ಮತ್ತೊಮ್ಮೆ ಮೋದಿ ಎಂಬ ಘೋಷಣೆ ಎಲ್ಲೆಡೆ ಮೊಳಗುತ್ತಿದೆ : ಸದಾನಂದ ಗೌಡ
ಬೆಂಗಳೂರು, ಏಪ್ರಿಲ್ 01 : 'ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಎಂಬ ಘೋಷಣೆ ಎಲ್ಲೆಡೆ ಮೊಳಗುತ್ತಿದ್ದು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡೋಣ' ಎಂದು ಡಿ.ವಿ.ಸದಾನಂದ ಗೌಡ ಅವರು ಜನರಲ್ಲಿ ಮನವಿ ಮಾಡಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಸೋಮವಾರ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ನಾಗದೇವನಹಳ್ಳಿ ಎರಡನೇ ಹಂತದ ಜ್ಞಾನ ಭಾರತಿ ಬಿಡಿಎ ಲೇಔಟ್ ನಲ್ಲಿರುವ ಕೆವಿ ಆರ್ಕಿಡ್ಸ್ ಅಪಾರ್ಟ್ಮೆಂಟ್ ನಾಗರಿಕರೊಂದಿಗೆ ಸಂವಾದ ನಡೆಸಿದ ಅವರು, 'ನೀವು ಸದಾನಂದ ಗೌಡರಿಗಾಗಿ ಮತ ಹಾಕಬೇಡಿ, ನರೇಂದ್ರ ಮೋದಿಯವರಿಗಾಗಿ ಮತ ಹಾಕಿ. ರಜಾ ಇದೆಯೆಂದು ಪ್ರವಾಸಕ್ಕೆ ತೆರಳದೆ, ಕಡ್ಡಾಯವಾಗಿ ಮತ ಹಾಕಿ' ಎಂದು ಕೋರಿದರು. ಈ ವೇಳೆ ಕೆಲವರು ತಮ್ಮ ವೋಟರ್ ಐಡಿ ಇನ್ನೂ ಬಂದಿಲ್ಲ ಎಂದು ಆರೋಪಿಸಿದರು.
ಕರ್ನಾಟಕದ ಲೋಕಸಭಾ ಸದಸ್ಯರಲ್ಲಿ ಯಾರು ಎಷ್ಟು ಓದಿದ್ದಾರೆ?
ನಂದಿನಿ ಬಡಾವಣೆಯಲ್ಲಿರುವ ಸಕ್ರ್ಯುಲರ್ ಪಾರ್ಕ್ನಲ್ಲಿ ಸಂಚರಿಸಿ ವಾಯುವಿಹಾರಕ್ಕೆ ಆಗಮಿಸಿದ ನಾಗರಿಕರ ಬಳಿ ಮತ ಯಾಚಿಸಿದರು. ನಂತರ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಮತದಾರರನ್ನು ಭೇಟಿ ಮಾಡಿ ಕೇಂದ್ರ ಸರಕಾರದ ಸಾಧನೆಗಳು, ಐದು ವರ್ಷದಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು.
ಬೆಂಗಳೂರು ಉತ್ತರ ಚುನಾವಣಾ ಪುಟ ವೀಕ್ಷಿಸಿ
ಈ ಬಾರಿಯೂ ತಮಗೆ ಮತ ನೀಡಿ ಪುನರಾಯ್ಕೆ ಮಾಡಬೇಕು ಎಂದು ಜನರಲ್ಲಿ ಮನವಿ ಮಾಡಿದರು. ಏಪ್ರಿಲ್ 18ರಂದು ಬೆಂಗಳೂರು ಉತ್ತರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿಯಾಗಿ ಕೃಷ್ಣ ಬೈರೇಗೌಡ ಅವರು ಕಣದಲ್ಲಿದ್ದಾರೆ.
ಸ್ಥಿರ ಸರ್ಕಾರವನ್ನು ನಿಡೋಣ
ಜನರನ್ನು ಉದ್ದೇಶಿಸಿ ಮಾತನಾಡಿದ ಸದಾನಂದಗೌಡರು, 'ಬಾಲಾಕೋಟ್ ದಾಳಿಗೆ ನಿಮಗೆ ಪ್ರೇರಣೆಯೇನು? ಎಂದು ನರೇಂದ್ರ ಮೋದಿ ಅವರನ್ನು ನಾನೂ ಚೌಕಿದಾರ ಕಾರ್ಯಕ್ರಮದಲ್ಲಿ ರಾಜಸ್ತಾನದ ಯುವಕನೊಬ್ಬ ಪ್ರಶ್ನಿಸಿದ. ಇದಕ್ಕೆ ಮೋದಿಯವರು ಸ್ಥಿರ ಸರಕಾರವೇ ಕಾರಣ ಎಂದು ಹೇಳಿದರು' ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.
