ಪೀಣ್ಯಾ ಪೊಲೀಸರ ಬುಲೆಟ್ ಸದ್ದು: ಮತ್ತೊಬ್ಬ ಪಾತಕಿ ಕಾಲಿಗೆ ಗುಂಡು
ಬೆಂಗಳೂರು, ಜನವರಿ 19: ರಾಜಧಾನಿ ಬೆಂಗಳೂರಿನಲ್ಲಿ ಬಾಲ ಬಿಚ್ಚುತ್ತಿರುವ ಕ್ರಿಮಿನಲ್ ಗಳ ಸದ್ದಡಗಿಸಲು ಪೊಲೀಸರ ಬುಲೆಟ್ ಗಳು ಪದೇ ಪದೇ ಸದ್ದು ಮಾಡುತ್ತಲೇ ಇವೆ. ಸೋಮವಾರ ಒಂದೇ ದಿನ ಎರಡು ಪ್ರತ್ಯೇಕ ಶ್ಯೂಟೌಟ್ ನಡೆದಿದ್ದವು. ಮಂಗಳವಾರ ಬೆಳಗಿನ ಜಾವ ಪೀಣ್ಯಾ ಪೊಲೀಸರು ಬುಲೆಟ್ ಸದ್ದು ಮಾಡುವ ಮೂಲಕ ರೌಡಿ ಕಾಳಗ ತಪ್ಪಿಸಿದ್ದಾರೆ.
ರೌಡಿಯ ಹತ್ಯೆಗೆ ಸಂಚು ರೂಪಿಸಿದ್ದ ಕೊಲೆ ಆರೋಪಿ ಪ್ರವೀಣ್ ಎಂಬಾತನ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಪೀಣ್ಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಂ. ಎಲ್ ಭಿರಾಣಿ ಯಶಸ್ವಿಯಾಗಿದ್ದಾರೆ. ಗುಂಡಿನ ದಾಳಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ರಂಗಸ್ವಾಮಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿನ್ನೆಲೆ: ಖಚಿತ ಮಾಹಿತಿ ಮೇರೆಗೆ ಪೀಣ್ಯ ಪೊಲೀಸರು ನೀಲಗಿರಿ ಜನವರಿ 16 ರಂದು ನೀಲಗಿರಿ ತೋಪಿನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದರು. ರೌಡಿ ಆರ್.ಎಸ್. ಅನೀಲ್ ಕುಮಾರ್ ಗ್ಯಾಂಗ್ ಗೆ ಸೇರಿದ ಮೂವರು ಸದಸ್ಯರು ಎದುರಾಳಿ ಗ್ಯಾಂಗ್ ನ ರೌಡಿ ಅಭಿಷೇಕ್ ನ ಹತ್ಯೆಗೆ ಸಂಚು ರೂಪಿಸಿದ್ದ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದರು. ಈ ವೇಳೆ ಎರಡು ಕೆಜಿ ಗಾಂಜಾ ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ಆರು ಮಂದಿ ಆರೋಪಿಗಳು ಪರಾರಿಯಾಗಿದ್ದರು.
Recommended Video
ಮರುದಿನ ಬೆಳಗ್ಗೆ ಇಬ್ಬರು ಆರೋಪಿಗಳನ್ನು ಇದೇ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ತಲೆ ಮರೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಪ್ರವೀಣ್ ಆಂಧ್ರ ಹಳ್ಳಿಯಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೀಣ್ಯ ಪೊಲೀಸರು ಬಂಧಿಸಲು ಮುಂದಾಗಿದ್ದರು. ಈ ವೇಳೆ ಆರೋಪಿ ಪ್ರವೀಣ್ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಸಿಬ್ಬಂದಿಯ ರಕ್ಷಣೆಗಾಗಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಭಿರಾಣಿ ಗುಂಡು ಹಾರಿಸಿದ್ದು, ಒಂದು ಗುಂಡು ಪ್ರವೀಣ್ ಕಾಲಿಗೆ ತಗುಲಿದೆ. ಕೂಡಲೇ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.