ಆರ್.ಆರ್.ನಗರ ಚುನಾವಣೆಯಲ್ಲಿ ವಿಭಿನ್ನ ಕಾರ್ಯತಂತ್ರ: ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂದ ಡಿಕೆಶಿ
ಬೆಂಗಳೂರು, ಅ10: ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿ, ಈ ವಿಚಾರದಲ್ಲಿ ಇತರ ಎರಡು ಪಕ್ಷಗಳಿಗಿಂತ ಮುಂದಿದೆ. ಶಿರಾದಲ್ಲಿ ಪಕ್ಷದ ಅಭ್ಯರ್ಥಿ ಟಿ.ಬಿ.ಜಯಚಂದ್ರ ನಾಮಪತ್ರ ಸಲ್ಲಿಸಿಯಾಗಿದೆ.
ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಮೀನಮೇಷ ಎಣಿಸುತ್ತಿದೆ. ಶಿರಾದಲ್ಲಿ, ದಿವಂಗತ ಸತ್ಯನಾರಾಯಣ ಅವರ ಪತ್ನಿಗೆ ಟಿಕೆಟ್ ಘೋಷಣೆಯಾಗಿದ್ದರೂ, ಅವರು ಕೋವಿಡ್ ಸೋಂಕಿಗೆ ತಗಲಿರುವುದರಿಂದ, ಪ್ರಚಾರದ ಭರಾಟೆ ಇನ್ನೂ ಆರಂಭವಾಗಿಲ್ಲ.
ಆರ್.ಆರ್.ನಗರ: ಈ 3ಕಾರಣಕ್ಕಾಗಿ ಡಿ.ಕೆ.ಶಿವಕುಮಾರ್ ಗೆ ಇದು ಪ್ರತಿಷ್ಠೆಯ ಚುನಾವಣೆ
ಈ ಹಿಂದೆ ಹಲವು ಬಾರಿ ಹೇಳಿದಂತೆ, ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾದ ಮೇಲೆ ನಡೆಯುತ್ತಿರುವಂತಹ ಚುನಾವಣೆಯಿದು. ಶಿರಾಗಿಂತಲೂ, ಆರ್.ಆರ್.ನಗರ ಕ್ಷೇತ್ರವನ್ನು ವೈಯಕ್ತಿಕವಾಗಿ ಡಿಕೆಶಿ ಸಹೋದರರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣ ಇಲ್ಲದಿಲ್ಲ.
ಪ್ರಮುಖವಾಗಿ ಆರ್.ಆರ್.ನಗರದಲ್ಲಿ, ಡಿಕೆಶಿ ವಿಭಿನ್ನ ರೀತಿಯ ಕಾರ್ಯತಂತ್ರಕ್ಕೆ ಈ ಬಾರಿ ಕೈಹಾಕಿದ್ದಾರೆ ಎಂದು ವರದಿಯಾಗುತ್ತಿದೆ. ಈ ಕ್ಷೇತ್ರ, ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ ಬರುವಂತದ್ದು. ಏನಿದು ವಿಭಿನ್ನ ಕಾರ್ಯತಂತ್ರ?
ಶಿರಾ ಉಪಚುನಾವಣೆ: ಕಾಂಗ್ರೆಸ್ ನೆಮ್ಮದಿಗೆ ಭಂಗ ತಂದ 'ಪವಿತ್ರ ಸ್ನೇಹ'
ಆರ್.ಆರ್.ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ
ಆರ್.ಆರ್.ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಈಗಾಗಲೇ ಕಾರ್ಯಕರ್ತರನ್ನೆಲ್ಲಾ ಭೇಟಿಯಾಗಿ ಮಾತನಾಡುತ್ತಿದ್ದಾರೆ. "ನನ್ನ ಪತಿ ಡಿ.ಕೆ.ರವಿಯವರ ಹೆಸರನ್ನು ಬಳಸುವುದಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಮುಂದಿಟ್ಟುಕೊಂಡು, ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವೆ. ರಾಜಕೀಯ ನನಗೇನೂ ಹೊಸದಲ್ಲ" ಎಂದು ಹೇಳಿದ್ದಾರೆ.
