ರಾಬರ್ಟ್ ಪೈರಸಿ ಮಾಡಿದ್ದವನನ್ನು ಜೈಲಿಗೆ ಕಳುಹಿಸಿದ ದರ್ಶನ್ ಅಭಿಮಾನಿ
ಬೆಂಗಳೂರು, ಮಾರ್ಚ್ 14: ನಟ ದರ್ಶನ್ ಅಭಿಯನದ ರಾಬರ್ಟ್ ಚಿತ್ರಕ್ಕೆ ಪೈರಸಿ ಕಾಟ ಶುರುವಾಗಿದೆ. ರಾಬರ್ಟ್ ಚಿತ್ರವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ದರ್ಶನ್ ಅಭಿಮಾನಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಿನಿಮಾ ಬಿಡುಗಡೆಯಾಗಿ ಎರಡೇ ದಿನಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ಸಿನಿಮಾ ಲೀಕ್ ಆಗಿತ್ತು. ಚಿತ್ರ ನಿರ್ಮಾಪಕರು ತಲೆ ಕೆಡಿಸಿಕೊಂಡಿದ್ದರು. ಚಿತ್ರವನ್ನು ಸಿನಿಮಾ ಥೇಟರ್ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಬಿಟ್ಟು, ದುಡ್ಡು ಮಾಡುವ ವಂಚಕರ ಬಹುದೊಡ್ಡ ಗ್ಯಾಂಗ್ ಇದರ ಹಿಂದೆ ಇರುವ ಅನುಮಾನ ಮೂಡಿತ್ತು.
ವಿಶ್ವನಾಥ್ ಬಂಧಿತ ಅರೋಪಿ. ಈತನ ವಿರುದ್ಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಇದೊಂದು ದೊಡ್ಡ ಜಾಲವಾಗಿ ಬೆಳೆದಿದ್ದು, ನಾನಾ ಜಿಲ್ಲೆಯಲ್ಲಿ ಪೈರಸಿ ವಂಚಕರು ಇರುವ ಸುಳಿವು ಸಿಕ್ಕಿದೆ. ಆರೋಪಿಗಳಿಗಾಗಿ ಮಾಗಡಿ ರಸ್ತೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ್ ತಿಳಿಸಿದ್ದಾರೆ.
ರಾಬರ್ಟ್ ಪೈರಸಿ: 'ಬಿಗ್ ಬ್ರದರ್ಸ್' ವಿರುದ್ಧ ಉಮಾಪತಿ ಶ್ರೀನಿವಾಸ್ ಗುಡುಗು
ರಾಬರ್ಟ್ ಚಿತ್ರವನ್ನು ನಕಲು ಮಾಡಿದ್ದ ಆರೋಪಿಗಳು, ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಇನ್ಸ್ಟಾಗ್ರಾಮ್ ಇತರೆ ಸಾಮಾಜಿಕ ಜಾಲ ತಾಣದಲ್ಲಿ ಹರಿದು ಬಿಟ್ಟಿದ್ದರು. ಯಾರಾದರೂ ಎಚ್.ಡಿ. ಪ್ರಿಂಟ್ ಕೇಳಿದರೆ ಹಣ ಪಡೆದು ನೀಡುತ್ತಿದ್ದರು. ವಾಟ್ಸಪ್ನಲ್ಲಿ ಹರಿದಾಡುತ್ತಿದ್ದ ಲಿಂಕ್ ಬೆನ್ನು ಬಿದ್ದ ದರ್ಶನ್ ಅಭಿಮಾನಿಯೊಬ್ಬ ಎಚ್ಡಿ ಗುಣಮಟ್ಟದ ವಿಡಿಯೋ ಕೊಡುವಂತೆ ಕೇಳಿದ್ದಾನೆ. ಹೆಚ್ಚು ಹಣ ನೀಡಿದರೆ ಎಚ್ಡಿ ಪ್ರಿಂಟ್ ನೀಡುವುದಾಗಿ ವಿಶ್ವನಾಥ್ ಹೇಳಿದ್ದಾನೆ. ಹಣ ಕೊಡುವುದಾಗಿ ಹೇಳಿ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರ ಬಳಿ ಕಳಿಸಿಕೊಂಡು, ವಿಶ್ವನಾಥ್ ಎಂಬಾತನನ್ನು ಹಿಡಿದು ಮಾಗಡಿ ರಸ್ತೆ ಪೊಲೀಸರಿಗೆ ಒಪ್ಪಿಸಲಾಗಿದೆ.
2ನೇ ದಿನವೂ ರಾಬರ್ಟ್ ದಾಖಲೆ ಗಳಿಕೆ: ಎರಡು ದಿನಕ್ಕೆ ಒಟ್ಟು ಕಲೆಕ್ಷನ್ ಎಷ್ಟು?
ಉಮಾಪತಿ ಫಿಲಂಸ್ ಅವರ ವ್ಯವಸ್ಥಾಪಕ ಶ್ರೀಕಾಂತ್ ಎಂಬುವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಹಲವಾರು ಸಿನಿಮಾ ಲೀಕ್ ಮಾಡಿರುವುದು ಗೊತ್ತಾಗಿದೆ. ಅಲ್ಲದೇ ಈ ಸಿನಿಮಾ ಲಿಂಕ್ ಕಳಿಸುವ ಮೂಲಕ ಹಣ ಪಡೆಯುತ್ತಿದ್ದ ಸಂಗತಿ ಗೊತ್ತಾಗಿದೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ವಿಶ್ವನಾಥ್ ಮೊಬೈಲ್ ಸಂಪರ್ಕ ಸಂಖ್ಯೆ ಜಾಡು ಹಿಡಿದು ಇತರರಿಗಾಗಿ ಶೋಧ ನಡೆದಿದೆ.ಡಿಸಿಪಿ ಸಂಜೀವ ಪಾಟೀಲ್ ಅವರ ಸೂಚನೆ ಮೇರೆಗೆ, ರಾಜ್ಯದ ನಾನಾ ಜಿಲ್ಲೆಗಳಲ್ಲಿ ಬೇರು ಬಿಟ್ಟಿರುವ ಪೈರಸಿ ದುರಾಳರನ್ನು ಬಂಧಿಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನಿಮಾ ನಕಲು ಮಾಡಿ ದಂಧೆ ಮಾಡುತ್ತಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.