ಮುಂದುವರಿದ ಸಸ್ಪೆನ್ಸ್: ಆರ್.ಆರ್.ನಗರದಲ್ಲಿ ಮುನಿರತ್ನಗೆ ಬಿಜೆಪಿ ಟಿಕೆಟ್ ನಿರಾಕರಣೆ?
ಬೆಂಗಳೂರು, ಅ 13: ರಾಜರಾಜೇಶ್ವರಿ ನಗರ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕಕ್ಕೆ ಇನ್ನು ನಾಲ್ಕು ದಿನವಷ್ಟೇ ಬಾಕಿಯಿದೆ. ಆದರೆ, ಬಿಜೆಪಿ ಹೈಕಮಾಂಡ್ ನ ಸಸ್ಪೆನ್ಸ್ ಹಾಗೇ ಮುಂದುವರಿದಿದೆ.
ಇಬ್ಬರು ಟಿಕೆಟ್ ಆಕಾಂಕ್ಷಿಗಳ ಎದೆಬಡಿತವನ್ನು ದಿನದಿಂದ ದಿನಕ್ಕೆ ಜಾಸ್ತಿ ಮಾಡುತ್ತಿರುವ ಬಿಜೆಪಿಯ ಕೇಂದ್ರದ ನಾಯಕರು, ಬಿಹಾರ ಅಸೆಂಬ್ಲಿ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮತ್ತು ತಂತ್ರಗಾರಿಕೆಯಲ್ಲಿ ಬ್ಯೂಸಿಯಾಗಿದೆ.
ಆರ್.ಆರ್.ನಗರ: ಮುನಿರತ್ನಗೆ ಜೆಡಿಎಸ್ ನಿಂದ ಟಿಕೆಟ್? ಕುಮಾರಸ್ವಾಮಿ ಸ್ಪಷ್ಟನೆ
ಇನ್ನು ಸೋಮವಾರ (ಅ 12) ಸಂಜೆಯೊಳಗೆ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿಕುಮಾರಸ್ವಾಮಿ ಹೇಳಿಕೆ ನೀಡಿದ್ದರೂ, ಜೆಡಿಎಸ್ ಇನ್ನೂ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಿಲ್ಲ.
ಕಾದು ನೋಡುವ ತಂತ್ರಕ್ಕೆ ಮೊರೆ ಹೋದಂತಿರುವ ಕುಮಾರಸ್ವಾಮಿ, ಬಿಜೆಪಿ ಟಿಕೆಟ್ ಆಕಾಂಕ್ಷಿ ಮುನಿರತ್ನಗಾಗಿ ಕಾಯುತ್ತಿದ್ದಾರಾ ಎನ್ನುವ ಪ್ರಶ್ನೆ ಉದ್ಬವವಾಗಿದೆ. ಎಲ್ಲಾ ವಿದ್ಯಮಾನಗಳ ನಡುವೆ, ಮುನಿರತ್ನಗೆ ಟಿಕೆಟ್ ಸಿಗುವ ಸಾಧ್ಯತೆ ಕಮ್ಮಿ ಎಂದು ಹೇಳಲಾಗುತ್ತಿದೆ.
ಆರ್.ಆರ್.ನಗರ ಚುನಾವಣೆಯಲ್ಲಿ ವಿಭಿನ್ನ ಕಾರ್ಯತಂತ್ರ: ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂದ ಡಿಕೆಶಿ
ಅರ್ಜಿಯ ವಿಚಾರಣೆ ಮಂಗಳವಾರ ಸುಪ್ರೀಂಕೋರ್ಟ್ ನಲ್ಲಿ
ಮುನಿರತ್ನ ಅವರ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ಮಂಗಳವಾರ ಸುಪ್ರೀಂಕೋರ್ಟ್ ನಲ್ಲಿ ನಡೆಯಲಿದೆ. ನ್ಯಾಯಾಲಯ ಏನು ತೀರ್ಪು ನೀಡುತ್ತದೆ ಎನ್ನುವುದನ್ನು ಆಧರಿಸಿ, ಬಿಜೆಪಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ. ಒಂದು ವೇಳೆ, ಈ ಅರ್ಜಿಯ ವಿಚಾರಣೆ ಮತ್ತೆ ಮುಂದಕ್ಕೆ ಹೋದರೆ, ಮುನಿರತ್ನಗೆ ಟಿಕೆಟ್ ಸಿಗುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ.ಈಗ ಬಂದಿರುವ ಸುದ್ದಿಯ ಪ್ರಕಾರ, ನ್ಯಾಯಾಲಯದಲ್ಲಿ ತುಳಸಿ ಮುನಿರಾಜು ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು, ಈ ವಿಚಾರದಲ್ಲಿ ಮುನಿರತ್ನಗೆ ರಿಲೀಫ್ ಸಿಕ್ಕಿದೆ.