ಆರ್.ಆರ್.ನಗರ ಕ್ಷೇತ್ರದ ಚುನಾವಣಾ ಉಸ್ತುವಾರಿ ಡಿ.ಕೆ.ಸುರೇಶ್
ಆರ್.ಆರ್.ನಗರ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ಡಿ.ಕೆ.ಸುರೇಶ್ ವಹಿಸಿಕೊಂಡಿದ್ದಾರೆ. ಅದರಂತೆಯೇ, ಅವರು ಪ್ರತೀ ವಾರ್ಡಿಗೆ ಒಬ್ಬಬ್ಬರೊಬ್ಬರನ್ನು ನೇಮಿಸಿದ್ದಾರೆ. ಇವರಿಗೆಲ್ಲಾ ನಿರ್ದಿಷ್ಟ ಜವಾಬ್ದಾರಿಯನ್ನು ವಹಿಸಲಾಗಿದೆ. ಇವರೆಲ್ಲಾ, ತಮ್ಮ ವೇಗಕ್ಕೆ ಮತ್ತು ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರಾ ಎಂದು ಚೆಕ್ ಮಾಡಲು ಡಿಕೆಶಿ ಇನ್ನೊಂದು ಪಡೆಯನ್ನು ನೇಮಿಸಿದ್ದಾರೆ.
ಕನಕಪುರ ಮತ್ತು ರಾಮನಗರದ ತಮ್ಮಾಪ್ತರನ್ನು ಆರ್.ಆರ್.ನಗರ ಫೀಲ್ಡಿಗೆ
ಸಾಮಾನ್ಯವಾಗಿ ಬಿಜೆಪಿಯ ಕೇಂದ್ರದ ನಾಯಕರು ಈ ಕಾರ್ಯತಂತ್ರವನ್ನು ಬಳಸುತ್ತಾರೆ. ರಾಜ್ಯ ಘಟಕ ಏನೇ ವರದಿ ನೀಡಿದರೂ, ತಮ್ಮದೇ ಮೂಲದಿಂದ ವರದಿಯನ್ನು ಪಡೆದುಕೊಳ್ಳುತ್ತಾರೆ. ಅದೇ ರೀತಿ, ಡಿಕೆಶಿ ಸಹೋದರರು, ಕನಕಪುರ ಮತ್ತು ರಾಮನಗರದ ತಮ್ಮಾಪ್ತರನ್ನು ಆರ್.ಆರ್.ನಗರ ಫೀಲ್ಡಿಗೆ ಇಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Recommended Video
ಹೈಕಮಾಂಡ್ ಮಟ್ಟದಲ್ಲೂ ತನ್ನ ಛಾಪನ್ನು ಮೂಡಿಸಲು ಡಿಕೆಶಿಗೆ ಇದೊಳ್ಳೆಯ ಸಮಯ
ಡಿಕೆಶಿ ಸಹೋದರರ ಆಪ್ತರು, ಜವಾಬ್ದಾರಿಯನ್ನು ವಹಿಸಿಕೊಂಡಿರುವವರು, ಸಮರ್ಥವಾಗಿ ಅದನ್ನು ನಿರ್ವಹಿಸುತ್ತಿದ್ದಾರಾ ಎನ್ನುವುದರ ಬಗ್ಗೆ ಕಣ್ಣಿಟ್ಟು, ವರದಿಯನ್ನು ಡಿಕೆಶಿ ಸಹೋದರರಿಗೆ ನೀಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸಹೋದರನ ಕ್ಷೇತ್ರ ಮತ್ತು ಈ ಚುನಾವಣೆಯ ಮೂಲಕ ಹೈಕಮಾಂಡ್ ಮಟ್ಟದಲ್ಲೂ ತನ್ನ ಛಾಪನ್ನು ಮೂಡಿಸಲು ಡಿಕೆಶಿಗೆ ಇದೊಳ್ಳೆಯ ಸಮಯವಾಗಿರುವುದರಿಂದ, ಯಾವ ಅವಕಾಶವನ್ನೂ ಡಿಕೆಶಿ ಕಳೆದುಕೊಳ್ಳಲು ಸಿದ್ದರಿಲ್ಲ ಎಂದು ಹೇಳಲಾಗುತ್ತಿದೆ.