಯಕ್ಷರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಪತ್ರ ಬರೆದಿದ್ದರು. ಈ ಪತ್ರ ಬಹಿರಂಗವಾದ ಹಿನ್ನೆಲೆಯಲ್ಲಿ ನಿರ್ಭಯ ನಿಧಿಯಲ್ಲಿ ನಡೆಯುತ್ತಿದ್ದ ಅಕ್ರಮವನ್ನು ತಡೆಯಲು ಪ್ರಯತ್ನಿಸಿದ್ದೇನೆ. ಈ ಕುರಿತು ನಾನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಪ್ರಮುಖ ಪ್ರಕರಣವೊಂದರ ಆರೋಪಿಯಾಗಿರುವ ಅಧಿಕಾರಿಯನ್ನು ಟೆಂಡರ್ ಪರಿಶೀಲನಾ ಸಮಿತಿಯಿಂದ ದೂರ ಇಡಬೇಕೆಂದು ಪತ್ರ ಬರೆದಿದ್ದೇನೆ ಎಂದು ಗೃಹ ಇಲಾಖೆ ಕಾರ್ಯದರ್ಶಿ, ಹಿರಿಯ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಇದು ಇಬ್ಬರು ಐಪಿಎಸ್ ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ನಾಂದಿ ಹಾಡಿತ್ತು. ಇದೀಗ ಸದ್ದಿಗೋಷ್ಠಿಯಲ್ಲಿ ನಿಂಬಾಳ್ಕರ್ ಸ್ಪಷ್ಟನೆ ನೀಡಿದ್ದು, ಮುಂದೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.