ಸಾಲುಮರದ ತಿಮ್ಮಕ್ಕಗೆ ಅನಾರೋಗ್ಯ: ಅಪೋಲೊ ಆಸ್ಪತ್ರೆಗೆ ದಾಖಲು
ಬೆಂಗಳೂರು, ಡಿಸೆಂಬರ್ 7: ಕರ್ನಾಟಕದ ಹೆಮ್ಮೆಯ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆತರಲಾಗಿದೆ.
ಬೇಲೂರಿನ ತಮ್ಮ ಮನೆಯಲ್ಲಿ ಭಾನುವಾರ ಸಂಜೆ ಕುಸಿದು ಬಿದ್ದ ತಿಮ್ಮಕ್ಕ ಅವರ ಸೊಂಟದ ಮೂಳೆ ಮುರಿದು ಹೋಗಿದ ಎನ್ನಲಾಗಿದೆ. ಕೂಡಲೇ ಅವರನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಅಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು.
ಸಾಲುಮರದ ತಿಮ್ಮಕ್ಕನ ಪದ್ಮಶ್ರೀ ಪ್ರಶಸ್ತಿಗೂ ಉಡುಪಿಗೂ ಏನಿದು ನಂಟು?
ತಿಮ್ಮಕ್ಕ ಅವರ ಸೊಂಟಕ್ಕೆ ಶಸ್ತ್ರಚಿಕಿತ್ಸೆ ನಡೆಸುವ ಅಗತ್ಯವಿದೆ. ಹೀಗಾಗಿ ಅವರನ್ನು ಬೆಂಗಳೂರಿನ ಜಯನಗರದಲ್ಲಿರುವ ಅಪೋಲೋ ಆಸ್ಪತ್ರೆಗೆ ಕರೆತರಲಾಗಿದೆ. ಬುಧವಾರ ಅಥವಾ ಗುರುವಾರ ಅವರ ಸೊಂಟದ ಆಪರೇಷನ್ ನಡೆಸುವ ಸಾಧ್ಯತೆ ಇದೆ ಎಂದು ತಿಮ್ಮಕ್ಕ ಅವರ ದತ್ತುಪುತ್ರ ಉಮೇಶ್ ಮಾಹಿತಿ ನೀಡಿದ್ದಾರೆ.
ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರು ಕಳೆದ ಮೇ ತಿಂಗಳಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಹೊಟ್ಟೆನೋವು, ವಾಂತಿ, ಭೇದಿಯಿಂದ ಅಸ್ವಸ್ಥರಾಗಿದ್ದ ತಿಮ್ಮಕ್ಕ ಅವರನ್ನು ಹಾಸನದ ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಚೇತರಿಸಿಕೊಂಡಿದ್ದರು.
ಮಾಗಿದ ರಾಷ್ಟ್ರಪತಿ ಕೋವಿಂದ್, ಸಾಲುಮರದ ತಿಮ್ಮಕ್ಕನಿಗೆ 'ಬಾಗಿದಾಗ'
ಮರಗಳು ಬುಡ ಅಗೆದರು:
ತಿಮ್ಮಕ್ಕ ಅವರು ನೆಟ್ಟು ಬೆಳೆಸಿದ್ದ ಸಾಲು ಮರಗಳ ಬುಡವನ್ನು ರಸ್ತೆ ನಿರ್ಮಾಣಕ್ಕಾಗಿ ಅಗೆದ ಘಟನೆ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಕುದೂರು ಮತ್ತು ಹುಲಿಕಲ್ ರಸ್ತೆಯ ಎರಡೂ ಬದಿಗಳಲ್ಲಿ ತಿಮ್ಮಕ್ಕ ನೆಟ್ಟು ಬೆಳೆಸಿದ ಮರಗಳು ಬೆಳೆದಿವೆ. ಇಲ್ಲಿ ರಸ್ತೆ ನಿರ್ಮಾಣಕ್ಕೆ ಕಾಮಗಾರಿ ನಡೆಸಿದವರು ಮರಗಳ ಬುಡವನ್ನು ಅಗೆದು ಮಣ್ಣು ತೆಗೆದಿದ್ದಾರೆ.
Recommended Video
ರಸ್ತೆ ಕಾಮಗಾರಿಯಲ್ಲಿ ಮರಗಳಿಗೆ ಅಪಾಯ ಉಂಟಾಗಬಹುದು ಎಂಬ ಆತಂಕದ ನಡುವೆ ಸರ್ಕಾರ ಕೂಡ ಮರಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವಂತೆ ಆದೇಶ ನೀಡಿತ್ತು. ಆದರೆ ಅನೇಕ ಮರಗಳ ಬುಡಗಳಿಂದ ಮಣ್ಣು ತೆಗೆಯಲಾಗಿದೆ. ಇದರ ವಿರುದ್ಧ ಜಿಲ್ಲಾಧಿಕಾರಿ ಮತ್ತು ಮುಖ್ಯಮಂತ್ರಿಗೆ ದೂರು ನೀಡುವುದಾಗಿ ತಿಮ್ಮಕ್ಕ ಆಕ್ರೋಶ ವ್ಯಕ್ತಪಡಿಸಿದ್ದರು.