ಬಿಜೆಪಿ ಅಭ್ಯರ್ಥಿ ಮುನಿರತ್ನ 'ಕೈ' ಬಲಪಡಿಸಿದ ನಳಿನ್ ಕುಮಾರ್ ಕಟೀಲ್
ಬೆಂಗಳೂರು, ಅ. 18: ಕನಕಪುರದಿಂದ ಬೆಂಗಳೂರಿಗೆ ಬಂದು ಗೂಂಡಾಗಿರಿ ಮಾಡುವುದು ನಡೆಯುವುದಿಲ್ಲ. ಕಾಂಗ್ರೆಸ್ನಿಂದ ಇವತ್ತು ಬಿಜೆಪಿಗೆ ಬಂದಿರುವವರು ಒಂದೊಂದು ಡೈನಮೆಟ್ ಪುಡಿಪುಡಿ ಮಾಡುತ್ತಾರೆ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಆರ್ ಆರ್ ನಗರ ಚುನಾವಣೆಗೆ ರಂಗು ತಂದಿದ್ದಾರೆ.
ಬಿಜೆಪಿ ಸಿದ್ದಾಂತ, ಮೋದಿ ಅವರ ಅಭಿವೃದ್ಧಿ ಕೆಲಸ, ಯಡಿಯೂರಪ್ಪ ಅವರ ಕೆಲಸ ಕಾರ್ಯಗಳನ್ನು ಒಪ್ಪಿಕೊಂಡು ಹಲವು ಕಾಂಗ್ರೆಸ್ ನಾಯಕರು ಇಂದು ಬಿಜೆಪಿ ಸೇರಿದ್ದಾರೆ. ಇಂದು ನಮ್ಮ ಪಕ್ಷ ಸೇರಿದವರನ್ನು ಸಕ್ಕರೆ ಎಂದು ಅಂದುಕೊಳ್ಳುತ್ತೇನೆ. ಹಾಲಿಗೆ ಸಕ್ಕರೆ ಸೇರಿದ್ರೆ ಸಕ್ಕರೆ ಕಾಣಲ್ಲ, ಬರೀ ಸಿಹಿ ಇರುತ್ತೆ. ಹಾಗೆಯೆ ಆರ್ ಆರ್ ನಗರ ಚುನಾವಣಾ ಫಲಿತಾಂಶ ಕೂಡ ಸಿಹಿಯಾಗಲಿದೆ ಎಂದು ಕಟೀಲ್ ಭವಿಷ್ಯ ನುಡಿದರು. ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಮನೆ ಖಾಲಿ ಆಗುತ್ತಿದೆ, ಬಿಜೆಪಿ ಮನೆ ತುಂಬುತ್ತಿದೆ. ದೇಶದಲ್ಲಿ ಬಿಜೆಪಿ ಪರ್ವ ಇದೆ. ಆರ್ ಆರ್ ನಗರದಲ್ಲಿ ಅಭಿವೃದ್ಧಿ ಪರ ಜನ ಇದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಶುರುವಾಯ್ತು ಪಕ್ಷಾಂತರ ಪರ್ವ
ಆರ್ ಆರ್ ನಗರ ಉಪ ಚುನಾವಣೆ ನಿಧಾನವಾಗಿ ರಂಗೇರುತ್ತಿದೆ. ಪಕ್ಷಾಂತರ ಪರ್ವ ಇದೀಗ ಆರಂಭವಾಗಿದ್ದು, ಬೃಹತ್ ಪ್ರಮಾಣದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಸ್ಥಳಿಯ ನಾಯಕರು ಬಿಜೆಪಿ ಸೇರಿದ್ದಾರೆ. ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪದಂತೆಯೇ ಎರಡೂ ರಾಜಕೀಯ ಪಕ್ಷಗಳ ಪಕ್ಷಗಳ ನಾಯಕರು ಜೆಡಿಎಸ್ ಪಕ್ಷಕ್ಕೆ ಲಗ್ಗೆ ಹಾಕಿವೆ. ಜೊತೆಗೆ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರೂ ಕೂಡ ಇವತ್ತು ಬಿಜೆಪಿ ಸೇರಿದ್ದಾರೆ.
ಉಪ ಚುನಾವಣೆ: ಒಟ್ಟು 37 ಅಭ್ಯರ್ಥಿಗಳು ಕಣದಲ್ಲಿ!
ಇದು ಬಿಜೆಪಿ ಜೋಡುತ್ತಗಳ ಚುನಾವಣೆ
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರವನ್ನು ನೋಡಿದ್ದಾರೆ. ಜಾತಿ, ಧರ್ಮದ ರಾಜಕೀಯ ಮಾಡಿದ್ರು. ಈಗ ಜನ ಜಾತಿ ಧರ್ಮ ನೋಡಲ್ಲ ಅಭಿವೃದ್ಧಿ ನೋಡುತ್ತಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ತಿಹಾರ್ ಜೈಲಿಗೆ ಹೋಗಿದ್ದನ್ನು ಜನರು ನೋಡಿದ್ದಾರೆ. ಹೋಗುವಾಗ ಮೆರವಣಿಗೆ, ಬರುವಾಗ ಮೆರವಣಿಗೆ, ನಿಂತಾಗ ಮೆರವಣಿಗೆ ಎಲ್ಲವನ್ನು ಜನರು ನೋಡಿದ್ದಾರೆ. ಎರಡು ಜೋಡೆತ್ತುಗಳ ನೇತೃತ್ವದಲ್ಲಿ ಆರ್ ಆರ್ ನಗರ ಚುನಾವಣೆ ನಡೆಯುತ್ತದೆ. ಅರವಿಂದ್ ಲಿಂಬಾವಳಿ, ಆರ್ ಅಶೋಕ್ ಎರಡು ಜೋಡೆತ್ತುಗಳ ನೇತೃತ್ವದಲ್ಲಿ ಈ ಉಪ ಚುನಾವಣೆ ನಡೆಯಲಿದೆ. ಅಶೋಕ್ ಸಾಮ್ರಾಟ್, ಲಿಂಬಾವಳಿ ನೇತೃತ್ವದಲ್ಲಿ ಚುನಾವಣೆಯಲ್ಲಿ ಮುನಿರತ್ನ ಬಾವುಟವನ್ನು ಹಾರಿಸುತ್ತಾರೆ ಎಂದರು.
