ಬೆಂಗಳೂರಲ್ಲಿ 20ಕ್ಕೂ ಹೆಚ್ಚು ಶೆಡ್ ನಾಶ: ನೂರಾರು ಕುಟುಂಬ ಬೀದಿ ಪಾಲು
ಬೆಂಗಳೂರು, ಫೆಬ್ರವರಿ 14: ಬೆಂಗಳೂರಲ್ಲಿ 20ಕ್ಕೂ ಹೆಚ್ಚು ಶೆಡ್ಗಳನ್ನು ರೌಡಿಗಳು ನಾಶಪಡಿಸಿದ್ದಾರೆ.
ಭೂ ವಿವಾದ ಹಿನ್ನೆಲೆ ಕಿಡಿಗೇಡಿಗಳು ಮಾರಕಾಸ್ತ್ರಗಳೊಂದಿಗೆ ಆಗಮಿಸಿ ಶೆಡ್ಗಳಲ್ಲಿ ವಾಸಿಸುತ್ತಿರುವವರ ಮೇಲೆ ಹಲ್ಲೆ ಮಾಡಿ ಶೆಡ್ಗಳನ್ನು ನೆಲಸಮ ಮಾಡಿದ್ದಾರೆ. ಈ ಘಟನೆ ಮಾರತ್ತಹಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಕೊಳ್ಳಲ ಗ್ರಾಮ ಸಮೀಪ ನಡೆದಿದೆ.
ಟ್ರಂಪ್ ಗುಜರಾತ್ ಭೇಟಿ; ಸ್ಲಂ ಕಾಣದಂತೆ ಗೋಡೆ ನಿರ್ಮಾಣ
ಮುನೇಕೊಳ್ಳಲ ಗ್ರಾಮದ ಹೊರಭಾಗದಲ್ಲಿ ಜಯಮ್ಮ ಎಂಬುವವರ ಪುತ್ರ ನವೀನ್ ರೆಡ್ಡಿ ಅವರಿಗೆ ಪಿತ್ರಾರ್ಜಿತ ಜಮೀನಿದೆ. ಇಲ್ಲಿ ಶೆಡ್ಗಳನ್ನು ನಿರ್ಮಿಸಿ ಪಶ್ಚಿಮ ಬಂಗಾಳದ ಜನರಿಗೆ 13 ವರ್ಷಗಳಿಂದ ಬಾಡಿಗೆ ನೀಡಿದ್ದರು. ಆ ಸ್ಥಳದಲ್ಲಿ 20ಕ್ಕೂ ಹೆಚ್ಚು ಶೆಡ್ ಗಳಲ್ಲಿ ನೂರಾರು ಚಿಂದಿ ಆಯುವ ಕೆಲಸ ಮಾಡುವವರು ವಾಸವಿದ್ದರು.
ನಾರಾಯಣರೆಡ್ಡಿ ಹೆಸರಿನಲ್ಲಿ 50ಕ್ಕೂ ಹೆಚ್ಚು ರೌಡಿಗಳ ತಂಡ ಏಕಾಏಕಿ ಆಗಮಿಸಿ ಶೆಡ್ಗಳನ್ನು ನಾಶಪಡಿಸಿದ್ದಾರೆ. ಇದರಿಂದ 20 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.
ಗುರುವಾರ ಬೆಳಗ್ಗೆ 50ಕ್ಕೂ ಹೆಚ್ಚು ಗೂಂಡಾಗಳು ಮೂರು ಜೆಸಿಬಿ ಹಾಗೂ ದ್ವಿಚಕ್ರ ವಾಹನಗಳಲ್ಲಿ ಬಂದು ಶೆಡ್ಗಳನ್ನು ಜಮೀನು ಮಾಲಿಕರು ಹಾಗೂ ಸ್ಥಳೀಯ ಪೊಲೀಸರಿಗೆ ತಿಳಿಸದೆ ತೆರವುಗೊಳಿಸಿದ್ದಾರೆ.
ಅಲ್ಲದೆ ಶೆಡ್ಗಳನ್ನು ತೆರವುಗೊಳಿಸುವ ವೇಳೆ ಮಹಿಳೆಯರು ಹಾಗೂ ಪುಟ್ಟ ಮಕ್ಕಳ ಮೇಲೂ ಹಲ್ಲೆ ನಡೆಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ರೌಡಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.