ಬೆಂಗಳೂರು: ಇನ್ಸ್ಪೆಕ್ಟರ್ ಬಲಿ ತೆಗೆದುಕೊಂಡ ಸಾರ್ವಜನಿಕರ ಆಕ್ರೋಶ
ಬೆಂಗಳೂರು, ಸೆಪ್ಟೆಂಬರ್ 14: ಕುಡಿದು ವಾಹನ ವಲಾವಣೆ ಮಾಡಿದ್ದಾರೆಂದು ಇನ್ಸ್ಪೆಕ್ಟರ್ ಒಬ್ಬರನ್ನು ಸಾರ್ವಜನಿಕರು ಹಿಡಿದು ಪ್ರಶ್ನೆ ಮಾಡುತ್ತಿದ್ದ ವಿಡಿಯೋ ಒಂದು ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು, ಆ ಇನ್ಸ್ಪೆಕ್ಟರ್ ನಿಧನಹೊಂದಿದ್ದಾರೆ.
ನಿನ್ನೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಆರ್ಟಿಓ ಇನ್ಸ್ಪೆಕ್ಟರ್ ಮಂಜುನಾಥ್ ಅವರು ನಿಧನ ಹೊಂದಿದ್ದು ಅವರು ಕುಡಿದು ವಾಹನ ಚಲಾವಣೆ ಮಾಡಿರಲಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ನಡೆದಿದ್ದಿಷ್ಟು, ಆರ್ಟಿಓ ಇನ್ಸ್ಪೆಕ್ಟರ್ ಮಂಜುನಾಥ್ ನಿನ್ನೆ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು, ಈ ವೇಳೆ ಆಟೊ ಒಂದಕ್ಕೆ ಢಿಕ್ಕಿ ಹೊಡೆದರು, ಅಪಘಾತದಲ್ಲಿ ಆಟೊ ಚಾಲಕನ ಕೈಗೆ ಪೆಟ್ಟಾಗಿತ್ತು. ಮಂಜುನಾಥ್ ಅನ್ನು ಹಿಡಿದುಕೊಂಡ ಸಾರ್ವಜನಿಕರು ಕುಡಿದು ವಾಹನ ಚಲಾಯಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಹಲ್ಲೆಗೂ ಯತ್ನಿಸಿದರು. ಆ ನಂತರ ಅವರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ವಶಕ್ಕೆ ಪಡೆದು ನಂತರ ಆಸ್ಪತ್ರೆಗೆ ದಾಖಲಿಸಿದ್ದರು.
ಸಾರ್ವಜನಿಕರ ಆಕ್ರೋಶದಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದ ಮಂಜುನಾಥ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರು ನಿನ್ನೆ ಅಪಘಾತ ನಡೆದಾಗಲೇ ಅಶಕ್ತಿಯಿಂದ ಬಳಲುತ್ತಿದ್ದರು. ಸಾರ್ವಜನಿಕರ ಆಕ್ರೋಶ, ಎಳೆದಾಟ ಅವರನ್ನು ಇನ್ನಷ್ಟು ಆತಂಕಕ್ಕೆ ತಳ್ಳಿತು ಎಂದು ಹೇಳಲಾಗಿದೆ.