ನೂತನ ಡಿಜಿಪಿಯಾಗಿ ರೂಪಕ್ ಕುಮಾರ್ ದತ್ತ ಅಧಿಕಾರ
ಬೆಂಗಳೂರು, ಜನವರಿ 31: ಹಿರಿಯ ಐಪಿಎಸ್ ಅಧಿಕಾರಿ ರೂಪಕ್ ಕುಮಾರ್ ದತ್ತ ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಸರಕಾರ ಅದೇಶ ಹೊರಡಿಸಿದೆ.
ರೂಪಕ್ ದತ್ತ ಅವರನ್ನು ನೇಮಕ ಮಾಡಲು ಕೇಂದ್ರಕ್ಕೆ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲೇ ಸ್ಪಷ್ಟಪಡಿಸಿದ್ದರು. ಅಲ್ಲದೆ ಪ್ರಸ್ತುತ ಹಾಲಿ ಪೊಲೀಸ್ ಮಹಾ ನಿರ್ದೇಶಕ ಓ ಪ್ರಕಾಶ್ ರಾವ್ ಅವರ ಅವಧಿ ಇಂದು(ಜ.31) ಪೂರ್ಣಗೊಂಡಿದ್ದು ಅವರ ಸ್ಥಾನಕ್ಕೆ ಆರ್.ಕೆ ದತ್ತ ಅವರು ಬರಲಿದ್ದಾರೆ.
ಉತ್ತರ ಪ್ರದೇಶ ಮೂಲದವರಾದ ದತ್ತ ಅವರು 1981ರಲ್ಲಿ ಐಪಿಎಸ್ ಪರೀಕ್ಷೆ ಪಾಸ್ ಮಾಡಿ ಕರ್ನಾಟಕ ಕೇಡರ್ ಪೊಲೀಸ್ ಅಧಿಕಾರಿಯಾಗಿ ಆಯ್ಕೆಯಾದರು. ಕರ್ನಾಟಕದಲ್ಲಿ ಸೇವೆ ಪ್ರಾರಂಭಿಸಿ ದಾವಣಗೆರೆ,ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎಸ್ಪಿಯಾಗಿ, ರಾಜ್ಯ ಗುಪ್ತದಳದ ಡಿಐಜಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಈಶಾನ್ಯ ವಲಯದ ಐಜಿಪಿಯಾಗಿ, ಲೋಕಾಯುಕ್ತದಲ್ಲಿ ಎಡಿಜಿಪಿಯಾಗಿ, ಸಿಐಡಿ,ಸಿಬಿಐ ಆಗಿಯೂ ಹಲವು ಕಾಲ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಅವರು ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಾಗುವುದು ಸಂತಸದ ವಿಷಯವಾದರೂ, ಅವರ ಅಧಿಕಾರಾವಧಿ ಅಕ್ಟೋಬರ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.