ಗಾಂಜಾ ಮಾರಾಟದಲ್ಲಿ ಸಿಕ್ಕಿಬಿದ್ದ ಇಂಜಿನಿಯರಿಂಗ್ ಪದವೀಧರೆ ಹಿಂದಿತ್ತು "ಲವ್ ಕಹಾನಿ"
ಬೆಂಗಳೂರು, ಜೂನ್ 16: ಜಗತ್ತಿನಲ್ಲಿ ಎಂತೆಂಥ ಪ್ರೇಮಕಥೆಗಳನ್ನೋ ಕೇಳಿರುತ್ತೇವೆ, ಕಂಡಿರುತ್ತೇವೆ. ತನ್ನ ಪ್ರೇಮಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂದು ಜೀವವನ್ನೇ ಬಿಟ್ಟ ಎಷ್ಟು ಉದಾಹರಣೆ ಸಿಗುವುದಿಲ್ಲ ಹೇಳಿ...
ಬೆಂಗಳೂರಿನಲ್ಲಿ ಬುಧವಾರ ಪೊಲೀಸರ ಕೈಗೆ ಸಿಕ್ಕಿಬಿದ್ದ ಇಂಜಿನಿಯರಿಂಗ್ ಪದವೀಧರೆ ರೇಣುಕಾ ಗಾಂಜಾ ಮಾರಾಟದ ಹಿಂದೆ ಇಂಥದ್ದೇ ಲವ್ ಕಹಾನಿಯಿದೆ. ಇಂಜಿನಿಯರಿಂಗ್ ಓದಿದ್ದರೂ ತನ್ನ ಪ್ರಿಯಕರನಿಗಾಗಿ ಓದು, ಮನೆ ಎಲ್ಲವನ್ನೂ ಬಿಟ್ಟು ನಗರದಲ್ಲಿ ಬಂದು ಗಾಂಜಾ ಮಾರಾಟಕ್ಕೆ ಇಳಿದಿದ್ದ ಈ ಯುವತಿ ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.
ಕಾರಿನ ಸ್ಟೆಪ್ನಿಯಲ್ಲಿ ಗಾಂಜಾ ಇಟ್ಟು ಡೀಲ್ ಮಾಡಲು ಹೋಗಿ ಸಿಕ್ಕಿಬಿದ್ದ !
ಚೆನ್ನೈನ ಕಾಲೇಜಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದ ರೇಣುಕಾ, ಸಿದ್ಧಾರ್ಥ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮದುವೆ ವಿಷಯ ಬಂದಾಗ, ಸಿದ್ಧಾರ್ಥ್ ರೇಣುಕಾಳಿಗೆ ತನ್ನ ಹೊಸ ಬಿಸಿನೆಸ್ ಬಗ್ಗೆ ಹೇಳಿಕೊಂಡಿದ್ದ.
"ಹೊಸ ಬಿಸಿನೆಸ್ ಶುರು ಮಾಡಿದ್ದೀನಿ. ಅದರಿಂದ ತುಂಬ ಲಾಭವಿದೆ. ಹಣ ಗಳಿಸಿ ನಂತರ ಮದುವೆಯಾಗೋಣ..." ಎಂದು ಪ್ರಿಯಕರ ಸಿದ್ಧಾರ್ಥ ರೇಣುಕಾಗೆ ಪುಸಲಾಯಿಸಿದ್ದ ಕೂಡ. ತನ್ನ ಪ್ರಿಯಕರನ ಮಾತನ್ನೇ ನಂಬಿ ಎಲ್ಲವನ್ನೂ ಬದಿಗಿಟ್ಟು ಗಾಂಜಾ ಮಾರಾಟಕ್ಕೆ ಸಹಕಾರ ನೀಡಲು ಒಪ್ಪಿಕೊಂಡಳು ರೇಣುಕಾ.
ಇದೇ ಸಮಯದಲ್ಲಿ ಸಿದ್ಧಾರ್ಥ ಪ್ರೀತಿ ವಿಷಯ ತಿಳಿಯುತ್ತಿದ್ದಂತೆ ಮನೆಯಲ್ಲಿ ವಿರೋಧವೂ ವ್ಯಕ್ತವಾಗಿತ್ತು. ಹೀಗಾಗಿ ಊರು ಬಿಟ್ಟಿದ್ದ ರೇಣುಕಾ ನೇರ ಬೆಂಗಳೂರು ಸೇರಿ, ಇಬ್ಬರೂ ಒಟ್ಟಾಗಿ ಗಾಂಜಾ ಬಿಸಿನೆಸ್ ಮುಂದುವರೆಸಿದ್ದರು.
ರೇಣುಕಾಳ ಮೂಲಕ ಗಾಂಜಾ ಮಾರಾಟ ದಂಧೆ ಸಿದ್ಧಾರ್ಥ್ಗೆ ಇನ್ನಷ್ಟು ಸುಲಭ ಅನಿಸಿತ್ತು. ಇದನ್ನೇ ಮುಂದುವರೆಸಿದ ಸಿದ್ಧಾರ್ಥ್, ತನ್ನ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡ. ಪೊಲೀಸರಿಗೆ ಅನುಮಾನ ಬರಬಾರದೆಂದು ರೇಣುಕಾ ಕೈಲಿ ಗಾಂಜಾ ಸಪ್ಲೈ ಮಾಡಿಸುತ್ತಿದ್ದ. ಗಾಂಜಾ ತೆಗೆದುಕೊಳ್ಳುವವರಿಗೆ ಸುಲಭವಾಗಿ ವಿಳಾಸ ಸಿಗಲಿ ಎಂದು ಮುಖ್ಯರಸ್ತೆ ಬಳಿಯೇ ರೂಂ ಮಾಡುತ್ತಿದ್ದಳು ರೇಣುಕಾ. ಆದರೆ ಈ ವ್ಯವಹಾರ ತುಂಬಾ ದಿನ ನಡೆಯಲಿಲ್ಲ.
Recommended Video
ಈ ಗಾಂಜಾ ವ್ಯವಹಾರದ ಜಾಡು ತಿಳಿದುಕೊಂಡ ಪೊಲೀಸರು ಬುಧವಾರ ಸದಾಶಿವನಗರದಲ್ಲಿ ರೇಣುಕಾಳನ್ನು ಬಂಧಿಸಿ ಎರಡೂವರೆ ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಪ್ರೇಮಿ ಸಿದ್ದಾರ್ಥ್ಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಆದರೆ ಪ್ರೇಮಿಯನ್ನೇ ನಂಬಿ ಗಾಂಜಾ ಮಾರಾಟಕ್ಕಿಳಿದಿದ್ದ ರೇಣುಕಾ ಈಗ ಕಂಬಿ ಎಣಿಸುವಂತೆ ಆಗಿದೆ. ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.