ಟೂರ್ ಪ್ಯಾಕೇಜ್ ಹೆಸರಿನಲ್ಲಿ ರಾಯಲ್ ಹಾಲಿಡೇಸ್ ನಿಂದ ಮೂರನೇ ಬಾರಿ ವಂಚನೆ
ಬೆಂಗಳೂರು, ಅ. 26: ರಾಜಧಾನಿ ಬೆಂಗಳೂರಿನಲ್ಲಿ ರಾಯಲ್ ಹಾಲಿಡೇಸ್ ಮತ್ತೆ ವಂಚನೆ ಮಾಡಿ ಸಿಕ್ಕಿಬಿದ್ದಿದೆ. ಈ ಹಿಂದೆ ಎರಡು ಬಾರಿ ಕ್ರಿಮಿನಲ್ ಕೇಸು ದಾಖಲಾಗಿದ್ದ ರಾಯಲ್ ಹಾಲಿಡೇಸ್ ಚೈನ್ ಲಿಂಕ್ ವಹಿವಾಟಿನ ಅಕ್ರಮವನ್ನು ಈ ಬಾರಿ ಸಿಸಿಬಿ ಪೊಲೀಸರು ಬಯಲಿಗೆ ಎಳೆದಿದ್ದಾರೆ.
ಚಂದ್ರಾ ಬಡಾವಣೆಯಲ್ಲಿ ದೊಡ್ಡ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಯಲ್ ಹಾಲಿಡೇಸ್ ಟೂರ್ ಪ್ಯಾಕೇಜ್ ಹೆಸರಿನಲ್ಲಿ ಲಕ್ಷಾಂತರ ಜನರಿಂದ ಹಣ ಪಡೆದು ಮೋಸ ಮಾಡಿತ್ತು. ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಜೈನ್ ಲಿಂಕ್ ಜಾಲ ವಿಸ್ತರಿಸಿತ್ತು. ಚೈನ್ ಲಿಂಕ್ ವಹಿವಾಟಿನ ಹಿನ್ನೆಲೆಯಲ್ಲಿ ರಾಯಲ್ ಹಾಲಿಡೇಸ್ ವಿರುದ್ಧ ಪೊಲೀಸರು ಕ್ರಿಮಿನಲ್ ಕೇಸು ದಾಖಲಿಸಿದ್ದರು. ಆ ಬಳಿಕ ಕಂಪನಿ ಸ್ಥಗಿತಗೊಂಡಿತ್ತು.
ಇಲ್ಲಿಗೆ ಸುಮ್ಮನಾಗದ ರಾಯಲ್ ಹಾಲಿಡೇಸ್ ಹುಟ್ಟು ಹಾಕಿದ್ದ ಪ್ರಶಾಂತ್, ಮುದ್ದಯ್ಯನಪಾಳ್ಯದ ಕೆ.ಎಲ್.ಇ. ಕಾಲೇಜು ಸಮೀಪ ಮತ್ತೊಂದು ರಾಯಲ್ ಹಾಲಿಡೇಸ್ ಕಚೇರಿ ಸ್ಥಾಪನೆ ಮಾಡಿ ಅಲ್ಲೂ ಸಹ ಚೈನ್ ಲಿಂಕ್ ವಹಿವಾಟು ನಡೆಸುತ್ತಿದ್ದ. ಪ್ರಶಾಂತ್ ಪಾಲುದಾರ ವಿಶ್ವನಾಥ್ ಹೈವಿಂಗ್ಸ್ ಎಂಬ ಕಂಪನಿ ಕಟ್ಟಿಕೊಂಡು ಅವನ್ನು ಮಾರಾಟ ಮಾಡುವ ಹೆಸರಿನಲ್ಲಿ ಚೈನ್ ಲಿಂಕ್ ವಹಿವಾಟನ್ನು ಮುಂದುವರೆಸಿದ್ದಾರೆ.
