ಬೆಂಗಳೂರು; ಗಿರಿಧಾಮ ಲೇಔಟ್ ನಿವಾಸಿಗಳಿಗೆ ಪುಡಿ ರೌಡಿಗಳ ಕಾಟ
ಬೆಂಗಳೂರು, ಅಕ್ಟೋಬರ್ 18: ಬೆಂಗಳೂರು ನಗರದ ಹೊರವಲಯದಲ್ಲಿ, ಇನ್ನೂ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಲ್ಲಿ ಮನೆ ಕಟ್ಟಿಕೊಂಡು ನೆಮ್ಮದಿಯಾಗಿ ಇರಬಹುದು ಎಂದು ಕೊಳ್ಳುವ ಜನರು ಈ ನಿವಾಸಿಗಳ ಕಷ್ಟವನ್ನು ಕೇಳಲೇಬೇಕು. ಆಸ್ತಿ ವಿಚಾರಕ್ಕೆ ಆರಂಭವಾದ ವಿವಾದದಲ್ಲಿ ಪುಡಿ ರೌಡಿಗಳ ಪ್ರವೇಶವಾಗಿದ್ದು, ನಿವಾಸಿಗಳ ಆತಂಕ ಹೆಚ್ಚಿಸಿದೆ.
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿಯೇ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಗಿರಿಧಾಮ ಲೇಟೌನ್ ನಿವಾಸಿಗಳಿಗೆ ಪುಡಿ ರೌಡಿಗಳ ಕಾಟ ಎದುರಾಗಿದೆ. ನಿವಾಸಿಗಳಿಗೆ ಬೆದರಿಕೆಗಳನ್ನು ಹಾಕಲಾಗುತ್ತಿದ್ದು, ರಕ್ಷಣೆ ನೀಡಿ ಎಂದು ಪೊಲೀಸರು ಮೊರೆ ಹೋಗಿದ್ದಾರೆ.
ಆರ್. ಆರ್. ನಗರ ಉಪ ಚುನಾವಣೆ ಚಿತ್ರಣ; ಗೆಲುವಿಗಾಗಿ ಪಕ್ಷಗಳ ಕಸರತ್ತು!
ಭಾನುವಾರ ಪುಂಡರಿಂದ ರಕ್ಷಣೆ ನೀಡಿ ಎಂದು ನಿವಾಸಿಗಳು ಮೌನ ಪ್ರತಿಭಟನೆ ಮಾಡಲು ಮುಂದಾಗಿದ್ದರು. ಆದರೆ, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪೊಲೀಸರು ಪ್ರತಿಭಟನೆ ಮಾಡಬೇಡಿ ಎಂದು ಮನವಿ ಮಾಡಿದರು. ಸ್ಥಳಕ್ಕೆ ಆಗಮಿಸಿ ನಿವಾಸಿಗಳ ಸಂಕಷ್ಟವನ್ನು ಆಲಿಸಿದರು, ರಕ್ಷಣೆ ಕೊಡುವುದಾಗಿ ಭರವಸೆ ನೀಡಿದರು.
ಆರ್. ಆರ್. ನಗರ ಉಪ ಚುನಾವಣೆ; ಡಿಕೆಶಿ ತುರ್ತು ಸುದ್ದಿಗೋಷ್ಠಿ
ಗಿರಿಧಾಮ ನಿವಾಸಿಗಳ ಸಂಘದ ಅಧ್ಯಕ್ಷ ಜೋಸೆಫ್ ಹೂವರ್ ಒನ್ ಇಂಡಿಯಾದ ಜೊತೆ ಈ ಕುರಿತು ಮಾತನಾಡಿದರು. "ಮೂರು ದಿನಗಳ ಹಿಂದೆ ಒಂದು ಗ್ಯಾಂಗ್ ವಾರ್ ನಡೆಯಿತು. ಆಸ್ತಿ ವಿಚಾರಕ್ಕಾಗಿ ಈ ಘಟನೆ ನಡೆಯಿತು. ಒಂದು ಗ್ರೂಪ್ ಸುಮಾರು 150 ಜನ, ಮತ್ತೊಂದು ಗ್ರೂಪ್ 80 -100 ಜನರನ್ನು ಕರೆತಂದು ಗಲಾಟೆ ಮಾಡಿಕೊಂಡಿದ್ದಾರೆ" ಎಂದರು.
