ಲಿಂಗರಾಜು ಹತ್ಯೆ ಪ್ರಕರಣ: ಎಲ್ಲಾ ಆರೋಪಿಗಳು ತಪ್ಪಿತಸ್ಥರೆಂದು ಕೋರ್ಟ್ ತೀರ್ಪು
ಬೆಂಗಳೂರು, ಅ. 28: ಆರ್.ಟಿ.ಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದ ಅಂತಿಮ ತೀರ್ಪು ಅಕ್ಟೋಬರ್ 28 ರಂದು ಪ್ರಕಟಿಸಲಾಗಿದೆ. ಈ ಪ್ರಕರಣದ ಎಲ್ಲಾ 12 ಆರೋಪಿಗಳು ತಪ್ಪಿತಸ್ಥರು ಎಂದು ಸಿಟಿ ಸಿವಿಎಲ್ 59ನೇ ನ್ಯಾಯಾಲಯವು ತೀರ್ಪು ನೀಡಿದೆ. ಅಪರಾಧಿಗಳಿಗೆ ಶಿಕ್ಷೆ ಪ್ರಮಾಣವನ್ನು ನಾಳೆ ಪ್ರಕಟಿಸಲಾಗುತ್ತದೆ. ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ನಾಯಕ್ ಅವರು ಜೀವಾವಧಿ ಶಿಕ್ಷೆ ವಿಧಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.
ಚಾಮರಾಜಪೇಟೆಯ ಬಿಎಂಕೆ ಲೇ ಔಟ್ ವಿಠ್ಠಲ್ ನಗರ ನಿವಾಸಿ, ಆರ್ಟಿಐ ಕಾರ್ಯಕರ್ತ ಲಿಂಗರಾಜು ಅವರನ್ನು 2012 ನವೆಂಬರ್ 20 ರಂದು ಮನೆ ಎದುರಲ್ಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ರಂಗಸ್ವಾಮಿ , ಆರ್ ಶಂಕರ್, ರಾಘವೇಂದ್ರ ಅಲಿಯಾಸ್ ರಘು, ಚಂದ್ರ, ಶಂಕರ್ ಅಲಿಯಾಸ್ ಗುಂಡ, ಉಮಾಶಂಕರ ಅಲಿಯಾಸ್ ಭವಾನಿ, ವೇಲು, ಸಿ ಗೋವಿಂದರಾಜು, ಲೋಗನಾಥ, ಜಹೀರ್, ಸುರೇಶ್ ಅಲಿಯಾಸ್ ಸೂರಿ, ಶ್ರೀಮತಿ ಗೌರಮ್ಮ (ಮಾಜಿ ಕಾರ್ಪೊರೇಟರ್) ಎಲ್ಲರಿಗೂ ಶಿಕ್ಷೆವಿಧಿಸಲಾಗಿರುತ್ತದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿ.ಜೆ. ಸೇನ್ ಹಾಗೂ ನ್ಯಾ. ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠಕ್ಕೆ, ಸರ್ಕಾರದ ಒಪ್ಪಿಗೆ ಮೇರೆಗೆ ನಗರ ಜಂಟಿ ಪೊಲೀಸ್ ಆಯುಕ್ತ ಪ್ರಣವ್ ಮೊಹಾಂತಿ ಹಾಗೂ ಸಿಐಡಿ ಎಸ್.ಪಿ. ಅಬ್ದುಲ್ ಅಹದ್ ಅವರನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿದ್ದರು. ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡವು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಅದರಂತೆ ಅಜಾದ್ ನಗರ ಕಾರ್ಪೋರೇಟರ್ ಗೌರಮ್ಮ, ಪತಿ ಗೋವಿಂದರಾಜು ಅವರು ಲಿಂಗರಾಜು ಹತ್ಯೆಗೆ ಸುಪಾರಿ ನೀಡಿರುವುದು ಸ್ಪಷ್ಟವಾಗಿತ್ತು. ರೌಡಿ ಶೀಟರ್ ಗೋರಿಪಾಳ್ಯದ ಚಂದ್ರು ಮತ್ತು ಆತನ ಸಹಚರರು ನ. 20, 2012 ರಂದು ಲಿಂಗರಾಜು ಅವರನ್ನು ಹತ್ಯೆ ಮಾಡಿರುವ ಬಗ್ಗೆ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣದ ವಾದ ಮತ್ತು ಪ್ರತಿ ವಾದ ಆಲಿಸಿರುವ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾ. ಲಕ್ಷ್ಮೀನಾರಾಯಣ ಅವರು ಅಕ್ಟೋಬರ್ 28ಕ್ಕೆ ತೀರ್ಪು ಕಾಯ್ದಿರಿಸಿದ್ದರು.
