ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
ಬೆಂಗಳೂರು, ಜುಲೈ 5: ಅಮೃತ್ ನಗರೋತ್ಥಾನ ಯೋಜನೆಯಡಿ ನಗರದ ಪೂರ್ವ ವಲಯಕ್ಕೆ 450 ಕೋಟಿ ರೂಪಾಯಿ ಮಂಜೂರಾಗಿದ್ದು, ಕಾಮಗಾರಿಗಳನ್ನು ಕೈಗೊಳ್ಳಲು ಟೆಂಡರ್ ಕರೆಯಲಾಗಿದೆ ಎಂದು ಮಳೆ ಹಾವಳಿ ತಡೆಗೆ ಪೂರ್ವ ವಲಯದ ಉಸ್ತುವಾರಿ ಆಗಿರುವ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಮಳೆಯಿಂದಾಗಬಹುದಾದ ತೊಂದರೆಗಳ ಬಗ್ಗೆ ಸಂಬಂಧ ಬಿಬಿಎಂಪಿ ಪೂರ್ವ ವಲಯದ ಅಧಿಕಾರಿಗಳ ಜತೆ ವರ್ಚುಯಲ್ ಸಭೆ ನಡೆಸಿದ ಅವರು, "450 ಕೋಟಿ ರೂ.ಗಳಲ್ಲಿ 180 ಕೋಟಿ ರೂಪಾಯಿಯನ್ನು ಮಳೆ ನೀರು ಚರಂಡಿ ಹೂಳೆತ್ತುವ ಕೆಲಸಕ್ಕೆ ವಿನಿಯೋಗಿಸಲಾಗುವುದು. ಇದಕ್ಕೆ ಸಹ ಈಗಾಗಲೇ ಟೆಂಡರ್ ಕರೆಯಲಾಗಿದೆ" ಎಂದು ಹೇಳಿದರು.
ಬೆಂಗಳೂರು ಮಳೆ: ತುಮಕೂರು ರಸ್ತೆ ಲಾಕ್, ಎಲೆಕ್ಟ್ರಾನಿಕ್ ಸಿಟಿ ರೋಡ್ ಜಾಮ್ !
ಪೂರ್ವ ವಲಯದ ವ್ಯಾಪ್ತಿಯ ರಸ್ತೆಗಳಲ್ಲಿ100 ಕಡೆಗಳಲ್ಲಿ ಮಳೆ ನೀರು ನಿಂತು ತೊಂದರೆ ಆಗುತ್ತಿದೆ. ಇದಕ್ಕೆ ಸಂಬಂಧಿಸಿದ ಎಂಜಿನಿಯರ್ಗಳು ತ್ವರಿತವಾಗಿ ಸಮಸ್ಯೆ ಸರಿಪಡಿಸಬೇಕು. ರಸ್ತೆ ಮಾಡುವಾಗಲೇ ಇಂತಹ ವಿಷಯಗಳನ್ನು ಗಮನಿಸಬೇಕು. ಇಲ್ಲದಿದ್ದರೆ ತಪ್ಪಿತಸ್ಥ ಎಂಜಿನಿಯರ್ ಗಳನ್ನು ಸಸ್ಪೆಂಡ್ ಮಾಡಲಾಗುವುದು. ಜತೆಗೆ, ಮಳೆನೀರು ನಿಂತು ಸಮಸ್ಯೆ ಆಗುತ್ತಿರುವ ಗೆದ್ದಲಹಳ್ಳಿ ಸೇತುವೆ ಬಳಿ ನಿಗಾ ಇಟ್ಟು, ಪರಿಸ್ಥಿತಿಯನ್ನು ಅವಲೋಕಿಸುತ್ತಿರಬೇಕು ಎಂದು ಅವರು ಎಚ್ಚರಿಸಿದ್ದಾರೆ.
ಇದರ ಜತೆಗೆ, ಒತ್ತುವರಿ ತೆರವು ಮಾಡಬೇಕು. ಇದರಿಂದ ಸಂತ್ರಸ್ತರಾಗುವವರಿಗೆ ಕೊಳೆಗೇರಿ ನಿರ್ಮೂಲನ ಮಂಡಲಿಯ ವತಿಯಿಂದ ಸೂಕ್ತ ವಸತಿ ಸೌಕರ್ಯ ಒದಗಿಸಿ ಕೊಡಲಾಗುವುದು ಎಂದು ಸಚಿವ ಅಶ್ವತ್ಥ ನಾರಾಯಣ ಭರವಸೆ ನೀಡಿದರು.
ಕಳೆದ ಬಾರಿ ಮಳೆಯಿಂದ ಬೆಂಗಳೂರು ಪೂರ್ವ ವಲಯದಲ್ಲಿ ಸಂತ್ರಸ್ತರಾಗಿದ್ದವರ ಪೈಕಿ 874 ಮಂದಿಗೆ ತಲಾ 25 ಸಾವಿರ ರೂಪಾಯಿ ಪರಿಹಾರ ನೀಡಲಾಗಿದೆ. 200 ಮಂದಿಗೆ ಪರಿಹಾರ ವಿತರಿಸಲು ತಾಂತ್ರಿಕ ತೊಂದರೆ ಎದುರಾಗಿದೆ. ಇದನ್ನು ಕೂಡ ಸದ್ಯವೇ ಪರಿಹರಿಸಿ, ಅವರಿಗೂ ಪರಿಹಾರ ಧನ ಸಿಗುವಂತೆ ಮಾಡಲಾಗುವುದು ಎಂದು ಹೇಳಿದರು.