ಯಶ್ ಹತ್ಯೆಗೆ ಸಂಚು ರೂಪಿಸಿದ್ದ ಭರತ್ಗೆ 2 ಬಾರಿ ಗುಂಡೇಟು ಬಿದ್ದಿತ್ತು
ಬೆಂಗಳೂರು, ಫೆಬ್ರವರಿ 28: ಪೊಲೀಸರ ಗುಂಡೇಟಿಗೆ ಬಲಿಯಾಗಿರುವ ರೌಡಿ ಶೀಟರ್ ಸ್ಲಂ ಭರತ್ಗೆ ಈ ಹಿಂದೆಯೂ ಎರಡು ಬಾರಿ ಗುಂಡೇಟು ಬಿದ್ದಿತ್ತು.
ಕಳೆದ ಹದಿನಾಲ್ಕು ವರ್ಷಗಳಿಂದ ಬೆಂಗಳೂರಿನ ಪಾತಕ ಲೋಕದಲ್ಲಿ ಮೆರೆಯುತ್ತಿದ್ದ ಕುಖ್ಯಾತ ರೌಡಿ ಶೀಟರ್ ಸ್ಲಂ ಭರತ್ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.
ಎನ್ಕೌಂಟರ್; ಪ್ರೇಯಸಿಯೇ ಕಾವಲಾಗಿದ್ದಳು ರೌಡಿ ಸ್ಲಂ ಭರತನಿಗೆ
ಇತ್ತೀಚೆಗಷ್ಟೇ ರಾಜಗೋಪಾಲನಗರದಲ್ಲಿ ಗೂಂಡಾಗಿರಿ ನಡೆಸಿದ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಭರತ್ನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿದ ಪೊಲೀಸರು ಬುಧವಾರ ರಾತ್ರಿ ಬೆಂಗಳೂರಿಗೆ ಕರೆತಂದಿದ್ದರು.
ಈ ವೇಳೆ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಸಿನಿಮೀಯ ರೀತಿಯಲ್ಲಿ ಸಹಚರರೊಂದಿಗೆ ಪಾರಾಗಲು ಯಶಸ್ವಿಯಾಗಿದ್ದ. ಬಳಿಕ ಆತನನ್ನು ಹೆಸರುಘಟ್ಟ ಸಮೀಪ ಪತ್ತೆ ಹಚ್ಚಿದ್ದ ಪೊಲೀಸರು ಗುಂಡು ಹಾರಿಸಿ ಎನ್ಕೌಂಟರ್ ಮಾಡಿದ್ದರು.
ಸ್ಲಂ ಭರತ್ಗೆ ಎರಡು ಬಾರಿ ಗುಂಡೇಟು
2019ರ ಫೆಬ್ರವರಿಯಲ್ಲಿ ಭರತ್ ಮೇಲೆ ಸಿಸಿಬಿ ಗುಂಡಿನ ದಾಳಿ ನಡೆಸಿ ಬಂಧಿಸಿದ್ದರು. ಇದಾದ ಬಳಿಕ ಪರಪ್ಪನ ಅಗ್ರಹಾರದಲ್ಲಿದ್ದ ಆತ, ಜಾಮೀನಿನ ಮೇರೆಗೆ ಬಿಡುಗಡೆಗೊಂಡು ಮತ್ತೆ ಉಪಟಳ ಶುರು ಮಾಡಿದ್ದ, ಕೊನೆಗೆ ಆತನ ಮೇಲೆ ಪೊಲೀಸರ ಎರಡನೇ ದಾಳಿಗೆ ಪ್ರಾಣ ಹೋಗಿದೆ. ಜ.21ರಂದು ಸುಬ್ರಹ್ಮಣ್ಯಪುರ ಸಮೀಪ ಭರತ್ ಇರುವಿಕೆ ಬಗ್ಗೆ ಖಚಿತ ಮಾಹಿತಿ ಪಡೆದು ಸೋಲದೇವನಹಳ್ಳಿ ಠಾಣೆ ಇನ್ಸ್ಪೆಕ್ಟರ್ ಶಿವಸ್ವಾಮಿ ತಂಡವು ಬಂಧಿಸಲು ತೆರಳಿತ್ತು. ಆಗ ಅವರ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದ.
