ದ್ವಾರಕನಾಥ್ ಗುರೂಜಿ ಭೇಟಿಯಾದ ಡಿ.ವಿ.ಸದಾನಂದ ಗೌಡ
ಬೆಂಗಳೂರು, ಏಪ್ರಿಲ್ 05 : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ ಅವರು ದ್ವಾರಕನಾಥ್ ಗುರೂಜಿ ಅವರನ್ನು ಭೇಟಿಯಾದರು. ಏಪ್ರಿಲ್ 18ರಂದು ಬೆಂಗಳೂರು ಉತ್ತರ ಕ್ಷೇತ್ರದ ಚುನಾವಣೆ ನಡೆಯಲಿದೆ.
ಗುರುವಾರ ಚುನಾವಣಾ ಪ್ರಚಾರವನ್ನು ಮುಗಿಸಿದ ಬಳಿಕ ಡಿ.ವಿ.ಸದಾನಂದ ಗೌಡ ಅವರು ಆರ್.ಟಿ.ನಗರದಲ್ಲಿರುವ ದ್ವಾರಕನಾಥ್ ಗುರೂಜಿ ಅವರ ಮನೆಗೆ ಭೇಟಿ ನೀಡಿದ್ದರು. ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.
ಯಾರೀತ ಡಿಕೆ ಶಿವಕುಮಾರ್ ಆಪ್ತ ದ್ವಾರಕನಾಥ್ ಗುರೂಜಿ?
ಬಿಜೆಪಿ ನಾಯಕ ವೈ.ಎ.ನಾರಾಯಣಸ್ವಾಮಿ ಸೇರಿದಂತೆ ಇತರ ನಾಯಕರು ಈ ಸಂದರ್ಭದಲ್ಲಿ ಸದಾನಂದ ಗೌಡರ ಜೊತೆ ಉಪಸ್ಥಿತರಿದ್ದರು. ದ್ವಾರಕನಾಥ್ ಗುರೂಜಿ ಅವರು ಸದಾನಂದ ಗೌಡರಿಗೆ ಪೇಟ ತೊಡಿಸಿ, ಹಾರ ಹಾಕಿ ಸನ್ಮಾನಿಸಿದರು.
ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ದ್ವಾರಕನಾಥ್ ಗುರೂಜಿ ಆಪ್ತರು. ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ನಡೆದಾಗ ದ್ವಾರಕನಾಥ್ ಅವರ ನಿವಾಸದ ಮೇಲೂ ದಾಳಿಯಾಗಿತ್ತು.
ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಜೊತೆ ದ್ವಾರಕನಾಥ್ ಗುರೂಜಿ ಅವರನ್ನು ಭೇಟಿಯಾಗಿದ್ದರು. ಅವರ ಸಲಹೆಯಂತೆ ಜೆ.ಪಿ.ನಗರದ ನಿವಾಸದಲ್ಲಿ ಗಣಪತಿ ಹೋಮವನ್ನು ನಡೆಸಿದ್ದರು.
ದಿ.ದೇವರಾಜ್ ಅರಸ್ ಅವರಿಗೂ ದ್ವಾರಕನಾಥ್ ಗುರೂಜಿ ಅವರು ಆಪ್ತರಾಗಿದ್ದರು. ಮಹಾರಾಷ್ಟ್ರದ ವಿಲಾಸ್ ರಾವ್ ದೇಶ್ಮುಖ್, ಸುಶೀಲ್ ಕುಮಾರ್ ಶಿಂಧೆ ಸೇರಿದಂತೆ ಹಲವು ರಾಜಕೀಯ ನಾಯಕರು ದ್ವಾರಕನಾಥ್ ಗುರೂಜಿ ಬಳಿ ಸಲಹೆ ಪಡೆದಿದ್ದಾರೆ.