ಆರ್.ಆರ್.ನಗರ: ಮುನಿರತ್ನಗೆ ಜೆಡಿಎಸ್ ನಿಂದ ಟಿಕೆಟ್? ಕುಮಾರಸ್ವಾಮಿ ಸ್ಪಷ್ಟನೆ
ಬೆಂಗಳೂರು, ಅ 9: ರಾಜರಾಜೇಶ್ವರಿ ನಗರ ಅಸೆಂಬ್ಲಿ ಉಪಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ, ಮುನಿರತ್ನಗೆ ಟಿಕೆಟ್ ನಿರಾಕರಿಸಿದರೆ, ಜೆಡಿಎಸ್ ಟಿಕೆಟ್ ನೀಡುವ ಸಂಬಂಧ ಹರಿದಾಡುತ್ತಿದ್ದ ಸುದ್ದಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
Recommended Video
"ಬೇರೆ ಪಕ್ಷದಿಂದ ಬಂದವರಿಗೆಲ್ಲಾ ಟಿಕೆಟ್ ನೀಡಿ, ನೀಡಿ ನಮ್ಮ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ಅನಾಥರನ್ನಾಗಿ ಮಾಡಲು ಸಾಧ್ಯವಿಲ್ಲ"ಎಂದು ಹೇಳಿರುವ ಕುಮಾರಸ್ವಾಮಿ ಮುನಿರತ್ನಗೆ ಟಿಕೆಟ್ ನೀಡುವುದಿಲ್ಲಎಂದು ಸ್ಪಷ್ಟ ಪಡಿಸಿದ್ದಾರೆ.
ಆರ್.ಆರ್.ನಗರ: ಬಿಜೆಪಿ ಟಿಕೆಟ್ ಸಿಗದೇ ಇದ್ದಲ್ಲಿ ಮುನಿರತ್ನ ಪ್ಲ್ಯಾನ್ ಬಿ ರೆಡಿ!
"ಸದ್ಯಕ್ಕೆ ನಮ್ಮ ಪಕ್ಷದಿಂದ ಮೂವರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಇದನ್ನು ಹೊರತಾಗಿ ಯಾರೂ ಟಿಕೆಟ್ ಬೇಕೆಂದು ಅರ್ಜಿಯನ್ನು ಸಲ್ಲಿಸಲಿಲ್ಲ. ಬೇರೆ ಯಾರಿಗೂ ಟಿಕೆಟ್ ನೀಡುವ ವಿಚಾರದಲ್ಲಿ ಚಿಂತನೆ ನಡೆಸಿಲ್ಲ"ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿಯಿಂದ ಮುನಿರತ್ನಗೆ ಟಿಕೆಟ್ ಒಲಿಯಲಿದೆ ಎಂದು ಹೇಳಲಾಗುತ್ತಿದೆ. ಆದರೂ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ತುಳಸಿ ಮುನಿರಾಜು ಬೆನ್ನಿಗೆ ನಿಂತಿರುವುದರಿಂದ ಇವರಿಬ್ಬರಲ್ಲಿ ಯಾರಿಗಾದರೂ ಟಿಕೆಟ್ ಸಿಗುವ ಸಾಧ್ಯತೆಯಿದೆ. ಹೀಗಾಗಿ, ಬಿಜೆಪಿಯಿಂದ ಟಿಕೆಟ್ ಸಿಗದೇ ಇದ್ದರೆ, ಮುನಿರತ್ನ, ಬೇರೆ ಯೋಜನೆ ಹಾಕಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು.
"ನನಗೆ ಟಿಕೆಟ್ ಸಿಕ್ಕರೆ ಬಿಜೆಪಿಯಿಂದ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆಯೇ ಹೊರತು ಪಕ್ಷ ಬಿಡುವ ನಿರ್ಧಾರ ತೆಗೆದುಕೊಳ್ಲುವುದಿಲ್ಲ"ಎಂದು ಮುನಿರತ್ನ ಹೇಳಿದ್ದರು.
ಮಾಜಿ ಸಿಎಂ ಎಚ್ಡಿಕೆ ಪ್ರಕಾರ 'ಆಪರೇಶನ್ ಕಮಲ'ದ ರೂವಾರಿ ಯಾರು ಗೊತ್ತಾ?
ಜೆಡಿಎಸ್ ಪಕ್ಷ, ಆರ್.ಆರ್.ನಗರದಿಂದ ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸಲಿಲ್ಲ. ಕಾದು ನೋಡುವ ತಂತ್ರಕ್ಕೆ ಸದ್ಯ ಮುಂದಾಗಿರುವ ಜೆಡಿಎಸ್, ಒಂದು ವೇಳೆ, ಮುನಿರತ್ನಗೆ ಬಿಜೆಪಿ ಟಿಕೆಟ್ ಸಿಗದೇ ಇದ್ದಲ್ಲಿ ಅವರನ್ನು ತಮ್ಮತ್ತ ಸೆಳೆಯುವ ಯೋಜನೆ ಹಾಕಿಕೊಂಡಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.