ಅಮಿನ್ ಮಟ್ಟುವಿನಿಂದ ಹತ್ಯೆಗೆ ಸಂಚು: ರೋಹಿತ್ ಚಕ್ರತೀರ್ಥ ಹೇಳಿದ್ದೇನು?
ಅಂಕಣಕಾರರು- ಲೇಖಕ ರೋಹಿತ್ ಚಕ್ರತೀರ್ಥ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಸುದ್ದಿ ಸದ್ಯಕ್ಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪತ್ರಿಕೆಯೊಂದರಲ್ಲಿ ವರದಿಯಾಗಿದೆ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಬಗ್ಗೆ ರೋಹಿತ್ ಚಕ್ರತೀರ್ಥ ಅವರು ಬರೆದುಕೊಂಡಿದ್ದಾರೆ.
ರೋಹಿತ್ ಚಕ್ರತೀರ್ಥ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದನ್ನು ಯಥಾವತ್ ಇಲ್ಲಿ ಕೊಡಲಾಗಿದೆ.
ಪರಿಚಿತ ಪತ್ರಕರ್ತರೊಬ್ಬರು ಫೋನ್ ಮಾಡಿ 'ನಿಮ್ಮ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂಬ ವಿಷಯ ನಿಮಗೆ ಗೊತ್ತೆ?' ಎಂದು ಕೇಳಿದಾಗ ಕ್ಷಣ ಅಧೀರನಾದೆ. 'ಏನು ವಿಷಯ? ಯಾರಿಗೆ ನನ್ನ ಜೀವ ತೆಗೆಯಬೇಕಿದೆಯಂತೆ?' ಎಂದು ಕೇಳಿದಾಗ ಅವರು, ಭಾಸ್ಕರ್ ಪ್ರಸಾದ್ ಎಂಬವರು ಬರೆದಿದ್ದ ಒಂದು ಪೋಸ್ಟ್ ಓದಿ ಹೇಳಿದರು.
ರೋಹಿತ್ ಚಕ್ರತೀರ್ಥರಿಗೆ ಕಾಮತ ಪ್ರತಿಷ್ಠಾನದ ಪ್ರಶಸ್ತಿ
ನನ್ನ ಲೇಖನಗಳನ್ನು ಕೆಲವು ಪತ್ರಿಕೆಗಳು ಪ್ರಕಟಿಸದಂತೆ ಮಾಡಲು ಸಂಚು ನಡೆದಿತ್ತು.
ನನ್ನ ಪುಸ್ತಕಗಳನ್ನು ಕೆಲವೊಂದು ಪ್ರಕಾಶಕರು ಪ್ರಕಟಿಸುವುದನ್ನು ತಡೆಯಲು ಸಂಚು ನಡೆದಿತ್ತು.
ನನ್ನನ್ನು ಕ್ಷುಲ್ಲಕ ಪ್ರಕರಣಗಳಲ್ಲಿ ಸಿಕ್ಕಿಸಿ ಜೈಲು ಸೇರಿಸಲು ಇನ್ನಿಲ್ಲದ ಪ್ರಯತ್ನಗಳು ನಡೆದಿದ್ದವು.
ರಾತ್ರೋರಾತ್ರಿ ನನ್ನನ್ನು ಬಂಧಿಸಲು ಸ್ಕೆಚ್ ಹಾಕಲಾಗಿತ್ತು.
ಈಗ, ಸುಪಾರಿ ಕೂಡ ಕೊಡಲಾಗಿತ್ತು ಎಂಬ ಹೊಸ ಸುದ್ದಿ ಬಂದಿದೆ.
ಕಳೆದ ಐದು ವರ್ಷಗಳಲ್ಲಿ ನಡೆದಿರುವ ಎಲ್ಲ ಬೆಳವಣಿಗೆಗಳನ್ನು ಮುಂದಿಟ್ಟುಕೊಂಡು ಕಾನೂನು ಹೋರಾಟ ನಡೆಸಬೇಕು ಎಂದುಕೊಂಡಿದ್ದೇನೆ. ಇದು ನನ್ನೊಬ್ಬನ ಹೋರಾಟವಲ್ಲ. ನಾಲ್ಕು ವರ್ಷದ ಹಿಂದೆ ನಿಲುಮೆ ಎಂಬ ಸಂಘಟನೆಯನ್ನು ಹೇಗೆ ಬಗ್ಗುಬಡಿಯಲು ನೋಡಲಾಯಿತು, ಹೇಗೆ ಒಂದು ನಿರ್ದಿಷ್ಟ ಐಡಿಯಾಲಜಿಯನ್ನು ಹಿಸುಕಲು ಯತ್ನಿಸಲಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಅದರ ಹಿಂದೆ ಇದ್ದವರು ಯಾರೆಂಬುದನ್ನು ನಾನು ಪ್ರತ್ಯೇಕ ಹೇಳಬೇಕಿಲ್ಲ.
