ಕಾಂಗ್ರೆಸ್ಸಿನ ಸಿಎಂ ಅಭ್ಯರ್ಥಿ ಯಾರು: ಡಿಕೆಶಿ ವಿರುದ್ದ ಮುನಿರತ್ನ ಸಿಡಿಸಿದ ಹೊಸ ಬಾಂಬ್
ಬೆಂಗಳೂರು, ಅ 27: ಎರಡು ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರ ಮುಗಿಯಲು ಇನ್ನೇನು ಕೆಲವು ದಿನಗಳು ಬಾಕಿಯಿದೆ. ಈ ಮಧ್ಯೆ, ಮೂರು ಪಕ್ಷದ ನಾಯಕರ ಆರೋಪ, ಪ್ರತ್ಯಾರೋಪ ತಾರಕಕ್ಕೇರಿದೆ.
ಈ ಹಿಂದೆ ಒಂದೇ ಪಕ್ಷದಲ್ಲಿದ್ದವರು ಈಗ ವಿರೋಧಿಗಳಾಗಿದ್ದಾರೆ. ಅದರಲ್ಲೂ, ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಂತೂ, ಬಿಜೆಪಿ ಅಭ್ಯರ್ಥಿ ಮುನಿರತ್ನ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ವಾಕ್ಸಮರ ಮತ್ತೊಂದು ಮಜಲಿನತ್ತ ಸಾಗುತ್ತಿದೆ.
ಜಮೀರ್ ಅಹ್ಮದ್ ಆಡಿದ ಒಂದೇ ಮಾತಿಗೆ ಡಿ.ಕೆ.ಶಿವಕುಮಾರ್ ತಲ್ಲಣ!
ವಿರೋಧಿ ಪಾಳಯದಲ್ಲಿರುವವರು ಸರಿಸಮಾನರಾಗಿದ್ದರೆ ಮಾತ್ರ ಹೋರಾಟ ಮಾಡಬಹುದು ಎನ್ನುವ ಡಿಕೆಶಿ ಹೇಳಿಕೆಗೆ, ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದ ಮುನಿರತ್ನ, ಏಳೇಳು ಜನ್ಮದಲ್ಲೂ ನಾನು ಡಿಕೆಶಿಗೆ ಸರಿಸಾಟಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸಿಎಂ ಅಭ್ಯರ್ಥಿ ಯಾರು ಎನ್ನುವ ವಿಚಾರ ಸದ್ಯ ಕಾಂಗ್ರೆಸ್ಸಿನಲ್ಲಿ ಚರ್ಚೆಯ ವಿಷಯವಾಗಿದೆ. ಈ ನಡುವೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ಯಾರು ಪ್ರಬಲರು ಎನ್ನುವ ವಿಚಾರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೊಸ ವಿಷಯವನ್ನು ಪ್ರಸ್ತಾವಿಸಿದ್ದಾರೆ.
ದೇವರು ನನಗೆ ಏಳೇಳು ಜನ್ಮ ಕೊಟ್ಟರೂ 'ಅವರ' ಸರಿ-ಸಮನಾಗಲು ಸಾಧ್ಯವಿಲ್ಲ!
ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ವಿಚಾರದಲ್ಲಿ ಕಿತ್ತಾಟ ಆರಂಭವಾಗಿದೆ
ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಮುನಿರತ್ನ, "ಕಾಂಗ್ರೆಸ್ ಪಕ್ಷವನ್ನು ಆ ದೇವರೇ ಕಾಪಾಡಬೇಕು. ಈಗಲೇ, ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ವಿಚಾರದಲ್ಲಿ ಕಿತ್ತಾಟ ಆರಂಭವಾಗಿದೆ. ಒಬ್ಬರು ಸಿದ್ದರಾಮಯ್ಯ ಅಂತಾರೆ, ಇನ್ನೊಬ್ಬರು ಡಿ.ಕೆ.ಶಿವಕುಮಾರ್ ಅಂತಾರೆ. ಕಾಂಗ್ರೆಸ್ಸಿಗೆ ಇನ್ನೆಂತಹ ಸ್ಥಿತಿ ಬರುತ್ತದೋ. ಅಸಲಿಗೆ, ಡಿಕೆಶಿ ಜೊತೆ ಯಾರಿದ್ದಾರೆ"ಎಂದು ಮುನಿರತ್ನ ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯನವರ ಜೊತೆಗೆ 64 ಎಂಎಲ್ಎ ಗಳಿದ್ದಾರೆ
"ಕಾಂಗ್ರೆಸ್ಸಿನ 65 ಶಾಸಕರ ಪೈಕಿ, ಸಿದ್ದರಾಮಯ್ಯನವರ ಜೊತೆಗೆ 64 ಎಂಎಲ್ಎ ಗಳಿದ್ದಾರೆ. ಡಿ.ಕೆ.ಶಿವಕುಮಾರ್ ಜೊತೆಗೆ ಇರುವುದು ಒಬ್ಬರೇ ಒಬ್ಬರು ಶಾಸಕರು. ಅದು ಕುಣಿಗಲ್ ರಂಗನಾಥ್. ಇರುವವರೆಲ್ಲರೂ ಸಿದ್ದರಾಮಯ್ಯನವರ ಜೊತೆಗಿದ್ದಾರೆ ಎನ್ನುವುದು ಸತ್ಯ" ಎಂದು ಮುನಿರತ್ನ ಹೊಸ ವಿಚಾರವನ್ನು ಮುಂದಿಟ್ಟಿದ್ದಾರೆ.
