ಆರ್.ಆರ್.ನಗರ ಉಪಚುನಾವಣೆ: ಡಿ.ಕೆ.ಸುರೇಶ್ ಗೆ ಕಾಡುತ್ತಿರುವ ಆತಂಕ ಈ ಒಂದು ವಾರ್ಡಿದ್ದು!
ಬೆಂಗಳೂರು, ನ 9: ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ನೇರ ಸ್ಪರ್ಧೆ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ. ಇಲ್ಲಿ, ಜೆಡಿಎಸ್ ಜಯದ ಹತ್ತಿರ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ಸೋಲು ಒಪ್ಪಿಕೊಂಡಿದ್ದಾರೆ.
ಇನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಗೆಲುವು ನಮ್ಮದೇ ಎಂದು ಹೇಳುತ್ತಿದ್ದಾರೆ. ಕನ್ನಡ ವಾಹಿನಿಗಳ ಮತಗಟ್ಟೆ ಸಮೀಕ್ಷೆಯ ಪ್ರಕಾರ ಬಿಜೆಪಿ ಇಲ್ಲಿ ಗೆಲುವು ಸಾಧಿಸಲಿದೆ. ಇದರ ಸತ್ಯಾಸತ್ಯತೆ ತಿಳಿಯಲು ನವೆಂಬರ್ ಹತ್ತರವರೆಗೆ ಕಾದರೆ ಸಾಕು.
ಆರ್.ಆರ್.ನಗರ ಕಡಿಮೆ ವೋಟಿಂಗ್, ಯಾರಿಗೆ ಲಾಭ: ಫೋಟೋ ಫಿನಿಷ್ ಫಲಿತಾಂಶ?
ಇನ್ನು ಕ್ಷೇತ್ರದ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಡಿಕೆಶಿ ಸಹೋದರರಿಗೆ ಇದು ಪ್ರತಿಷ್ಠೆಯ ಪ್ರಶ್ನೆ. ಅದರಲ್ಲೂ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರವನ್ನು ಸುತ್ತಾಡಿದ್ದರು. ಆರ್.ಆರ್.ನಗರ, ಸುರೇಶ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವಂತದ್ದು.
ಚುನಾವಣೆ ಮುಗಿದ ನಂತರ ಬೂತ್ ಮಟ್ಟದ ಸರ್ವೇಯನ್ನು ಡಿ.ಕೆ.ಸುರೇಶ್ ಮಾಡಿಸಿದ್ದಾರೆಂದು ಹೇಳಲಾಗುತ್ತಿದೆ. ಅದರ ವರದಿಯ ಪ್ರಕಾರ, ಒಂದು ವಾರ್ಡ್ ಅನ್ನು ಬಿಟ್ಟು ಮಿಕ್ಕೆಲ್ಲಾ ವಾರ್ಡಿನಲ್ಲಿ ಕಾಂಗ್ರೆಸ್ಸಿಗೆ ಪೂರಕ ವಾತಾವರಣವಿದೆ.
ಆದರೆ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿನಿಧಿಸುವ ಯಶವಂತಪುರ ವಾರ್ಡಿನಲ್ಲಿ ಬಿಜೆಪಿ ಮುನ್ನಡೆ ಸಾಧಿಸಬಹುದು ಎನ್ನುವ ವರದಿ ಸಮೀಕ್ಷೆಯಲ್ಲಿದೆ ಎಂದು ಹೇಳಲಾಗುತ್ತಿದೆ. ಈ ಒಂದು ಅಂಶ, ಕ್ಷೇತ್ರದ ಫಲಿತಾಂಶವನ್ನು ಬದಲಾಯಿಸಬಹುದಾ ಎನ್ನುವ ಆತಂಕ ಡಿ.ಕೆ.ಸುರೇಶ್ ಅವರಲ್ಲಿದೆ.
Recommended Video
ಯಶವಂತಪುರ, ಜಾಲಹಳ್ಳಿ, ಆರ್.ಆರ್.ನಗರ, ಜ್ಞಾನಭಾರತಿ, ಲಕ್ಶ್ಮೀದೇವಿ ನಗರ ವಾರ್ಡ್ ನಲ್ಲಿ ತುಸು ಹೆಚ್ಚಿನ ವೋಟಿಂಗ್ ನಡೆದಿತ್ತು. ಈ ಭಾಗದಲ್ಲಿ ಮುನಿರತ್ನ ಅವರಿಗೆ ಹೆಚ್ಚಿನ ಕಂಟ್ರೋಲ್ ಇರುವುದರಿಂದ ಮತ್ತು ಕ್ಷೇತ್ರದ ಚಿತ್ರಣವನ್ನು ಬಲ್ಲವರಾಗಿರುವುದರಿಂದ, ಬಿಜೆಪಿಗೆ ಇದರ ಲಾಭವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಕಮಲದ ನಾಯಕರು ಕೂಡಾ..