ಆಸ್ಟ್ರೇಲಿಯಾ, ಕರ್ನಾಟಕ ಶಾಸಕರು, ಸಂಸದರ ಮುಖಾಮುಖಿ ಜೂನ್ 29
ಬೆಂಗಳೂರು, ಜೂನ್ 28: ಇಲ್ಲಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದ ಕೆಆರ್ ಜಿ ಸಭಾಂಗಣದಲ್ಲಿ ಜೂನ್ ಇಪ್ಪತ್ತೊಂಬತ್ತರ ಗುರುವಾರ ಸಂಜೆ 5.30ರಿಂದ ರಾತ್ರಿ 7ರವರೆಗೆ ಆಸ್ಟ್ರೇಲಿಯಾ ಜನ ಪ್ರತಿನಿಧಿಗಳು ಹಾಗೂ ಕರ್ನಾಟಕದ ಶಾಸಕರು ಹಾಗೂ ಸಂಸದರ ಮಧ್ಯೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.
ವ್ಯವಸ್ಥೆಯ ವಿಕೇಂದ್ರೀಕರಣದಲ್ಲಿ ಪಾತ್ರ, ಜವಾಬ್ದಾರಿ ಮತ್ತು ತೀರ್ಮಾನ ಕೈಗೊಳ್ಳುವ ಬಗ್ಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಬಿ-ಪ್ಯಾಕ್ ನ ಸಿಇಒ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ರೇವತಿ ಅಶೋಕ್ ಸ್ವಾಗತಿಸಲಿದ್ದಾರೆ. ಆ ನಂತರ ವಿಚಾರದ ಬಗ್ಗೆ ಪ್ಯಾನಲ್ ಡಿಸ್ಕಷನ್ ನಡೆಯಲಿದೆ.
ಬಿ ಪ್ಯಾಕ್ ನ ಕಾರ್ಯದರ್ಶಿ ಕಾರ್ಯಕ್ರಮದ ನಿರ್ವಹಣೆ ಮಾಡಲಿದ್ದಾರೆ. ಅಸ್ಟ್ರೇಲಿಯಾದ ಎಂಎಲ್ ಸಿ ಡಾ.ಸಾಲಿ ಟಲ್ಬೋಟ್, ಸಂಸದರಾದ ಮಡೆಲಿನ್ ಒಗಿಲ್ವಿ, ಶಾಸಕರಾದ ಕೇಟ್ ವೋರ್ಡನ್, ರಾಜ್ಯ ಸಭಾ ಸದಸ್ಯರಾದ ಎಂ.ವಿ.ರಾಜೀವ್ ಗೌಡ, ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್.ಅಶ್ವತ್ ನಾರಾಯಣ್ ಹಾಗೂ ಜೆಡಿಎಸ್ ನ ರಾಷ್ಟ್ರೀಯ ವಕ್ತಾರ ತನ್ವೀರ್ ಅಹ್ಮದ್ ಅವರು ಸಂವಾದಕರಾಗಿ ಪಾಲ್ಗೊಳ್ಳಲಿದ್ದಾರೆ. ಆ ನಂತರ ಪ್ರಶ್ನೋತ್ತರಕ್ಕೆ ಅವಕಾಶ ಇರಲಿದೆ.