ಶಿವಾಜಿನಗರ ಕ್ಷೇತ್ರದ 'ಕೈ' ಟಿಕೆಟ್ ರಿಜ್ವಾನ್ ಪಾಲು
ಬೆಂಗಳೂರು, ನವೆಂಬರ್ 17: ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯ ಕಾಂಗ್ರೆಸ್ ಪಕ್ಷದ ಟಿಕೆಟ್ ಅನ್ನು ಭಾರೀ ಲಾಬಿ ಮಾಡುವ ಮೂಲಕ ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಈ ಹಿಂದಿನ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ, ಗುಜರಾತ್ ರಾಜ್ಯ ಉಸ್ತುವಾರಿ ರಾಜೀವ್ ಸಾಥವ್ ಲಿಂಕ್ ಬಳಸಿ ಟಿಕೆಟ್ ಪಡೆದುಕೊಳ್ಳಲು ಕೆ.ಸಿ.ವೇಣುಗೋಪಾಲ್ ಅವರಿಗೆ ಕರೆ ಮಾಡಿಸಿದ್ದಾರೆ. ರಾಜೀವ್ ಅವಧಿಯಲ್ಲಿ ಅರ್ಷದ್ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದರು.
ಉಪಚುನಾವಣಾ ಕಣ: ಶಿವಾಜಿನಗರ ಕ್ಷೇತ್ರದಿಂದ ಟಬು ದಿನೇಶ್ ಗುಂಡೂರಾವ್ ಅಭ್ಯರ್ಥಿ?
ಸೋತರೆ ಮತ್ತೆ ಟಿಕೆಟ್ ಕೇಳಲ್ಲ ಇದೇ ಕೊನೆ ಬಾರಿ ಒಂದು ಅವಕಾಶ ನೀಡುವಂತೆ ಕೆ.ಸಿ.ವೇಣುಗೋಪಾಲ್ ಬಳಿ ಆಪ್ತರಾದ ರವಿ ಬೋಸರಾಜ್, ಶ್ರೀನಿವಾಸ್ ಮಾನೆಯನ್ನು ಕಳುಹಿಸಿದ್ದರು. ಈ ಬಾರಿ ತಯಾರಿ ಮಾಡಿಕೊಂಡಿದ್ದೇನೆ ಗೆದ್ದು ಬರ್ತೀನಿ, ಟಿಕೆಟ್ ಕೊಡಿಸಿ ಅಂತ ಸಿದ್ಧರಾಮಯ್ಯ, ಜಮೀರ್, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಮೂಲಕವೂ ಒತ್ತಡ ಹಾಕಿಸಿ ದಯವಿಟ್ಟು ಅವಕಾಶ ಕೊಡಿ ಎಂದು ರಿಜ್ವಾನ್ ಅರ್ಷದ್ ಬೇಡಿಕೊಂಡಿದ್ದಾರೆ.
ಈ ವೇಳೆ ಸಿದ್ಧರಾಮಯ್ಯ ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. 2014 ರ ಲೋಕಸಭೆ ಚುನಾವಣೆಗೆ ಜಾಫರ್ ಷರೀಫ್ ಬದಲಿಗೆ ಟಿಕೆಟ್ ಕೊಡಿಸಿದ್ದೆ, 2019ರಲ್ಲಿ ರೋಷನ್ ಬೇಗ್ ಬದಲು ನಿನಗೆ ಟಿಕೆಟ್ ಕೊಡಿಸಿದ್ದೆ, ಈ ಬಾರಿ ಗೆಲ್ಲದೆ ಇದ್ದರೇ ಕಷ್ಟವಾಗುತ್ತದೆ ಎಂದು ಸೂಚನೆ ನೀಡಿ ಕೆ.ಸಿ.ವೇಣುಗೋಪಾಲ್ ಗೆ ಕರೆ ಮಾಡಿ ರಿಜ್ವಾನ್ ಗೆ ಟಿಕೆಟ್ ನೀಡುವಂತೆ ಹೇಳಿದ್ದಾರೆ. ಬಳಿಕ ಕೆಸಿವಿಯಿಂದಲೂ ಅರ್ಷದ್ ವಾರ್ನಿಂಗ್ ಪಡೆದುಕೊಂಡಿದ್ದಾರೆ. ಶಿವಾಜಿನಗರ ಕ್ಷೇತ್ರ ನನಗೂ ಪ್ರತಿಷ್ಠೆಯ ಪ್ರಶ್ನೆ, ಸೋತರೆ ಮತ್ತೆ ಬರಬೇಡಿ, ನಿಮಗೆ ಇದೇ ಕೊನೆಯ ಅವಕಾಶ ಎಂದು ಎಚ್ಚರಿಕೆ ಕೊಟ್ಟ ಬಳಿಕ ಟಕೆಟ್ ನೀಡಲು ಒಪ್ಪಕೊಂಡಿದ್ದಾರೆ ಎನ್ನಲಾಗಿದೆ.