ಉಪ ಚುನಾವಣೆ ಕಣದಿಂದ ಹಿಂದೆ ಸರಿದ ರೋಷನ್ ಬೇಗ್
ಬೆಂಗಳೂರು, ನವೆಂಬರ್ 18: ದೇಶದ ಪುರಾತನ ಪಕ್ಷದ ನಿಷ್ಠಾವಂತ ಎಂದು ಹೇಳಿಕೊಂಡು ತಿರುಗುತ್ತಿದ್ದ ರೋಷನ್ ಬೇಗ್ ಗೆ ಎಲ್ಲಾ ಪ್ರಮುಖ ಪಕ್ಷಗಳ ಬಾಗಿಲು ಬಂದ್ ಆಗಿದ್ದು, ಮುಂದೇನು ಮಾಡುತ್ತಾರೆ ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಉಪ ಚುನಾವಣೆ ಸಂದರ್ಭದಲ್ಲಿ ತಟಸ್ಥವಾಗಿ ಉಳಿಯಲು ಬೇಗ್ ನಿರ್ಧರಿಸಿದ್ದಾರೆ. ಈ ಮೂಲಕ ಉಪ ಚುನಾವಣೆ ಸಮರದಿಂದ ಹಿಂದೆ ಸರಿದಿದ್ದಾರೆ.
ಮಾಜಿ ಸಚಿವ ರೋಷನ್ ಬೇಗ್ ಅವರು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ರೋಷನ್ ಬದಲಿಗೆ ಶರವಣ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದರಿಂದ ಬೇಸರಗೊಂಡ ಬೇಗ್, ಜೆಡಿಎಸ್ ಬೆಂಬಲ ಪಡೆದು ಪಕ್ಷೇತರರಾಗಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಇದೆಲ್ಲಕ್ಕೂ ಸೋಮವಾರ(ನ.18) ದಂದು ಬೇಗ್ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಉಪ ಚುನಾವಣೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಬೇಗ್ ಅವರ ಬೆಂಬಲಿಗರು ಶರವಣ ಪರ ಕೆಲಸ ಮಾಡಲು ಮನಸ್ಸಿಲ್ಲದಿದ್ದರೂ ರಿಜ್ವಾನ್ ವಿರುದ್ಧವಾಗಿ ತಂತ್ರ ಹೂಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಶಿವಾಜಿನಗರ ಉಪ ಚುನಾವಣೆ ಟಿಕೆಟ್
ಮಾಜಿ ಸಚಿವ ರೋಷನ್ ಬೇಗ್ ಹೆಸರು ಐಎಂಎ ಹಗರಣದಲ್ಲಿ ಕೇಳಿ ಬಂದಿದೆ. ಬಿಜೆಪಿ ಹಗರಣದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿತ್ತು. ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿತ್ತು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಈ ಕಾರಣದಿಂದಾಗಿ ರೋಷನ್ ಬೇಗ್ ಸೇರ್ಪಡೆಗೆ ಒಪ್ಪಿಗೆ ಸಿಕ್ಕಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಶಿವಾಜಿನಗರ ಉಪ ಚುನಾವಣೆ ಟಿಕೆಟ್ ಸಹ ರೋಷನ್ ಬೇಗ್ ಕೈ ತಪ್ಪುವ ನಿರೀಕ್ಷೆ ಇದೆ. ಬಿಜೆಪಿ ಸಂಭಾವ್ಯ ಪಟ್ಟಿಯಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು, ರೋಷನ್ ಬೇಗ್ ಮತ್ತು ರುಮನ್ ಬೇಗ್ ಹೆಸರು ಕೇಳಿ ಬಂದಿತ್ತು.