ಟೂರ್ ಪ್ಯಾಕೇಜ್ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಅವರಿಂದಲೇ ಕಮೀಷನ್ ಆಧಾರದ ಮೇಲೆ ಗ್ರಾಹಕರನ್ನು ಎಳೆಯುತ್ತಿದ್ದ ರಾಯಲ್ ಹಾಲೀಡೇಸ್ ಸಂಸ್ಥಾಪಕ ಪ್ರಶಾಂತ್ ಕಚೇರಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲದೇ ಪ್ರಶಾಂತ್ ಸೇರಿ ಹಲವರ ವಿರುದ್ಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. ಈ ಬಾರಿ ರಾಯಲ್ ಡ್ರೀಮ್ಸ್ ಟು ಪ್ಲೇ ಪ್ರೈವೆಟ್ ಲಿ. ಕಂಪನಿ ಮೂಲಕ ವಿವಿಧ ಟೂರ್ ಪ್ಯಾಕೇಜ್ ಗಳನ್ನು ಪರಿಚಯಿಸಿದ್ದ. ತನ್ನ ತಾಯಿ ಹಾಗೂ ಸಹೋದರಿ ಹೆಸರಿನಲ್ಲಿ ಗಿರಿನಗರದಲ್ಲಿ ಕಚೇರಿ ತೆರೆದಿದ್ದು, ಅದನ್ನು ಸ್ಥಗಿತಗೊಳಿಸಿದ್ದ. ಬಳಿಕ ಸರ್. ಎಂ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ರಾಯಲ್ ಡ್ರೀಮ್ ಟು ಪ್ಲೇ ಪ್ರೆ. ಲಿ ಕಂಪನಿಯ ಕಚೇರಿ ತೆರೆದಿದ್ದ.
ಹಳೇ ಅಕ್ರಮ ವಹಿವಾಟು:
ಭಾರತದಲ್ಲಿ ಒಂದು ವಸ್ತುವನ್ನು ಮಾರಾಟ ಮಾಡುವ ಸಂಬಂಧ ಚೈನ್ ಲಿಂಕ್ ವಹಿವಾಟು ನಡೆಸುವಂತಿಲ್ಲ. ಆದರೆ, ಪ್ರಶಾಂತ್ ಗೋವಾ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಟೂರ್ ಪ್ಯಾಕೇಜ್ ಘೋಷಣೆ ಮಾಡುತ್ತಿದ್ದ. ಹದಿನೈದು ಸಾವಿರ ಪಾವತಿಸಿ ಒಂದು ಟೂರ್ ಪ್ಯಾಕೇಜ್ ಪಡೆದರಿಗೆ ಶೇ. 25 ರಷ್ಟು ಬೋನಸ್ ನೀಡುತ್ತಿದ್ದ. ನೋಂದಣಿ ಮಾಡಿದವರಿಗೆ ಲಾಗಿನ್ ಐಡಿ ಕೂಡ ನೀಡುತ್ತಿದ್ದ. ಹೀಗೆ ಸದಸ್ಯತ್ವ ಪ್ರಕ್ರಿಯೆ ಮುಗಿಸಿ ಸದಸ್ಯತ್ವ ಪಡೆದ ಬಳಿಕ ತಮ್ಮ ಆಪ್ತರನ್ನು, ಸ್ನೇಹಿತರನ್ನು ಸೇರಿಸಿದರೆ, ಶೇ. 25 ರಷ್ಟು ಕಮೀಷನ್ ನೀಡುವುದಾಗಿ ಹೇಳುತ್ತಿದ್ದ. ಇದನ್ನು ನಂಬಿ ಅನೇಕರು ಹಣ ಹೂಡಿಕೆ ಮಾಡಿ ಸದಸ್ಯತ್ವ ಪಡೆದಿದ್ದರು. ತಮ್ಮ ಆಪ್ತ ಬಳಗದಿಂದಲೂ ಹಣ ಪಾವತಿ ಮಾಡಿಸಿದ್ದರು.
