ಕೋರಮಂಗಲ ಪೊಲೀಸರಿಗೆ ಸಿಕ್ಕಿಬಿದ್ದ ರೌಡಿಶೀಟರ್ ಕುಣಿಗಲ್ ಗಿರಿ
ಬೆಂಗಳೂರು, ಜುಲೈ 16: ಪೊಲೀಸರ ಕೈಗೆ ಸಿಗದೆ ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದ ರೌಡಿ ಶೀಟರ್- ಕಳ್ಳ ಕುಣಿಗಲ್ ಗಿರಿ ಸೋಮವಾರ ರಾತ್ರಿ ಕೋರಮಂಗಲ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಕೋರಮಂಗಲದ ಪಬ್ ನಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಕುಣಿಗಲ್ ಗಿರಿಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಆ ನಂತರ ಆತನನ್ನು ಬಂಧಿಸಲಾಗಿದೆ.
ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದ ಕುಣಿಗಲ್ ಗಿರಿ ಮೇಲೆ ಹಲವು ಅಪರಾಧ ಪ್ರಕರಣಗಳು ಇವೆ. ಬೆಟ್ಟಿಂಗ್ ದಂಧೆಗೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿತ್ತು. ಆ ನಂತರ ಜಾಮೀನಿನ ಮೇಲೆ ಹೊರಬಂದವನು ಮತ್ತೆ ತನ್ನ ದಂಧೆ ಮುಂದುವರಿಸಿದ್ದ. ಅವನ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದವು.
ರೌಡಿ ಕುಣಿಗಲ್ ಗಿರಿ ಬರ್ತ್ ಡೇಗೆ ಭರ್ಜರಿ ತಯಾರಿ; ಪೊಲೀಸರ ರೇಡ್
ಒಂದು ತಿಂಗಳ ಹಿಂದೆ, ಜೂನ್ ಹದಿನಾರನೇ ತಾರೀಕಿನಂದು ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ ಡ್ಯಾನ್ಸ್ ಬಾರ್ ವೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ತನ್ನ ಜನ್ಮ ದಿನಾಚರಣೆಗಾಗಿ ಕುಣಿಗಲ್ ಗಿರಿಯು ಬೆಂಗಳೂರು ಹಾಗೂ ಇತರೆಡೆಯ ರೌಡಿಗಳಿಗಾಗಿ ದೊಡ್ಡ ಮಟ್ಟದಲ್ಲಿ ಪಾರ್ಟಿಯೊಂದನ್ನು ಆಯೋಜಿಸಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.
ಇನ್ನೂರೈವತ್ತಕ್ಕೂ ಹೆಚ್ಚು ಯುವತಿಯರನ್ನು ಆ ದಿನ ನೃತ್ಯ ಮಾಡಿಸುವ ಸಲುವಾಗಿ ಕರೆಸಿದ್ದ. ಪೊಲೀಸರು ದಾಳಿ ನಡೆಸಿದ ವೇಳೆ ಕುಣಿಗಲ್ ಗಿರಿ ಅಲ್ಲಿಂದ ಪರಾರಿಯಾಗಿದ್ದ. ಹೀಗೆ ಪದೇಪದೇ ತಪ್ಪಿಸಿಕೊಳ್ಳುತ್ತಿದ್ದ ಗಿರಿಯನ್ನು ಬಂಧಿಸಲು ಬೆಂಗಳೂರು ಪೊಲೀಸ್ ಆಯುಕ್ತ ಆಲೋಕ್ ಕುಮಾರ್ ಸೂಚನೆ ನೀಡಿದ್ದರು.
ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ನವನು ಎಚ್.ವಿ.ಗಿರೀಶ್ ಅಲಿಯಾಸ್ ಕುಣಿಗಲ್ ಗಿರಿ. ಆತನ ತಂದೆ ಅರ್ಚಕರು. ದರೋಡೆ, ಡಕಾಯಿತಿ, ಹಫ್ತಾ ವಸೂಲಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಕಾನೂನುಬಾಹಿರ ಚಟುವಟಿಕೆ ಸೇರಿ ತೊಂಬತ್ತೆರಡು ಪ್ರಕರಣಗಳು ಕುಣಿಗಲ್ ಗಿರಿಯ ಮೇಲಿವೆ. ಹೈಸ್ಕೂಲ್ ಗೆ ಶಾಲೆ ಬಿಟ್ಟಂಥ ಗಿರಿ, ದರೋಡೆ ಪ್ರಕರಣವೊಂದರಿಂದ ಅಪರಾಧ ಜಗತ್ತಿನ ಪಯಣ ಆರಂಭಿಸಿದ.
ತಂದೆ-ತಾಯಿ ಜೊತೆ ಎಸ್ಐಟಿ ಕಚೇರಿಗೆ ಬಂದ ಕುಣಿಗಲ್ ಗಿರಿ
ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣದ ತನಿಖೆ ವೇಳೆ ಎಸ್ ಐಟಿಯಿಂದ ಕುಣಿಗಲ್ ಗಿರಿಯ ವಿಚಾರಣೆ ಸಹ ಮಾಡಲಾಗಿತ್ತು. ಆಗ ತನ್ನ ತಂದೆ- ತಾಯಿಯ ಜತೆಗೆ ಎಸ್ ಐಟಿ ಕಚೇರಿಗೆ ಬಂದು, ವಿಚಾರಣೆಗೆ ಹಾಜರಾಗಿದ್ದ.