18ನೇ ವಯಸ್ಸಿಗೆ ರೌಡಿಶೀಟರ್
ನಟರು, ಉದ್ಯಮಿಗಳ ಬೆದರಿಸುವ ಮೂಲಕ ದೇಶದಲ್ಲೇ ಕುಖ್ಯಾತಿ ಪಡೆಯಲು ಹವಣಿಸಿದ್ದ ಸ್ಲಂ ಭರತ್ 2006ರಲ್ಲಿ ಹದಿನಾರನೇ ವಯಸ್ಸಿಗೆ ಕೊಲೆ ಮಾಡಿ ಜೈಲು ಸೇರಿದ್ದ. ಹೀಗೆ 14 ವರ್ಷಗಳು ಪಾತಕ ಕೃತ್ಯಗಳ ಮೂಲಕ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ.ಕೊಲೆ, ಕೊಲೆಯತ್ನ, ಡಕಾಯಿತಿ, ಪೊಲೀಸರ ಮೇಲೆ ಹಲ್ಲೆ, ಅಪಹರಣ ಸೇರಿ ಅನೇಕ ಕೃತ್ಯಗಳಲ್ಲಿ ಈ ಭಾಗಿಯಾಗಿದ್ದ.
ಎನ್ಕೌಂಟರ್; ನಟ ಯಶ್ ಹತ್ಯೆಗೂ ಸ್ಕೆಚ್ ಹಾಕಿದ್ದ ರೌಡಿ ಸ್ಲಂ ಭರತ್
ಯಶ್, ದುನಿಯಾ ವಿಜಯ್ ಬೆದರಿಕೆ
ಕನ್ನಡ ಚಿತ್ರರಂಗದ ಖ್ಯಾತ ನಟರಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ದುನಿಯಾ ವಿಜಯ್ಗೆ ಕೊಲೆ ಬೆದರಿಕೆ ಹಾಕಿದ್ದ. ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಸ್ಲಂ ಭರತ್ ಯೋಜಿಸಿದ್ದ. ನಟರಿಗೆ ಬೆದರಿಸಿದ್ದಾಗಿ ತನ್ನ ಸಹಚರನ ಬಳಿ ಹೇಳಿಕೊಂಡಿದ್ದ. ಆದರೆ ಈ ರೀತಿ ಯಾವುದೇ ಪ್ರಕರಣಗಳು ವರದಿಯಾಗಿರಲಿಲ್ಲ.
ಗೆಳತಿಯ ಜೊತೆ ಇದ್ದಾಗ ಸಿಕ್ಕಿಬಿದ್ದಿದ್ದ
ಜನವರಿ 19ರಂದು ರಾತ್ರಿ ರಾಜಗೋಪಾಲ ನಗರದಲ್ಲಿ ಶ್ರೀನಿವಾಸ ಎಂಬುವರ ಮನೆ ಮುಂದೆ ನಿಲ್ಲಿಸಿದ ವಾಹನಗಳನ್ನು ಜಖಂಗೊಳಿಸಿ ಸ್ಲಂ ಭರತ್ ತಂಡ ದಾಂಧಲೆ ನಡೆಸಿತ್ತು. ಅದೇ ದಿನ ನಂದಿನಿ ಲೇಔಟ್ ನಲ್ಲಿ ಚೇತನ್ ಎಂಬುವವರ ಮೇಲೆ ಆತ ಗೂಂಡಾಗಿರಿ ನಡೆಸಿದ್ದ. ಎರಡು ದಿನಗಳ ಹಿಂದೆ ಮೊರಾದಾಬಾದಿನಲ್ಲಿ ತನ್ನ ಎಳತಿಯ ಜೊತೆ ಇರುವಾಗಲೇ ಆತ ಸಿಕ್ಕಿಬಿದ್ದಿದ್ದ.