ಬೇಗ್ ಗೆ ಬಾಗಿಲು ಬಂದ್ ಆಯಿತು
ಬೆಂಗಳೂರಿನಲ್ಲಿ ಪಕ್ಷಾತೀತ ಶಾಸಕರು ಎಂಬ ಗುಂಪೊಂದಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಯಾವುದೇ ಇದ್ದರೂ ಬೆಂಗಳೂರಿನಲ್ಲಿ ಸಮಪಾಲು, ಸರ್ವರಿಗೂ ಅವಕಾಶ ಎಂಬ ಅಘೋಷಿತ ವಾಕ್ಯದಡಿಯಲ್ಲಿ ಕೆಲವು ಶಾಸಕರು ಇನ್ನೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ರೀತಿ ರೋಷನ್ ಬೇಗ್ ಅವರು ಬಿಜೆಪಿ ಸೇರಲು ಮುಂದಾದಾಗ, ಬಿಜೆಪಿಯ ಬೆಂಗಳೂರು ಶಾಸಕರು ಬೆನ್ನಿಗೆ ನಿಂತು ಪಕ್ಷದ ಹೈಕಮಾಂಡ್ ತನಕ ಸುದ್ದಿ ಮುಟ್ಟಿಸಿದ್ದರು. ಆದರೆ, ಬೇಗ್ ಅವರು ಬಿಜೆಪಿ ಸೇರುವುದು ಬೇಡ ಎಂದು ಆರೆಸ್ಸೆಸ್ ಮುಖಂಡರು ಖಡಾಖಂಡಿತವಾಗಿ ಹೇಳಿದ್ದರಿಂದ ಬೇಗ್ ಗೆ ಬಾಗಿಲು ಬಂದ್ ಆಯಿತು.
2004ರ ನಕಲಿ ಛಾಪಾ ಕಾಗದ ಹಗರಣದಲ್ಲಿ ಬೇಗ್
ಅಬ್ದುಲ್ ತೆಲಗಿ ಆರೋಪಿಯಾಗಿದ್ದ 2004ರ ನಕಲಿ ಛಾಪಾ ಕಾಗದ ಹಗರಣದಲ್ಲಿ ಬೇಗ್ ಹೆಸರು ಕೇಳಿ ಬಂದಿತ್ತು. ಎಸ್ಎಂ ಕೃಷ್ಣ ಸರ್ಕಾರದಲ್ಲಿ ಸಚಿವರಾಗಿದ್ದ ಬೇಗ್ ಅವರು ರಾಜೀನಾಮೆ ನೀಡಬೇಕಾಯಿತು. ಬೇಗ್ ಬಂಧನಕ್ಕೆ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತ್ತು. ಅಬ್ದುಲ್ ಕರೀಂ ತೆಲಗಿ ಕೂಡಾ ರಾಜಕೀಯ ನಾಯಕರ ನೆರವು ಸಿಕ್ಕಿದ್ದನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದು ಬೇಗ್ ಗೆ ಮುಳುವಾಗಿತ್ತು. ಬೇಗ್ ಅವರ ರಾಜಕೀಯ ಬದುಕನ್ನು ಮುಕ್ತಾಯಗೊಳಿಸಿ ಶಿವಾಜಿನಗರ ಕ್ಷೇತ್ರದ ಮೇಲೆ ಪ್ರಭುತ್ವ ಸ್ಥಾಪಿಸಲು ಬಿಜೆಪಿ ಹವಣಿಸಿತ್ತು.
ಬಹುಕೋಟಿ ಐಎಂಎ ಹಗರಣದಲ್ಲಿ ಬೇಗ್ ಹೆಸರು
ಬೆಂಗಳೂರಿನ ಶಾಸಕರ ಮೂಲಕ ಮಾಜಿ ಸಚಿವ ಎಂಜೆ ಅಕ್ಬರ್, ಮುಕ್ತಾರ್ ಅಬ್ಬಾಸ್ ನಖ್ವಿ ಸಂಪರ್ಕಿಸಿದ್ದ ಬೇಗ್ ಅವರು ಬಿಜೆಪಿ ಸೇರುವುದಕ್ಕೆ ಬೇಗ್ ಯತ್ನಿಸಿದ್ದರು. ಆದರೆ, ಬಹುಕೋಟಿ ಐಎಂಎ ಹಗರಣದಲ್ಲಿ ಬೇಗ್ ಹೆಸರು ಕೇಳಿ ಬಂದಿದ್ದರಿಂದ ಬೇಗ್ ಅವರಿಗೆ ಆರೆಸ್ಸೆಸ್ ತಡೆ ಬಲವಾಯಿತು.
ಬಿಜೆಪಿ ಹಗರಣದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿತ್ತು. ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿತ್ತು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಈ ಕಾರಣದಿಂದಾಗಿ ರೋಷನ್ ಬೇಗ್ ಸೇರ್ಪಡೆಗೆ ಒಪ್ಪಿಗೆ ಸಿಕ್ಕಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.