ಕಾನೂನು ಬಾಹಿರ ಚೈನ್ ಲಿಂಕ್ ವಹಿವಾಟಿನ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಡಿವೈಎಸ್ಪಿ ಜಗನ್ನಾಥ್ ರೈ ನೇತೃತ್ವದಲ್ಲಿ ದಾಳಿ ಮಾಡಿದ್ದರು. ಪ್ರಶಾಂತ್ನನ್ನು ವಶಕ್ಕೆ ಪಡೆದು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ರಾಯಲ್ ಡ್ರೀಮ್ ಹೆಸರಿನಲ್ಲಿ ಅನೇಕರಿಂದ ಹೂಡಿಕೆ ಮಾಡಿಸಿಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ. ಟೂರ್ ಪ್ಯಾಕೇಜ್ ಹೆಸರಿನಲ್ಲಿ ವಸೂಲಿ ಮಾಡಿರುವ ಹಣದ ಹೂಡಿಕೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯಾವ ಮೂಲದಿಂದ ಶೇ. 25 ರಷ್ಟು ಕಮೀಷನ್ ಪಡೆಯುತ್ತಿದ್ದ ಎಂಬ ಮಾಹಿತಿ ಒದಗಿಸುವಂತೆ ಸಹ ಸೂಚಿಸಲಾಗಿತ್ತು. ಇದ್ಯಾವುದಕ್ಕೂ ಆತನ ಬಳಿ ಉತ್ತರ ಇರಲಿಲ್ಲ. ಹೀಗಾಗಿ ತನಿಖೆ ನಡೆಸುವಂತೆ ಸೂಚಿಸಿ ದೂರು ನೀಡಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
2017 ರಲ್ಲಿ ಚಂದ್ರಾ ಬಡಾವಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಯಲ್ ಹಾಲಿಡೇಸ್ ವಿರುದ್ದ ಚಂದ್ರಾಲೇಔಟ್ ಪೊಲೀಸರು ಕೇಸು ದಾಖಲಿಸಿದ್ದರು. ಸುಮಾರು 20 ಕೋಟಿ ರೂ. ಗೂ ಅಧಿಕ ಹಣ ವಂಚನೆ ಮಾಡಿದ್ದ ಸಂಗತಿ ಬಯಲಿಗೆ ಬಂದಿತ್ತು. ಈ ಪ್ರಕರಣ ಇತ್ಯರ್ಥ ಆಗುವ ಮುನ್ನವೇ ಪುನಃ ರಾಯಲ್ ಹಾಲಿಡೇಸ್ ಕಾರ್ಯಾರಂಭ ಮಾಡಿತ್ತು. ಕಳೆದ ವರ್ಷ ರಾಯಲ್ ಹಾಲಿಡೇಸ್ ನಲ್ಲಿ ಹೂಡಿಕೆ ಮಾಡಿ ಮೋಸ ಮಾಡಿದವರು ಕಚೇರಿ ಎದುರು ಗಲಾಟೆ ಮಾಡಿದ್ದರು. ಆ ಬಳಿಕ ಪೊಲೀಸ್ ಕೇಸು ದಾಖಲಾಗಿತ್ತು. ಅನಂತರ ಪಾಲುದಾರರಾಗಿದ್ದ ವಿಶ್ವನಾಥ್ ಮತ್ತು ಪ್ರಶಾಂತ್ ಇಬ್ಭಾಗವಾಗಿದ್ದರು. ವಿಕಲಾಂಗನಾಗಿರುವ ಪ್ರಶಾಂತ್ ರಾಯಲ್ ಡ್ರೀಮ್ ಕಟ್ಟಿ ಪುನಃ ಚೈನ್ ಲಿಂಕ್ ವಹಿವಾಟು ನಡೆಸುತ್ತಿದ್ದ. ಇನ್ನು ವಿಶ್ವನಾಥ್ ಹೈವಿಂಗ್ಸ್ ಹೆಸರಿನಲ್ಲಿ ಆಯುರ್ವೇದ ವಸ್ತುಗಳನ್ನು ಚೈನ್ ಲಿಂಕ್ ಮೂಲಕ ವಹಿವಾಟು ನಡೆಸುತ್ತಿರುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹಿಸಿ ವಿಚಾರಣೆ ನಡೆಸುತ್ತಿದ್ದಾರೆ.
Recommended Video