ತುಳಸಿ ಮುನಿರಾಜು ಗೌಡ ಆರಂಭದಿಂದಲೂ ಮುನಿರತ್ನ ವಿರುದ್ದ ಹೋರಟ
ಇನ್ನು, ಕ್ಷೇತ್ರದ ಬಿಜೆಪಿ ಮುಖಂಡ ಮತ್ತು ಟಿಕೆಟ್ ಆಕಾಂಕ್ಷಿ ತುಳಸಿ ಮುನಿರಾಜು ಗೌಡ ಆರಂಭದಿಂದಲೂ ಮುನಿರತ್ನ ವಿರುದ್ದ ಹೋರಟ ನಡೆಸುತ್ತಲೇ ಬಂದವರು. ಮುನಿರತ್ನ ವಿರುದ್ದ ಕೋರ್ಟ್ ಮೆಟ್ಟಲೇರಲು, ಬಿಜೆಪಿಯ ವರಿಷ್ಠರೇ ಈ ಹಿಂದೆ ಗ್ರೀನ್ ಸಿಗ್ನಲ್ ನೀಡಿದ್ದರು. ಈಗ ನಿಲುವು ಬದಲಾಯಿಸುವುದು ಸರಿಯಲ್ಲ ಎನ್ನುವ ನಿಲುವನ್ನು ವರಿಷ್ಠರು ತಾಳಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿಎಂ ಯಡಿಯೂರಪ್ಪನವರ ಅಭಯ
ಬಿಜೆಪಿ ಟಿಕೆಟ್ ನೀಡದಿದ್ದರೆ ತನ್ನ ಮುಂದಿರುವ ಎಲ್ಲಾ ಆಯ್ಕೆಯನ್ನು ಸಿಎಂ ಯಡಿಯೂರಪ್ಪನವರ ಮುಂದೆ ಮುನಿರತ್ನ ಇಟ್ಟಿದ್ದಾರೆ ಎನ್ನುವ ಸುದ್ದಿಯೂ ಇದೆ. ತಾಳ್ಮೆಯಿಂದ ಇರಲು ಯಡಿಯೂರಪ್ಪ ಸೂಚಿಸಿದ್ದು, ಟಿಕೆಟ್ ಕೊಡಿಸುವ ಜವಾಬ್ದಾರಿ ನನ್ನದು ಎನ್ನುವ ಅಭಯವನ್ನು ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರನ್ನು ಭೇಟಿಯಾದ ಮುನಿರತ್ನ
ಇದರ ಜೊತೆಗೆ, ಮುನಿರತ್ನ ಕ್ಷೇತ್ರದ ಮುಖಂಡರ ಜೊತೆಗೆ ಸಾಲುಸಾಲು ಸಭೆಗಳನ್ನು ನಡೆಸುತ್ತಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರನ್ನು ಮಂಗಳವಾರ (ಅ 13) ಭೇಟಿಯಾಗಿದ್ದಾರೆ. ಟಿಕೆಟ್ ಸಿಗದೇ ಇದ್ದಲ್ಲಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದೋ ಅಥವಾ ಜೆಡಿಎಸ್ ನಿಂದ ಸ್ಪರ್ಧಿಸುವುದೋ ಎನ್ನುವುದರ ಬಗ್ಗೆ ಮುನಿರತ್ನ ಚಿಂತನೆ ನಡೆಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.