ಕಾಲು ಮುರಿದುಬಿದ್ದ ಕುದುರೆ: ರೇಸ್ಕೋರ್ಸ್ನಲ್ಲಿ ಗಲಾಟೆ
ಬೆಂಗಳೂರು, ನವೆಂಬರ್ 15: ನಗರದ ರೇಸ್ ಕೋರ್ಸ್ ಶುಕ್ರವಾರ ಭಾರಿ ಗದ್ದಲ, ಗಲಾಟೆ ಮತ್ತು ರಂಪಾಟಕ್ಕೆ ಸಾಕ್ಷಿಯಾಯಿತು. ಅಪಘಾತದ ಘಟನೆಯಿಂದ ರೇಸ್ ಸ್ಥಗಿತಗೊಂಡಿದ್ದಕ್ಕೆ ರೊಚ್ಚಿಗೆದ್ದ ಜೂಜುಕೋರರು ರೇಸ್ ಕೋರ್ಸ್ ಕಚೇರಿಯ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.
ಶುಕ್ರವಾರ ನಡೆದ ಮೊದಲ ರೇಸ್ ವೇಳೆ ಕುದುರೆಯೊಂದು ಕಾಲುಮುರಿದುಕೊಂಡು ಬಿದ್ದಿದ್ದೇ ಈ ಗಲಾಟೆಗೆ ಕಾರಣ. ಒಂದು ಕುದುರೆ ಬಿದ್ದಿದ್ದರಿಂದ ಅದರ ಹಿಂದೆ ಬರುತ್ತಿದ್ದ ಇನ್ನೆರಡು ಕುದುರೆಗಳ ಜಾಕಿಗಳು ಆಯತಪ್ಪಿ ಬಿದ್ದಿದ್ದಾರೆ. ಈ ವೇಳೆ ಮತ್ತೊಂದು ಕುದುರೆ ಮುಂದೆ ಸಾಗಿ ಮೊದಲ ಸ್ಥಾನ ಪಡೆದುಕೊಂಡಿತು. ಇದರಿಂದ ಉಳಿದ ಕುದುರೆಗಳ ಮೇಲೆ ಬಾಜಿ ಕಟ್ಟಿದ್ದವರು ಸಿಟ್ಟಿಗೆದ್ದು ಗಲಾಟೆ ಮಾಡಿದ್ದಾರೆ. ಗಲಾಟೆ ಜೋರಾಗುತ್ತಿದ್ದಂತೆಯೇ ರೇಸ್ ಕೋರ್ಸ್ ಆಡಳಿತ ಮಂಡಳಿ ಶುಕ್ರವಾರ ನಡೆಯಬೇಕಿದ್ದ ಎಲ್ಲ ರೇಸ್ಗಳನ್ನು ರದ್ದುಗೊಳಿಸಿದೆ.
ಮಹಿಳೆಯ ಕೂದಲನ್ನೇ ಕಿತ್ತ ಗೋ ಕಾರ್ಟಿಂಗ್ ಕಾರು ರೇಸ್
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಘಟನೆ ಸಂಬಂಧ ಕೆಲವರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಯತಪ್ಪಿ ಬಿದ್ದ ಜಾಕಿಗಳು
ಕೆರಳಿದ ಜನರು ಕೈಗೆ ಸಿಕ್ಕ ಕುರ್ಚಿ, ಮೇಜು, ಟಿವಿ, ಕೌಂಟರ್ಗಳನ್ನು ಪುಡಿಮಾಡಿದ್ದಾರೆ. ರೇಸ್ನಲ್ಲಿ ಹಣ ಕಳೆದುಕೊಂಡಿದ್ದ ಜೂಜುಕೋರರು ಮುಂದಿನ ರೇಸ್ನಲ್ಲಿ ಕೂಡ ಅವಕಾಶ ಸಿಕ್ಕಿಲ್ಲ ಎಂದು ಕೋಪಗೊಂಡು ಗಲಾಟೆ ಮಾಡಿದ್ದಾರೆ. ಸಂಜಯ್ ಆರ್ ಠಕ್ಕರ್ ಎಂಬುವವರು ಮಾಲೀಕರಾಗಿರುವ ವಿಲ್ ಟು ವಿನ್ ಎಂಬ ಕುದುರೆ ಕಾಲು ಮುರಿದುಕೊಂಡು ಬಿದ್ದಿತ್ತು. ಇದರಿಂದ ಕುದುರೆ ಮೇಲಿದ್ದ ಜಾಕಿ ಕೆಳಕ್ಕೆ ಹಾರಿದ್ದರು. ಈ ಘಟನೆಯಿಂದ ಹಿಂದೆ ಬರುತ್ತಿದ್ದ ಕುದುರೆಗಳ ಜಾಕಿಗಳು ಕೂಡ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಶ್ರೀನಾಥ್, ಸೂರಜ್ ನರ್ರೇಡು ಮತ್ತು ಕಿರಣ್ ಗಾಯಗೊಂಡಿದ್ದಾರೆ. ಕಿರಣ್ ಅವರು ಈ ರೇಸ್ನಲ್ಲಿ ಗೆಲ್ಲುವ ಫೇವರೇಟ್ ಆಗಿದ್ದರು. ಈ ಘಟನೆ ಬಳಿಕ ಗಲಾಟೆ ಆರಂಭವಾಗಿದೆ.
