ಪ್ರೀತಿ ನಿರಾಕರಿಸಿದ್ದಕ್ಕೆ ಗಗನಸಖಿಯ ಕೆನ್ನೆ, ಕಿವಿ ಕೊಯ್ದ ರೌಡಿ
ಬೆಂಗಳೂರು, ಮೇ 17: ಗಗನಸಖಿ ತನ್ನ ಪ್ರೀತಿ ನಿರಾಕರಿಸಿದ್ದಕ್ಕೆ ಕೋಪಗೊಂಡ ವ್ಯಕ್ತಿ ಆಕೆಯ ಕೆನ್ನೆ ಹಾಗೂ ಕಿವಿಯನ್ನೇ ಕೊಯ್ದಿರುವ ಘಟನೆ ಹೆಬ್ಬಾಳ ಫ್ಲೈಓವರ್ನಲ್ಲಿ ನಡೆದಿದೆ.
ಜಾಲಹಳ್ಳಿ ನಿವಾಸಿ 27 ವರ್ಷದ ಯುವತಿ ಹಲ್ಲೆಗೊಳಗಾಗಿದ್ದು, ಈ ಕೃತ್ಯ ಎಸಗಿಪರಾರಿಯಾಗಿರುವ ಅಜಯ್ ಕುಮಾರ್ ನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ನಾಲ್ಕು ದಿನಗಳ ಹಿಂದೆ ಸಂತ್ರಸ್ತೆ ಕೆಲಸ ಮುಗಿಸಿಕೊಂಡು ಮನೆಗೆ ಮರಳುವಾಗ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2012ರಲ್ಲಿ ಅಜಯ್ನ ನೆರವು ಪಡೆದು ಗಗನ ಸಖಿಯ ಅಕ್ಕ, ತನ್ನ ಗೆಳೆಯನನ್ನು ಕೊಲೆ ಮಾಡಿದ್ದಳು. ಈ ಕೊಲೆ ಪ್ರಕರಣದಲ್ಲಿ ಅಜಯ್ ಮತ್ತು ಆಕೆ ಜೈಲು ಸೇರಿದ್ದರು. ಬಳಿಕ ಜಾಮೀನಿನ ಮೇಲೆ ಹೊರ ಬಂದ ನಂತರವೂ ಅವರ ಸ್ನೇಹ ಮುಂದುವರೆದಿತ್ತು.
ಇತ್ತೀಚೆಗೆ ಸ್ನೇಹಿತೆಯ ತಂಗಿ ಮೇಲೆ ಮೋಹಿತನಾಗಿದ್ದ ಆರೋಪಿ, ಅವಳ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಆದರೆ ಆಕೆ ನಿರಾಕರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ ಕೋಪಗೊಂಡ ಆರೋಪಿ ಸಂತ್ರಸ್ತೆಗೆ ಕಿರುಕುಳ ಕೊಡಲಾರಂಭಿಸಿದ್ದ, ಖಾಸಗಿ ವೈಮಾನಿಕ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಕೆ ಸಂಜೆ ಕ್ಯಾಬ್ನಲ್ಲಿ ಮರಳುತ್ತಿರುವ ವೇಳೆ ಅಡ್ಡಹಾಕಿ ಆಕೆಯ ಕೆನ್ನೆ, ಕಿವಿಯನ್ನು ಕೊಯ್ದಿದ್ದಾರೆ.