ನದಿ ನೀರು ಯಾವ ಸರ್ಕಾರದ ಸ್ವತ್ತೂ ಅಲ್ಲ : ರಾಜ್ಯಪಾಲ ವಜುಭಾಯಿ ವಾಲಾ
ಬೆಂಗಳೂರು, ನವೆಂಬರ್ 15 : ಬೆಂಗಳೂರು ಕೃಷಿ ವಿವಿ ಇಂದು (ನವೆಂಬರ್ 16) ರಂದು ಜಿ.ಕೆ.ವಿ.ಕೆ ಯಲ್ಲಿ ಆಯೋಜಿಸಿದ್ದ ಕೃಷಿ ಮೇಳ -2017 ಉದ್ಘಾಟಿಸಿ ಮಾತನಾಡಿದ ವಜುಭಾಯಿ ವಾಲಾ ಅವರು ರೈತರ ಗುಣಗಾನ ಮಾಡುವ ಜೊತೆಗೆ 'ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀರಿನ ವಿಷಯದಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕು' ಎಂದರು.
In Pics: ಜಿಕೆವಿಕೆಯಲ್ಲಿ ಕೃಷಿ ಮೇಳದಲ್ಲಿ ಹಳ್ಳಿ ಸೊಗಡು, ಸೊಬಗು
'ನದಿಗಳು ಆಡಳಿತಾತ್ಮಕವಾಗಿ ಕೇಂದ್ರ ಸರ್ಕಾರದ ಹಿಡಿದಲ್ಲಿರಬಹುದು ಆದರೆ ಸತ್ಯದಲ್ಲಿ ನದಿ ನೀರಿನ ಮೇಲೆ ಯಾರ ಹಕ್ಕೂ ಇಲ್ಲ, ಹಕ್ಕಿರುವುದು ರೈತರಿಗೆ ಮಾತ್ರ' ಎಂದರು. ವಜುಭಾಯಿ ವಾಲಾ ಅವರ ಈ ಮಾತಿಗೆ ಭಾರಿ ಕರತಾಡನ ಮಾಡುವ ಮೂಲಕ ನೆರದಿದ್ದವರು ಬೆಂಬಲ ಸೂಚಿಸಿದರು.
ಪ್ರತಿ ವರ್ಷ ದೇಶಾದ್ಯಂತ 2000 ಟಿ.ಎಂ.ಸಿ ನೀರು ಸಮುದ್ರ ಸೇರುತ್ತಿದೆ ಇದರಲ್ಲಿ ಕಾಲು ಭಾಗವನ್ನಾದರು ರೈತರಿಗಾಗಿ ಉಪಯೋಗಮಾಡಿಕೊಳ್ಳುವಂತೆ ಕೇಂದ್ರ ಯೋಜನೆ ರೂಪಿಸಬೇಕಿದೆ ಎಂದು ಅವರು ಪರೋಕ್ಷವಾಗಿ ಕೇಂದ್ರವು ನೀರಾವರಿ ಯೋಜನೆಗಳ ಬಗ್ಗೆ ತೋರುತ್ತಿರುವ ನಿರ್ಲಕ್ಷವನ್ನು ಟೀಕಿಸಿದರು. ಕೇಂದ್ರ ಸರ್ಕಾರ ಈ ಹಿಂದೆ ನದಿ ಜೋಡಣೆ ವಿಷಯ ಪ್ರಸ್ತಾಪಿಸಿತ್ತಾದರೆ ಆ ನಂತರ ಅದು ಮೂಲೆಗುಂಪಾದುದನ್ನು ಇಲ್ಲಿ ನೆನೆಯಬಹುದು.
ಕೃಷಿ ಮೇಳದಲ್ಲಿ ವಸ್ತು ಪ್ರದರ್ಶನವೇ ಹೈಲೆಟ್
ಕಾವೇರಿ ವಿವಾದವನ್ನೂ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಅವರು, ತಮಿಳುನಾಡು ಮತ್ತು ಕರ್ನಾಟಕದ ರೈತರಿಗೆ ಪ್ರತಿ ವರ್ಷ ನೀರಿನ ವಿಷಯದಲ್ಲಿ ವಿವಾದವಾಗುವುದು ನಡೆಯುತ್ತಲೆ ಬಂದಿದೆ. ಆದರೆ ಯಾವುದೇ ವಿಷಯವನ್ನಾಗಲಿ ಮಾತನಾಡಿಯೇ ಬಗೆಹರಿಸಿಕೊಳ್ಳಬೇಕು. ವಿವಾದಗಳಿಂದ ಉಪಯೋಗವಿಲ್ಲ ಎಂದು ಕಿವಿಮಾತು ಹೇಳಿದರು.
ಕರ್ನಾಟಕದ ರೈತನಾಗಲಿ ತಮಿಳುನಾಡಿದ ರೈತನಾಗಲಿ ಎಲ್ಲರೂ ಒಂದೆ. ಎಲ್ಲ ರೈತರೂ ದೇಶದ ರೈತರೆ ಅವರ ಬದುಕು ಮುಖ್ಯ ಎಂದು ಅವರು ಹೇಳಿದರು.
ಕೃಷಿ ಮೇಳದಲ್ಲಿ ಮುದ್ದೆ, ಕಾಳು ಸಾರಿಗೆ ಮುಗಿಬಿದ್ದ ಜನ
ಮಾತಿನ ಮಧ್ಯೆ ಇಸ್ರೇಲ್ ದೇಶದ ಉದಾಹರಣೆ ನೀಡಿದ ಅವರು, "ಇಸ್ರೇಲ್ ನಲ್ಲಿ ವರ್ಷಕ್ಕೆ ಕೆಲವೇ ಸೆಂಟಿಮೀಟರ್ ಮಳೆ ಆಗುತ್ತದೆ ಆದರೆ ಅದರಲ್ಲಿಯೇ ಅಲ್ಲಿನ ಜನ ಅತ್ಯುತ್ತಮವಾಗಿ ಕೃಷಿ ಮಾಡುತ್ತಾರೆ. ಅತ್ಯುತ್ತಮ ತಂತ್ರಜ್ಞಾನವನ್ನು ಅವರು ಕೃಷಿಯಲ್ಲಿ ಬಳಸಿಕೊಳ್ಳುತ್ತಾರೆ. ಬಿದ್ದ ಮಳೆ ನೀರನ್ನು ಪೋಲು ಮಾಡುವುದಿಲ್ಲ, ಹನಿ ನೀರಾವರಿ ಪದ್ಧತಿ ಅಲ್ಲಿ ಖಡ್ಡಾಯ, ನಮ್ಮಲ್ಲೂ ಇಂತಹಾ ವ್ಯವಸ್ಥೆ ಬರಬೇಕು' ಎಂದರು.
ನೀರಿನ ಮಹತ್ವದ ಬಗ್ಗೆ ರೈತರಿಗೆ ಪಾಠ ಮಾಡಿದ ವಜುಭಾಯಿ ವಾಲಾ, ನೀರು ಅತ್ಯಮೂಲ್ಯ ಅದನ್ನು ಜವಾಬ್ದಾರಿಹೀನವಾಗಿ ಬಳಸಬೇಡಿ, ಹಾಗೆ ಮಾಡಿದ್ದಲ್ಲಿ ಬದುಕು ಕಳೆದುಕೊಳ್ಳು ಸ್ಥಿತಿ ಉದ್ಭವವಾಗುತ್ತದೆ' ಎಂದು ಅವರು ಎಚ್ಚರಿಸಿದರು.