ಬೆಂಗಳೂರಿನಲ್ಲಿ ಗಲಭೆ ಸೃಷ್ಟಿಸಲು ಪ್ಲಾನ್ ರೂಪಿಸಿ ಪೆಟ್ರೋಲ್ ಬಾಂಬ್ ತಯಾರಿ !
ಬೆಂಗಳೂರು, ಮೇ 09: ಬೆಂಗಳೂರಿನಲ್ಲಿ ಗಲಭೆ ಸೃಷ್ಟಿಸಲು ಪೆಟ್ರೋಲ್ ಬಾಂಬ್ ತಯಾರಿ. ಇನ್ನು ಜೈಲಿನಲ್ಲಿನ ಕಿರಾತಕನೊಬ್ಬನಿಂದಲೇ ಸ್ಕೆಚ್. ಭಯಾನಕ ದಾಳಿ ಮಾಡಲು ಸ್ಕೆಚ್ ಹಾಕಿದ್ದ ಸಂಚುಕೋರರ ಯೋಜನೆ ಕಾರ್ಯಗತ ಆಗುವ ಮೊದಲೇ ಪೂರ್ವ ವಿಭಾಗದ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಆಗಬಹುದಾದ ದೊಡ್ಡ ಅನಾಹುತವನ್ನು ಪೊಲೀಸರು ತಪ್ಪಿಸಿದ್ದಾರೆ.
ಸಾರಾಯಿ ಪಾಳ್ಯದ ನಿವಾಸಿ, ರೌಡಿ ಶೀಟರ್ ಮಹಮದ್ ಅಜೀಮುದ್ದೀನ್ ಮತ್ತು ಹೆಗ್ಗಡೆ ನಗರದ ನಿವಾಸಿ ಮುನಾವರ್ ಪಾಷ, ಸಾಧಿಕ್ ಪಾಷಾ, ಅಸ್ಲಂ ಪಾಷಾ, ಕೈಪ್ ಖಾನ್ ಸಿದ್ಧಕಿ ಹುಸೇನ್, ಸಿಕ್ಕು, ಸಯ್ಯದ್ ಆಸ್ಕರ್ ಇತರರು ಸೇರಿಕೊಂಡು ದೊಡ್ಡ ಗಲಭೆ ಉಂಟು ಮಾಡಲು ಪ್ಲಾನ್ ರೂಪಿಸಿದ್ದಾರೆ. ಎದುರಾಳಿ ಗುಂಪಿನ ಮೇಲೆ ಮಾರಣಾಂತಿಕ ದಾಳಿ ಮಾಡಲು ಪ್ಲಾನ್ ರೂಪಿಸಿರುವ ಈ ಗ್ಯಾಂಗ್, ಈ ಮೂಲಕ ಅಶಾಂತಿ ಸೃಷ್ಟಿಸಲು ಸಂಚು ರೂಪಿಸಿದೆ. ಇದಕ್ಕಾಗಿ ಪೆಟ್ರೋಲ್ ಬಾಂಬ್, ಮಚ್ಚು ಲಾಂಗು ಹಾಗೂ ಪಿಸ್ತುಲ್ಗಳನ್ನು ಸಂಗ್ರಹಿಸಿತ್ತು.
ದೊಡ್ಡ ಮಟ್ಟದಲ್ಲಿ ಗಲಭೆ ಸೃಷ್ಟಿಸಲು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೌಡಿ ತೈಪ್ ಖಾನ್ ಕೂಡ ಭಾಗಿಯಾಗಿದ್ದು, ಜೈಲಿನಿಂದಲೇ ಸಂಚು ರೂಪಿಸಲಾಗಿದೆ. ಈ ಕುರಿತು ಖಚಿತ ಮಾಹಿತಿ ಪಡೆದ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್, ಮೂರು ಪೊಲೀಸ್ ತಂಡಗಳನ್ನು ರಚನೆ ಮಾಡಿ ಕ್ರಮಕ್ಕೆ ಸೂಚನೆ ನೀಡಿದ್ದರು.
ಈ ವೇಳೆ ಪ್ರಮುಖ ಆರೋಪಿಗಳಾದ ಸಯ್ಯದ್ ಆಸ್ಗರ್, ಫಜಾಯ್ ಉಲ್ಲಾ, ಮುನಾವರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಝಪಾಯ್ಗೆ ಅಜಿಮುದ್ದೀನ್ ಎಂಬಾತನು ಮನೆ ಖಾಲಿ ಮಾಡಿಸಿ ಅವಮಾನ ಮಾಡಿದ್ದ. ಇದಕ್ಕೆ ಪ್ರತಿಕಾರ ತೀರಿಸಕೊಳ್ಳಲು ಗಲಭೆ ಉಂಟು ಮಾಡಲು ಸ್ಕೆಚ್ ಹಾಕಿದ್ದ ಸಂಗತಿಯನ್ನು ಬಾಯಿ ಬಿಟ್ಟಿದ್ದಾರೆ.
ಬಂಧಿತ ಆರೋಪಿಗಳ ಹೇಳಿಕೆ ಆಧಾರದ ಮೇಲೆ ಪರಿಶೀಲನೆ ನಡೆಸಿದ ಪೊಲೀಸರು ಒಂದು ನಾಡ ಪಿಸ್ತೂಲ್, ಬಿಯರ್ ಬಾಟಲ್ನಲ್ಲಿ ತುಂಬಿಸಿದ್ದ ಪೆಟ್ರೋಲ್ ಬಾಂಬ್ಗಳು, ಲಾಂಗ್ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಫಯಾಜ್ ಸಂಪಿಗೆಹಳ್ಳಿ ಠಾಣೆ ರೌಡಿ ಶೀಟರ್ ಆಗಿದ್ದು, ಈತನ ವಿರುದ್ಧ ಎಂಟು ಅಪರಾಧ ಪ್ರಕರಣ ದಾಖಲಾಗಿರುವುದು ಗೊತ್ತಾಗಿದೆ.
ಆರೋಪಿ ಫಯಾಜ್ ಜತೆಗೆ ಆತನ ಸಹಚರರನ್ನು ಬಂಧಿಸಿದ್ದು, ಮುಂದೆ ನಡೆಯಲಿದ್ದ ದೊಡ್ಡ ಅನಾಹುತವನ್ನು ಪೊಲೀಸರು ತಪ್ಪಿಸಿದ್ದಾರೆ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಪೊಲೀಸರ ಈ ಕಾರ್ಯವನ್ನು ಪೊಲೀಸ್ ಮೇಲಾಧಿಕಾರಿಗಳು ಪ್ರಶಂಸೆ ಮಾಡಿದ್ದಾರೆ. ಪೊಲೀಸರು ಸ್ವಲ್ಪ ಯಾಮಾರಿದ್ದರೂ ದೊಡ್ಡ ಗಲಭೆ ಸೃಷ್ಟಿಯಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Recommended Video