ಜೈಲಿಂದ ಬಂದು ಮಂಡಿಗೆ ಗುಂಡು ಹೊಡೆಸಿಕೊಂಡ ರೌಡಿ ಚಡ್ಡಿ ಕಿರಣ್ !
ಬೆಂಗಳೂರು, ಮಾರ್ಚ್ 07 : ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪೊಲೀಸರ ಗುಂಡು ಸದ್ದು ಮಾಡಿದೆ. ಜೈಲಿನಿಂದ ಬಿಡುಗಡೆಯಾಗಿ ಒಂದು ತಿಂಗಳು ಕಳೆಯುವಷ್ಟರಲ್ಲಿ ರೌಡಿ ಶೀಟರ್ ಚಡ್ಡಿ ಕಿರಣ್ ಎಂಬಾತ ಪೊಲೀಸರ ಗುಂಡೇಟು ತಿಂದು ಹಾಸಿಗೆ ಹಿಡಿದಿದ್ದಾನೆ. ಬಂಧನ ಕಾರ್ಯಾಚರಣೆ ವೇಳೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಯತ್ನಿಸಿದ ರೌಡಿ ಕಿರಣ್ ಕಾಲಿಗೆ ನಂದಿನಿ ಲೇಔಟ್ ಪೊಲೀಸರು ಗುಂಡು ಹೊಡೆದಿದ್ದಾರೆ.
ಲಗ್ಗೆರೆ ನಿವಾಸಿ ಕಿರಣ್ ಅಲಿಯಾಸ್ ಚಡ್ಡಿ ಕಿರಣ್ ಗುಂಡೇಟು ತಿಂದವ. ಈತನ ಸಹಚರ ದಾಸ ಎಂಬಾತ ಬಂಧನಕ್ಕೆ ಒಳಗಾಗಿದ್ದಾನೆ. ಬಂಧನ ಕಾರ್ಯಾಚರಣೆ ವೇಳೆ ನಂದಿನಿ ಲೇಔಟ್ ಬಡಾವಣೆ ಪೇದೆ ಬಸವ ಎಂಬುವರು ಗಾಯಗೊಂಡಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಲಗಾಲಿಗೆ ತೀವ್ರತರ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ಚಡ್ಡಿ ಕಿರಣ್ ಮೇಲೆ ನಿಗಾ ವಹಿಸಲಾಗಿದೆ. ಇನ್ನು ಹತ್ತಕ್ಕೂ ಹೆಚ್ಚು ಅಪರಾಧ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಚಡ್ಡಿ ಕಿರಣ್ ಜೈಲಿಗೆ ಹೋಗಿದ್ದ. ಕಳೆದ ಫೆಬ್ರವರಿ 3 ರಂದು ಜಾಮೀನು ಮೇಲೆ ಬಿಡುಗಡೆಯಾಗಿ ಬಂದಿದ್ದ. ಎರಡು ದಿನದ ಹಿಂದೆ ಲಗ್ಗೆರೆ ನಿವಾಸಿ ವಿನೋದ್ ಮತ್ತು ಆತನ ಪತ್ನಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ.
ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಲಗ್ಗೆರೆ ಬ್ರಿಡ್ಜ್ ಸಮೀಪ ಬರುತ್ತಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಅದರ ಮಾಹಿತಿ ಮೇರೆಗೆ ಪಿಎಸ್ಐ ನವೀದ್ ಮತ್ತು ತಂಡ ಆರೋಪಿ ಚಡ್ಡಿಕಿರಣ್ ನನ್ನು ಬಂಧಿಸಲು ತೆರಳಿದ್ದರು. ಆಕ್ಟೀವ್ ಹೊಂಡಾದಲ್ಲಿ ಬಂದಿದ್ದ ಚಡ್ಡಿ ಕಿರಣ್ ನನ್ನು ಶರಣಾಗತಿಯಾಗಲು ಪೊಲೀಸರು ಸೂಚಿಸಿದ್ದಾರೆ. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಲ್ಲೆ ಮಾಡಲು ಯತ್ನಿಸಿದ್ದಾನೆ. ಪೊಲೀಸ್ ಪೇದೆ ಬಸವ ಎಂಬುವರಿಗೆ ಗಾಯವಾಗಿದೆ. ಈ ವೇಳೆ ಪಿಎಸ್ಐ ನವೀದ್ ಸರ್ವೀಸ್ ಪಿಸ್ತೂಲಿನಿಂದ ಗುಂಡು ಹಾರಿಸಿದ್ದು, ಕಿರಣ್ ಬಲಗಾಲಿಗೆ ಪೆಟ್ಟಾಗಿದೆ. ಮತ್ತೊಬ್ಬ ಆರೋಪಿ ದಾಸನನ್ನು ಬಂಧಿಸಿದ್ದಾರೆ.
ರಾಜಗೋಪಾಲನಗರ, ನಂದಿನಿ ಬಡಾವಣೆ, ನಂದಿನಿ ಲೇಔಟ್ ಪೊಲೀಸ್ ಠಾಣೆಗಳಲ್ಲಿ ಚಡ್ಡಿ ಕಿರಣ್ ವಿರುದ್ಧ ಹತ್ತಕ್ಕೂ ಹೆಚ್ಚು ಕೊಲೆ, ಕೊಲೆಯತ್ನ, ಸುಲಿಗೆ ಪ್ರಕರಣ ದಾಖಲಾಗಿವೆ. ಆರೋಪಿ ವಿರುದ್ಧ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಡರ್ ಆಗಿದ್ದಾನೆ ಎಂದು ಉತ್ತರ ವಿಭಾಗದ ಡಿಸಿಪಿ ಧಮೇಂದ್ರ ಕುಮಾರ್ ತಿಳಿಸಿದ್ದಾರೆ.