ಬೆಚ್ಚಿ ಬೀಳಿಸಿದ ಹತ್ಯೆ ಪ್ರಕರಣ: ಪತ್ರಕರ್ತ ಲಿಂಗರಾಜು ಮಾಹಿತಿ ಹಕ್ಕು ಅಡಿ ದಾಖಲೆಗಳನ್ನು ತೆಗೆದು ತನಿಖಾ ಸಂಸ್ಥೆಗಳಿಗೆ ದೂರು ನೀಡುತ್ತಿದ್ದರು. ಗೋವಿಂದರಾಜು ಅವರ ಜೊತೆಗೆ ಸ್ನೇಹದಿಂದ ಇದ್ದರೂ ಅವರ ಭೂ ಅಕ್ರಮ ಕುರಿತು ಲಿಂಗರಾಜು 2010ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಬಗ್ಗೆ ಮಾತುಕತೆ ರಾಜಿಗೆ ಗೋವಿಂದರಾಜು ಯತ್ನಿಸಿ ವಿಫಲರಾದಾಗ, ಲಿಂಗರಾಜುಗೆ ಬೆದರಿಕೆ ಹಾಕಿದ್ದರು. ಗೋವಿಂದರಾಜು ಬೆದರಿಕೆ ಹಾಕಿರುವ ಬಗ್ಗೆ ಲಿಂಗರಾಜು ವಕೀಲ ಧ್ರುವಕುಮಾರ್ ಅವರಿಂದ ಪ್ರಮಾಣ ಪತ್ರ ಕೂಡ ಮಾಡಿಸಿದ್ದರು.
ಅಜಾದ್ ನಗರ ಕಾರ್ಪೋರೇಟರ್ ಗೌರಮ್ಮ ಮತ್ತು ಗೋವಿಂದರಾಜು ಅವರ ಅಕ್ರಮ ಸಂಪತ್ತಿನ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಪೋರೇಟರ್ ಗೌರಮ್ಮ ಮತ್ತು ಗೋವಿಂದರಾಜು ವಿರುದ್ಧ ಅಕ್ರಮ ಆಸ್ತಿ ಗಳಿಕೆ ಕೇಸು ದಾಖಲಿಸಿ ದಾಳಿ ನಡೆಸಿದ್ದರು. ಈ ವೇಳೆ ಮಹತ್ವದ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದರು. ಇದಾದ ಕೆಲವೇ ದಿನಗಳ ಬಳಿಕ ದೂರುದಾರ ಲಿಂಗರಾಜು ಅವರನ್ನು ವಿಠ್ಠಲ್ ನಗರದ ಅವರ ನಿವಾಸದ ಎದುರಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.
Recommended Video
ಪ್ರಕರಣದ ಬೆನ್ನಟ್ಟಿದ ಪೊಲೀಸರು ಪ್ರಮುಖ ಸಾಕ್ಷಾಧಾರಗಳ ಆಧಾರದ ಮೇಲೆ ರೌಡಿ ಶೀಟರ್ ಚಂದ್ರು ಮತ್ತು ಆತನ ಸಹಚರರಾದ ವೇಲು, ಶಂಕರ್, ಉಮಾಶಂಕರ್, ರಂಗಸ್ವಾಮಿ, ರಾಘವೇಂದ್ರ, ಶಂಕರ್ ಎಂಬುವರನ್ನು ಬಂಧಿಸಿದ್ದರು.