ಸಿದ್ದರಾಮಯ್ಯ ಅಂತಾರೆಯೇ ಹೊರತು ಡಿ.ಕೆ.ಶಿವಕುಮಾರ್ ಎಂದು ಯಾರೂ ಹೇಳುವುದಿಲ್ಲ
"ನಿಮಗೆ ನಾಯಕತ್ವ ಯಾರು ಬೇಕು ಎಂದು ಕಾಂಗ್ರೆಸ್ ಶಾಸಕರನ್ನು ಯಾರಾದರೂ ಕೇಳಿದರೆ, ಸಿದ್ದರಾಮಯ್ಯ ಅಂತಾರೆಯೇ ಹೊರತು ಡಿ.ಕೆ.ಶಿವಕುಮಾರ್ ಎಂದು ಯಾರೂ ಹೇಳುವುದಿಲ್ಲ. ಇದು ಸದ್ಯದ ಡಿಕೆಶಿ ಪರಿಸ್ಥಿತಿ"ಎಂದು ಹೇಳಿರುವ ಮುನಿರತ್ನ, "ಡಿಕೆಶಿಯವರು ಹೇಳಿದ ಹಾಗೆ, ನನ್ನಲ್ಲಿ ಯಾವುದೇ ನೋಟುಗಳಿಲ್ಲ"ಎಂದು ಹೇಳಿದ್ದಾರೆ.
Recommended Video
ನಿರ್ಮಾಪಕ ಮತ್ತು ಗುತ್ತಿಗೆದಾರನಾಗಿ ಏನು ನಿಯತ್ತಾಗಿ ಸಂಪಾದಿಸಿದ್ದೇನೋ ಅದು ಮಾತ್ರ ನನ್ನಲ್ಲಿ ಇದೆ
"ನಿರ್ಮಾಪಕ ಮತ್ತು ಗುತ್ತಿಗೆದಾರನಾಗಿ ಏನು ನಿಯತ್ತಾಗಿ ಸಂಪಾದಿಸಿದ್ದೇನೋ ಅದು ಮಾತ್ರ ನನ್ನಲ್ಲಿ ಇದೆ. ಮಲ್ಲೇಶ್ವರದಲ್ಲಿ ಮನೆ ಬಿಟ್ಟರೆ, ಬೇರೇ ಯಾವ ಊರಿನಲ್ಲೂ ನನಗೆ ಮನೆ, ಆಸ್ತಿಯಿಲ್ಲ. ಅವರ ಬಳಿ ಹೆಚ್ಚಿನ ದುಡ್ಡಿದ್ದರೆ ನಾನು ಹಂಚಿಕೊಳ್ಳುತ್ತೇನೆ. ಹಿರಿಯಕ್ಕನ ಚಾಳಿ, ಮನೆಮಂದಿಗೆಲ್ಲಾ ಎನ್ನುವ ಗಾದೆಯ ಮಾತಿನಂತೆ, ಹತ್ತು ವರ್ಷದಿಂದ ನನ್ನ ಜೊತೆಗಿದ್ದವರು ಇವರೆ ತಾನೇ. ಆಗ ಮುನಿರತ್ನ ತುಂಬಾ ಒಳ್ಳೆಯವರು ಎಂದವರು, ಈಗ ಯಾಕೆ ಉಲ್ಟಾ ಹೊಡೆಯುತ್ತಿದ್ದಾರೆ"ಎಂದು ಮುನಿರತ್ನ, ಡಿಕೆಶಿ ವಿರುದ್ದ ಕಿಡಿಕಾರಿದ್ದಾರೆ.