ಹಾಳೂರಿಗೆ ಉಳಿದವನೇ ಗೌಡ
ಇದು ಒಂದು ತಾತ್ವಿಕ ಚುನಾವಣೆ. ರಾಷ್ಟ್ರ ಮೊದಲು ಅಂತ ಬಿಜೆಪಿ, ಅಭಿವೃದ್ಧಿ ಅನ್ನೊದು ಮುನಿರತ್ನ. ಜೈಲಿಗೆ ಹೋಗಿ ಬಂದವರನ್ನು ಮೆರವಣಿಗೆ ಮಾಡುತ್ತಾರೆ. ಅವರು ಸ್ವಾತಂತ್ರ್ಯ ಹೋರಾಟಗಾರರಾಗುತ್ತಾರೆ. ಅದು ಸಂಭ್ರಮವೋ ಅಥವಾ ಅಪಮಾನವೊ ಗೊತ್ತಿಲ್ಲ. ನಾಯಕತ್ವ ಅನ್ನುವುದು ಜೊತೆಗೆ ಇರುವವರನ್ನು ಮುಗಿಸುವುದಲ್ಲ, ಬೆಳೆಸುವುದು ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಉಪಚುನಾವಣೆ ಹೊಸ್ತಿಲಲ್ಲಿ ಕುಮಾರಸ್ವಾಮಿ ವಿರುದ್ದ ಡಿಕೆಶಿ ಬ್ರದರ್ಸ್ ಭರ್ಜರಿ ಬೇಟೆ
ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ರಾಮನಗರದಲ್ಲಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಒಂದೇ ಕ್ಷೇತ್ರ ಗೆದ್ದಿರುವುದು. ಇವಾಗ ಜಾತಿ ತರುತ್ತಿದ್ದಾರೆ ಸಚಿವ ಆರ್. ಅಶೋಕ್ ಒಕ್ಕಲಿಗರಲ್ವಾ? ನಾನು ಒಕ್ಕಲಿಗ ಅಲ್ವಾ? ತಮ್ಮದೇ ಪಕ್ಷದ ದಲಿತ ನಾಯಕರ ಮನೆಗೆ ಬೆಂಕಿ ಹಾಕಿಸಿದ್ರು. ಅವರದೇ ಪಕ್ಷದ ನಾಯಕರಿಗೆ ಅವರದೇ ಪಕ್ಷದವರು ಬೆಂಕಿ ಇಟ್ಟಿದ್ದಾರೆ ಎಂದು ಸಿಟಿ ರವಿ ಆರೋಪಿಸಿದರು.
ಸಿನಿಮಾ ಥಿಯೇಟರ್ ಈಗಷ್ಟೇ ಓಪನ್ ಆಗಿದೆ
ಹಿಂದಿನ ಸಮ್ಮಿಶ್ರ ಸರ್ಕಾರ ಒಳ್ಳೆಯ ಆಡಳಿತ ಕೊಡುತ್ತಿಲ್ಲ ಎಂದು 17 ಜನರು ಬಿಜೆಪಿ ಸೇರಿದ್ದರು. ಅವರೆಲ್ಲ ಸುಪ್ರೀಂ ಕೋರ್ಟ್ವರೆಗೂ ಹೋಗಿ ಗೆಲುವು ಸಾಧಿಸಿದ್ದಾರೆ. ಉಪ ಚುನಾವಣೆ ಮಹಾಸಮರದಲ್ಲಿ 117ಕ್ಕೆ ಏರಿದ್ದೇವೆ. ಆರ್ ಆರ್ ನಗರದಲ್ಲಿ ಸಿನಿಮಾ ಥಿಯೇಟರ್ ಈಗಷ್ಟೇ ಓಪನ್ ಆಗಿದೆ. ಮುನಿರತ್ನ ಕೂಡ ಸಿನಿಮಾ ಕ್ಷೇತ್ರದಲ್ಲಿ ಇದ್ದಾರೆ. ಮತಗಟ್ಟೆಗೆ ಮತದಾರರು ಬರುವುದು ಕಡಿಮೆ, ಅದರಲ್ಲೂ ಉಪ ಚುನಾವಣೆಯಲ್ಲಿ ಇನ್ನೂ ಕಡಿಮೆ. 9 ವಾರ್ಡ್ಗಳ ಸದಸ್ಯರು, ಮುಖಂಡರು ಬಿಜೆಪಿ ಸೇರುತ್ತಿದ್ದಾರೆ ಎಂದು ಅರವಿಂದ್ ಲಿಂಬಾವಳಿ ಮಾತನಾಡಿದರು.
ಇದೇ ಸಂದರ್ಭಧಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು, ನಾನು ಇವಾಗ ಏನೂ ಮಾತಾಡುವುದಿಲ್ಲ. ಎಲ್ಲಾ ನಾಯಕರು ಮಾತಾಡಿದ್ದಾರೆ. ಆರ್ ಆರ್ ನಗರ ಚುನಾವಣೆ ಗೆದ್ದ ನಂತರ ನಾವು ಮಾತನಾಡೊಣ ಎಂದರು.