ಆರ್. ಆರ್. ನಗರ ಉಪ ಚುನಾವಣೆ; ಮುನಿರತ್ನಗೆ ಬಿಜೆಪಿ ಟಿಕೆಟ್
"ಈ ಗ್ಯಾಂಗ್ ವಾರ್ ಬಳಿಕ ಲೇಔಟ್ ಶಾಂತಿ, ಕಾನೂನು ಸುವ್ಯವಸ್ಥೆ ಹಾಳಾಗಿದೆ. ಮಹಿಳೆಯರು ಮತ್ತು ಮಕ್ಕಳು ಓಡಾಡಲು ಹಿಂಜರಿಯುತ್ತಿದ್ದಾರೆ. ನಕಲಿ ಆಸ್ತಿ ಪತ್ರಗಳನ್ನು ಹಿಡಿದುಕೊಂಡು ಅವರು ಗಲಾಟೆ ಮಾಡುತ್ತಿದ್ದು, ನಿವಾಸಿಗಳಿಗೆ ತೊಂದರೆಯಾಗಿದೆ" ಎಂದು ಹೂವರ್ ಹೇಳಿದರು.
"ಜೆಸಿಬಿ ತೆಗೆದುಕೊಂಡು ಆಸ್ತಿಗಳಿಗೆ ಹಾಕಿದ ಕಾಪೌಂಡ್ ಒಡೆಯುವುದು, ಮನೆಗೆ ನುಗ್ಗಲು ಪ್ರಯತ್ನ ಮಾಡುವುದು ಮಾಡುತ್ತಿದ್ದಾರೆ. ಅವರ ಕಿತ್ತಾಟದಿಂದಾಗಿ ನಿವಾಸಿಗಳಿಗೆ ತೊಂದರೆ ಆಗಿದೆ. ಕಾನೂನು ಪ್ರಕಾರ ನ್ಯಾಯಾಲಯಕ್ಕೆ ಹೋಗಿ ಬಗೆಹರಿಸಿಕೊಳ್ಳಿ, ರೌಡಿಸಂಗೆ ಏಕೆ?" ಎಂದು ಪ್ರಶ್ನಿಸಿದರು.
"ಎಲ್ಲರೂ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿ, ನ್ಯಾಯಾಲಯದಲ್ಲಿ ಹೋರಾಟ ಮಾಡಿ. ಲೇಔಟ್ನಲ್ಲಿರುವ ಜನರನ್ನು ಹೆದರಿಸಬೇಡಿ. ಯಾವಾಗ ನಮಗೆ ಹೊಡೆಯುತ್ತಾರೋ? ಭಯದ ವಾತಾವರಣ ನಿರ್ಮಾಣವಾಗಿದೆ" ಎಂದು ಪರಿಸ್ಥಿತಿ ವಿವರಿಸಿದರು.
"ತುಂಬಾ ದಿನಗಳಿಂದ ಈ ರೀತಿ ನಡೆಯುತ್ತಲೇ ಇದೆ. ಇದು ನಿಲ್ಲಬೇಕು, ಲೇಔಟ್ನ ನಿವಾಸಿಗಳಿಗೆ ಶಾಂತಿ ಬೇಕಾಗಿದೆ. ಪೊಲೀಸರು ರಕ್ಷಣೆ ನೀಡಬೇಕು" ಎಂದು ಜೋಸೆಫ್ ಹೂವರ್ ಆಗ್ರಹಿಸಿದರು.
ಗಿರಿಧಾಮ ನಿವಾಸಿಗಳ ಸಂಘದ ಜೊತೆ ಭಾನುವಾರ ಪೊಲೀಸರು ಸಭೆ ನಡೆಸಿದರು. ಸಭೆಯಲ್ಲಿ ನಿವಾಸಿಗಳು ಆಗಿರುವ ಸಮಸ್ಯೆಗಳ ಬಗ್ಗೆ ವಿವರವಾಗಿ ಮನವರಿಕೆ ಮಾಡಿಕೊಟ್ಟರು. ನಿವಾಸಿಗಳ ದೂರು ಆಲಿಸಿದ ಪೊಲೀಸರು ರಕ್ಷಣೆ ಕೊಡುವ ಭರವಸೆ ನೀಡಿದರು. ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಗಿರಿಧಾಮ ಲೇಔಟ್ ಸುತ್ತಮುತ್ತಲೂ ಸುಮಾರು 47 ಮನೆಗಳಿವೆ. ಅಭಿವೃದ್ಧಿ ಹೊಂದುತ್ತಿರುವ ಬಡಾವಣೆಯಲ್ಲಿ ಮನೆಗಳನ್ನು ಕಟ್ಟಲು ಸುಮಾರು 30 ಸೈಟ್ಗಳಲ್ಲಿ ಶೆಡ್ಗಳನ್ನು ಹಾಕಲಾಗಿದೆ. ಇಂತಹ ಸಂದರ್ಭದಲ್ಲಿಯೇ ಆಸ್ತಿಯ ಸಮಸ್ಯೆ, ರೌಡಿಗಳ ಕಾಟ ಆರಂಭವಾಗಿದೆ.