ನಾಳೆಯಿಂದ ರೇಸ್ ಇಲ್ಲ
ರೇಸ್ಕೋರ್ಸ್ನಲ್ಲಿ ಶನಿವಾರದಿಂದ ಸದ್ಯಕ್ಕೆ ಯಾವುದೇ ರೇಸ್ ಪಂದ್ಯಗಳು ನಡೆಯುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ. ಶನಿವಾರ ರೇಸ ಟ್ರ್ಯಾಕ್ಅನ್ನು ಪರಿಶೀಲನೆ ಮಾಡಲಾಗುತ್ತದೆ. ಸೋಮವಾರ 2-3 ಮಾಕ್ ಪರೀಕ್ಷೆ ನಡೆಸಲಾಗುತ್ತದೆ. ಟ್ರ್ಯಾಕ್ ಸ್ಪರ್ಧೆಗೆ ಯೋಗ್ಯವಾಗಿದೆ ಎಂಬುದು ದೃಢಪಟ್ಟ ಬಳಿಕವಷ್ಟೇ ರೇಸ್ ಮುಂದುವರಿಸಲಾಗುತ್ತದೆ ಎಂದು ಟರ್ಫ್ಕ್ಲಬ್ ಅಧ್ಯಕ್ಷ ವಿನೋದ್ ಶಿವಪ್ಪ ತಿಳಿಸಿದ್ದಾರೆ.
ಮಂಡ್ಯದಲ್ಲಿ ಪ್ರೇಕ್ಷಕರ ಮೈಜುಮ್ಮೆನಿಸಿದ ಜೋಡೆತ್ತಿನ ಓಟದ ಸ್ಪರ್ಧೆ
ಅಪಾಯಕಾರಿ ಎಂದು ವರದಿ
ಪ್ರತಿ ರೇಸ್ ಅವಧಿ ಆರಂಭವಾಗುವುದಕ್ಕೂ ಮುನ್ನ ಕುದುರೆಗಳು ಓಡುವ ಟ್ರ್ಯಾಕ್ನ ಗುಣಮಟ್ಟ ಹಾಗೂ ಸ್ಥಿತಿಯನ್ನು ಪರಿಶೀಲಿಸಲು ಪರೀಕ್ಷಾರ್ಥವಾಗಿ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಅದರಂತೆ ಕುದುರೆ ಓಡುವ ಟ್ರ್ಯಾಕ್ ಅಪಾಯಕಾರಿಯಾಗಿದೆ ಎಂದು ವರದಿ ನೀಡಲಾಗಿತ್ತು. ಆದರೂ ರೇಸ್ ಕೋರ್ಸ್ ಆಡಳಿತ ಸ್ಪರ್ಧೆಗೆ ಅನುವು ಮಾಡಿಕೊಟ್ಟಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಸರಿಪಡಿಸಲು ಸಲಹೆ ನೀಡಿದ್ದ ಜಾಕಿಗಳು
ನ.8 ರಂದು ಇಲ್ಲಿ ಪರೀಕ್ಷಾರ್ಥ ಸ್ಪರ್ಧೆ (ಮಾಕ್ ಟೆಸ್ಟ್) ನಡೆದಿತ್ತು. ಆಗ ಜಾಕಿಗಳು ಈ ಟ್ರ್ಯಾಕ್ನಲ್ಲಿ ಕುದುರೆ ಓಡಿಸಲು ಕಷ್ಟವಾಗುತ್ತದೆ. ಅಧಿಕೃತವಾಗಿ ಸ್ಪರ್ಧಾವಧಿ ಆರಂಭಿಸುವುದಕ್ಕೂ ಮುನ್ನ ಇನ್ನಷ್ಟು ಮಾಕ್ ಟೆಸ್ಟ್ಗಳನ್ನು ನಡೆಸುವಂತೆ ಸಲಹೆ ನೀಡಿದ್ದರು. ಟ್ರ್ಯಾಕ್ನಲ್ಲಿನ ದೋಷಗಳನ್ನು ಸರಿಪಡಿಸುವಂತೆ ವರದಿಯಲ್ಲಿ ಹೇಳಿದ್ದರು. ಆದರೂ ರೇಸ್ ಕೋರ್ಸ್ ಆಡಳಿತ ಮಂಡಳಿ ಸ್ಪರ್ಧೆ ಆಯೋಜಿಸಿತ್ತು ಎಂದು ಹೇಳಲಾಗಿದೆ.