ರುದ್ರಪ್ಪ ಲಮಾಣಿ ಪುತ್ರನಿಗೆ ಸಿಸಿಬಿ ಡ್ರಿಲ್, 9 ದಿನ ಕಸ್ಟಡಿಗೆ
ಬೆಂಗಳೂರು, ನ. 14: ಹೈಡ್ರೋ ಗಾಂಜಾ ಖರೀದಿ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ಹಾಗೂ ಇತರೆ ಆರೋಪಿಗಳ ಡ್ರಗ್ ಜಾಲ ಬೇಧಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.
ಕೆಂಪೇಗೌಡ ನಗರ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ಸಿಸಿಬಿ ತನಿಖೆಗೆ ವರ್ಗಾಯಿಸಲಾಗಿದೆ. ಆರೋಪಿಗಳಾದ ದರ್ಶನ್ ಲಮಾಣಿ, ಸುಜಯ್ , ಹೆಮಂತ್, ಸುನೇಶ್ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು 9 ದಿನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಪ್ರಕರಣ ಸಿಸಿಬಿ ತನಿಖೆಗೆ ವರ್ಗಾಯಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ ಬೆನ್ನಲ್ಲೇ ಕಸ್ಟಡಿಗೆ ಕೋರಿ ಸಿಸಿಬಿ ಪೊಲೀಸರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಮಾನ್ಯ ಮಾಡಿರುವ ನ್ಯಾಯಾಲಯ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರ ಕಸ್ಟಡಿಗೆ ನೀಡಿದ್ದು, ಇದೀಗ ಹೈಡ್ರೋ ಗಾಂಜಾ ಖರೀದಿ ಜಾಲ ಬೇಧಿಸಲು ಮುಂದಾಗಿದ್ದಾರೆ.
Recommended Video
ಅಂತಾರಾಷ್ಟ್ರೀಯ ಕೊರಿಯರ್ ಮೂಲಕ ಡ್ರಗ್ ತರಿಸಿಕೊಳ್ಳುವ ಜಾಲ ಮೊದಲಿನಿಂದಲೂ ಸಕ್ರಿಯವಾಗಿದೆ. ಅದರಲ್ಲೂ ಹೈಡ್ರೋ ಗಾಂಜಾ ಅಂತ ಡ್ರಗ್ ಇದೆ ಎಂದು ದೇಶದಲ್ಲಿ ಮೊದಲು ಪ್ರಕರಣ ದಾಖಲಿಸಿದ್ದೇ ಸಿಸಿಬಿ ಪೊಲೀಸರು. ಹೈಡ್ರೋ ಗಾಂಜಾವನ್ನು ಕೊರಿಯರ್ ಮೂಲಕವೇ ದರ್ಶನ್ ಮತ್ತು ಆಪ್ತರು ತರಿಸಿಕೊಂಡಿದ್ದು, ಇದೀಗ ಅಂಚೆ ಕಚೇರಿಗಳಿಗೆ ವಿದೇಶದಿಂದ ಬರುವ ಕೊರಿಯರ್ ಗಳ ಮೇಲೂ ಸಿಸಿಬಿ ನಿಗಾ ಇಟ್ಟಿದೆ. ಅಲ್ಲದೇ ವಿದೇಶದಿಂದ ಅಂಚೆ ಮೂಲಕ ಡ್ರಗ್ ತರಿಸಿಕೊಂಡ ಪ್ರಕರಣದಲ್ಲಿ ದರ್ಶನ್ ಪಾತ್ರ ಇರುವ ಬಗ್ಗೆ ಸಿಸಿಬಿ ಪೊಲೀಸರು ಸಾಕ್ಷಾಧಾರಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ನಾನಾ ಹೆಸರಿನಲ್ಲಿ ವಿದೇಶದಿಂದ ಅಂಚೆ ಮೂಲಕ ಮಾದಕ ವಸ್ತುಗಳನ್ನು ತರಿಸಿಕೊಂಡಿರುವ ಬಗ್ಗೆ ದಾಖಲೆಗಳ ಸಂಗ್ರಹಕ್ಕೆ ಸಿಸಿಬಿ ಮುಂದಾಗಿದೆ.