ಮಿಲಿಟರಿ ಮೇಲೆ ನಂಬಿಕೆಯಿರಲಿಲ್ಲ
'ಕೇಂದ್ರದಲ್ಲಿ ಈ ಹಿಂದೆ ಆಡಳಿತ ನಡೆಸಿದ ಸರಕಾರಗಳಿಗೆ ಮಿಲಿಟರಿಯ ಮೇಲೆ ನಂಬಿಕೆಯಿರಲಿಲ್ಲ. ಆದರೆ, ಮೋದಿಯವರು ಮಿಲಿಟರಿಗೆ ಸ್ವಾತಂತ್ರ್ಯ ನೀಡಿ ಪ್ರೋತ್ಸಾಹ ನೀಡಿದ್ದರಿಂದ ಪಾಕಿಸ್ತಾನದ ನೆಲಕ್ಕೇ ನುಗ್ಗಿ ದಾಳಿ ಮಾಡಲಾಯಿತು' ಎಂದು ಸದಾನಂದ ಗೌಡರು ಹೇಳಿದರು.
ಎಲ್ಲರೂ ಮತದಾನ ಮಾಡಿ
'ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು. ಸರಣಿ ರಜೆಗಳಿವೆ ಎಂದು ಪ್ರವಾಸಕ್ಕೆ ಅಥವಾ ಹುಟ್ಟೂರಿಗೆ ತೆರಳಬೇಡಿ. ಮತದಾನ ಮಾಡಿದ ನಂತರ ನಿಮ್ಮ ಕಾರ್ಯಕ್ರಮಗಳನ್ನು ಹಾಕಿಕೊಳ್ಳಿ. ದೇಶದಲ್ಲಿ ಮತ್ತೊಮ್ಮೆ ಮೋದಿ ಎಂಬ ಘೋಷಣೆ ಎಲ್ಲೆಡೆ ಮೊಳಗುತ್ತಿದ್ದು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡೋಣ' ಎಂದು ಸದಾನಂದ ಗೌಡರು ಕರೆ ನೀಡಿದರು.
ಸದಾನಂದ ಗೌಡರಿಗೆ ಸನ್ಮಾನ
ತರಾಕಾರಿ ಮಾರುಕಟ್ಟೆ ಸಂಘದ ಪದಾಧಿಕಾರಿಗಳು ಮುಖಂಡ ಗೋವಿಂದಪ್ಪ ಅವರ ನೇತೃತ್ವದಲ್ಲಿ ಸದಾನಂದ ಗೌಡರ ಜೊತೆ ಮತಯಾಚನೆಗೆ ಸಾಥ್ ನೀಡಿದರು. ಇದೇ ಸಂದರ್ಭದಲ್ಲಿ ವ್ಯಾಪಾರಿಗಳು, ಮಾರುಕಟ್ಟೆ ಸಂಘದವರು ಸದಾನಂದಗೌಡ ಅವರನ್ನು ಸನ್ಮಾನಿಸಿದರು.
ಅಪಾರ ಬೆಂಬಲಿಗರ ಉಪಸ್ಥಿತಿ
ಸದಾನಂದ ಗೌಡರು ಚುನಾವಣಾ ಪ್ರಚಾರ ನಡೆಸುವಾಗ ಮುಖಂಡರಾದ ನರೇಂದ್ರ ಬಾಬು, ಹರೀಶ್, ಶಂಕರಪ್ಪ, ರಾಜಣ್ಣ, ಪ್ರಸನ್ನ, ಎಂ.ಶ್ರೀನಿವಾಸ್, ರಾಜೇಂದ್ರ ಕುಮಾರ್, ಶಿವಾನಂದಮೂರ್ತಿ, ಗಂಗಹನುಮಯ್ಯ, ವೆಂಕಟೇಶ್ ಮೂರ್ತಿ, ಜಯಸಿಂಹ, ನಾಗೇಂದ್ರ ಮುಂತಾದವರು ಉಪಸ್ಥಿತರಿದ್ದರು.