ಸಬ್ ಅರ್ಬನ್ ರೈಲಿಗೆ ಬಾಣಸವಾಡಿಯಲ್ಲಿ ಕಾರ್ ಶೆಡ್ ಸ್ಥಾಪನೆ : ಡಿವಿಎಸ್
ಬೆಂಗಳೂರು, ಏಪ್ರಿಲ್ 05 : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ ಅವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಏಪ್ರಿಲ್ 18ರಂದು ಉತ್ತರ ಕ್ಷೇತ್ರದ ಮತದಾನ ನಡೆಯಲಿದೆ.
ಗುರುವಾರ ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ವಿಶ್ವನಾಥ ನಾಗೇನಹಳ್ಳಿಯ ಚರ್ಚ್ ಸಮೀಪ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಡಿ.ವಿ.ಸದಾನಂದ ಗೌಡ ಅವರು ಪಾಲ್ಗೊಂಡಿದ್ದರು. 5 ವರ್ಷಗಳ ಕಾರ್ಯಗಳ ಕುರಿತು ಮಾಹಿತಿ ನೀಡಿ ಮತಯಾಚನೆ ಮಾಡಿದರು.
ಬ್ಯಾಟರಾಯನಪುರದಲ್ಲಿ ಬಿರುಸಿನ ಪ್ರಚಾರ ನಡೆಸಿದ ಸದಾನಂದ ಗೌಡ
ಸಬ್ ಅರ್ಬನ್ ರೈಲಿಗೆ ಬಾಣಸವಾಡಿಯಲ್ಲಿ ಕಾರ್ ಶೆಡ್ ಸ್ಥಾಪನೆ, ಕೆ.ಆರ್.ಪುರಂ ರೈಲು ನಿಲ್ದಾಣದಲ್ಲಿ ಡೀಸೆಲ್ ರೈಲುಗಳ ಸಾಮರ್ಥ್ಯವನ್ನು 125 ರೈಲುಗಳಿಂದ 150ಕ್ಕೆ ಏರಿಕೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ 10 ಟನ್ ಸಾಮರ್ಥ್ಯದ ಮೆಕ್ಯಾನಿಕಲ್ ಲಾಂಡ್ರಿ ಸ್ಥಾಪನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದು ವಿವರಣೆ ನೀಡಿದರು.
'ಸಿದ್ದರಾಮಯ್ಯ ಸರಿಯಾದ ವಿಳಾಸ ನೀಡಿದರೆ ಪ್ರಗತಿ ವರದಿ ಕಳುಹಿಸುವೆ'
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಹಾಲಿ ಸಂಸದ ಡಿ.ವಿ.ಸದಾನಂದ ಗೌಡ ಅವರು ಮತ್ತೊಮ್ಮೆ ಚುನಾವಣಾ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್-ಜೆಡಿಎಸ್ನಿಂದ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿರುವ ಕೃಷ್ಣ ಬೈರೇಗೌಡ ಅಭ್ಯರ್ಥಿಯಾಗಿದ್ದಾರೆ.
ಮತ್ತೊಮ್ಮೆ ಮೋದಿ ಎಂಬ ಘೋಷಣೆ ಎಲ್ಲೆಡೆ ಮೊಳಗುತ್ತಿದೆ : ಸದಾನಂದ ಗೌಡ
2390 ಕೋಟಿ ಮೊತ್ತದ ಯೋಜನೆ
'ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಒಟ್ಟು 2,390 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಯೋಜನೆಗಳನ್ನು ತರಲಾಗಿದೆ. ನಮ್ಮ ಮೆಟ್ರೋ ಎರಡನೇ ಹಂತಕ್ಕೆ ಶ್ರಮಿಸಿದ್ದೇನೆ' ಎಂದು ಡಿ.ವಿ.ಸದಾನಂದ ಗೌಡ ಅವರು ಮಾಹಿತಿ ಹಂಚಿಕೊಂಡರು.
ಉದ್ಯೋಗ ಮೇಳ ನಡೆಸಿದ್ದೇನೆ
ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಹಲವು ಕಡೆ ಉದ್ಯೋಗ ಮೇಳ ನಡೆಸಿ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಲಾಗಿದೆ. ರಕ್ಷಣಾ ಇಲಾಖೆಗೆ ಸೇರಿದ ಜಾಗವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಕೇಂದ್ರ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರನ್ನೇ ಬೆಂಗಳೂರಿಗೆ ಕರೆಸಿಕೊಂಡು ಪ್ರಕರಣಗಳನ್ನು ಇತ್ಯರ್ಥಪಡಿಸಲು ಶ್ರಮಿಸಿದ್ದೇನೆ ಎಂದು ಸದಾನಂದ ಗೌಡ ಹೇಳಿದರು.
ಯಾವುದೇ ರಾಜಿ ಇಲ್ಲ
ಕೇಂದ್ರ ಮತ್ತು ರಾಜ್ಯದ ಕೊಂಡಿಯಾಗಿ ಶ್ರಮಿಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರವು ರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಭಯೋತ್ಪಾದನೆ ನಿಗ್ರಹಕ್ಕೆ ಸೈನಿಕರಿಗೆ ಮುಕ್ತ ವಾತಾವರಣ ಕಲ್ಪಿಸಲಾಗಿದೆ. ಸ್ಥಿರ ಸರಕಾರಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದು ಸದಾನಂದ ಗೌಡರು ಮನವಿ ಮಾಡಿದರು.
ಲೂಟಿಯೇ ಕಾಂಗ್ರೆಸ್ ಸಾಧನೆ
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡಿ, 'ಸಕಾಲ ಯೋಜನೆಯ ರೂವಾರಿ ಸದಾನಂದಗೌಡರು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆದರೆ, ಉಪ ಮುಖ್ಯಮಂತ್ರಿ ಪರಮೇಶ್ವರ ಅವರು ಸದಾನಂದಗೌಡರ ಸಾಧನೆ ಏನು ಎಂದು ಪ್ರಶ್ನಿಸಿದ್ದಾರೆ?. ಲೂಟಿ ಹೊಡೆಯುವುದೇ ಕಾಂಗ್ರೆಸ್ ಸಾಧನೆಯಾಗಿದೆ' ಎಂದು ಟೀಕಿಸಿದರು.
ಸುಳ್ಳು ಹೇಳುವುದರಲ್ಲಿ ನಿಸ್ಸೀಮರು
ವೈ.ಎ.ನಾರಾಯಣಸ್ವಾಮಿ ಮಾತನಾಡಿ, 'ವೈಟ್ ಟಾಪಿಂಗ್ ಹೆಸರಿನಲ್ಲಿ ಲೂಟಿ ಹೊಡೆಯುತ್ತಿರುವುದೇ ಪರಮೇಶ್ವರ ಅವರ ಸಾಧನೆಯಾಗಿದೆ. ಕಾಂಗ್ರೆಸ್ನವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅಭಿವೃದ್ಧಿ ಕಾರ್ಯಗಳನ್ನು ಮಾತ್ರ ಮಾಡುವುದಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.