ಕಲಬುರ್ಗಿಯಿಂದ ಹಿಡಿದು ಗೌರಿ ಲಂಕೇಶ್ ವರೆಗೆ, ಕುಟ್ಟಪ್ಪರಿಂದ ಹಿಡಿದು ದೀಪಕ್ ವರೆಗೆ ಯಾಕೆ ಯಾವ ಕೊಲೆಯ ತನಿಖೆಯೂ ಸರಿಯಾದ ಅಂತ್ಯ ಕಂಡಿಲ್ಲ ಎಂಬುದಕ್ಕೆ ಉತ್ತರ ಇಲ್ಲಿದೆ. ಸಿದ್ದರಾಮಯ್ಯ ತನ್ನ ಎಡಬಲಗಳಲ್ಲಿ ಸುಪಾರಿ ಹಂತಕರನ್ನೇ ಕಟ್ಟಿಕೊಂಡು ಆಡಳಿತ ಮಾಡಿದರೆ, ಅಮಾಯಕರ ಕೊಲೆ ಮಾಡಿದ ಪಾಪಿಗಳು ಸಿಗುವುದಾದರೂ ಹೇಗೆ?
ಭಾಸ್ಕರ್ ಪ್ರಸಾದ್ ಅವರು ಅಮಿನ್ ಮಟ್ಟು ಜತೆ ಗುರುತಿಸಿಕೊಂಡಿದ್ದರು
ಇನ್ನು ಈ ಆರೋಪದ ವಿಚಾರಕ್ಕೆ ಸಂಬಂಧಿಸಿದಂತೆ ರೋಹಿತ್ ಚಕ್ರತೀರ್ಥ ಅವರನ್ನು ಒನ್ಇಂಡಿಯಾ ಕನ್ನಡ ಮಾತನಾಡಿಸಿತು. "ಈ ಭಾಸ್ಕರ್ ಪ್ರಸಾದ್ ಅವರು ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಅವರ ಜತೆಗೆ ಗುರುತಿಸಿಕೊಂಡಿದ್ದವರು. ಇಬ್ಬರ ಮಧ್ಯೆ ಇತ್ತೀಚೆಗೆ ಭಿನ್ನಾಭಿಪ್ರಾಯ ಬಂದಿದೆ" ಎಂದರು.
ಉಡುಪಿ ಚಲೋವರೆಗೆ ಒಟ್ಟಿಗೆ ಇದ್ದರು
"ಅಂಥ ಭಾಸ್ಕರ್ ಪ್ರಸಾದ್ ತಮ್ಮ ಫೇಸ್ ಬುಕ್ ನಲ್ಲಿ ನನ್ನ ಹತ್ಯೆಗೆ ಅಮಿನ್ ಮಟ್ಟು ಸಂಚು ರೂಪಿಸಿದ್ದರು ಎಂದು ಬರೆದುಕೊಳ್ಳುತ್ತಾರೆ. ಇವರಿಬ್ಬರು ಉಡುಪಿ ಚಲೋವರೆಗೆ ಒಟ್ಟಿಗೆ ಕೆಲಸ ಮಾಡಿದ್ದರು. ಆ ವೇಳೆ ವೇದಿಕೆಯು ಯಾರ ಪರವಾಗಿ ಆಗಬೇಕು ಎಂಬ ವಿಚಾರಕ್ಕೆ ಭಿನ್ನಾಭಿಪ್ರಾಯ ಬೆಳೆಯಿತು" ಎಂದು ಹೇಳಿದರು.
ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ತಾರಾ ಪೊಲೀಸರು?
ಈ ಹಿಂದೆ ಕೂಡ ನನ್ನ ಬಗ್ಗೆ ಇರುವ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಅಮಿನ್ ಮಟ್ಟು ಕಾರಿಕೊಂಡಿದ್ದಾರೆ. ನನ್ನ ಲೇಖನಗಳನ್ನು ಪುಸ್ತಕಗಳಾಗಿ ಮುದ್ರಿಸಿದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಹತ್ಯೆಗೆ ಸಂಚು ಮಾಡಿದ ಆರೋಪ ಕೇಳಿಬಂದಾಗ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಬಹುದು. ರವಿ ಬೆಳಗೆರೆ ಅವರ ವಿರುದ್ಧ ಹತ್ಯೆಗೆ ಸುಪಾರಿ ಆರೋಪ ಕೇಳಿಬಂದಾಗ ಪೊಲೀಸರು ನಡೆದುಕೊಂಡಿದ್ದೇ ಹಾಗೆ ಎಂದು ಹೇಳಿದರು.
ಮುಂದಿನ ಕಾನೂನು ಕ್ರಮದ ಬಗ್ಗೆ ಆಲೋಚನೆ
ಈಗ ಕೂಡ ನನ್ನ ಹತ್ಯೆಗೆ ದಿನೇಶ್ ಅಮಿನ್ ಮಟ್ಟು ಸಂಚು ನಡೆಸಿದ್ದಾರೆ ಎಂಬ ಆರೋಪ ಬಂದಿದೆ. ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಬಹುದಾ ಎಂದು ಕಾದು ನೋಡುತ್ತೇನೆ. ಒಂದು ವೇಳೆ ಹಾಗೆ ದೂರು ದಾಖಲಿಸದಿದ್ದರೆ ಮುಂದಿನ ಕಾನೂನು ಕ್ರಮ ಏನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಆಲೋಚನೆ ಮಾಡುತ್ತೇನೆ ಎಂದು ರೋಹಿತ್ ಚಕ್ರತೀರ್ಥ ಹೇಳಿದರು.