ಸಚಿವ ಆರ್. ಅಶೋಕ್ ಹೇಳಿದ ಆ 17 ಪ್ರಕರಣಗಳು!
ಬೆಂಗಳೂರು, ಆ. 14: ಬೆಂಗಳೂರಿನ ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿಯಲ್ಲಿ ಗಲಭೆಯ ಬಳಿಕ ಪರಿಸ್ಥಿತಿ ಇದೀಗ ಶಾಂತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 160ಕ್ಕೂ ಹೆಚ್ಚಿನ ಕಿಡಗೇಡಿಗಳ ಬಂಧನವಾಗಿದೆ. ಅವರಲ್ಲಿ 81 ಆರೋಪಿಗಳನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಗಲಭೆಯಲ್ಲಿ ಎಸ್ಡಿಪಿಐ ಸಂಘಟನೆಯ ಪಾತ್ರವಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಸಿಎಂ ಜೊತೆಗಿನ ಸಭೆ ಬಳಿಕ ಹೇಳಿಕೆ ಕೊಟ್ಟಿದ್ದಾರೆ.
Recommended Video
ಗೃಹ ಸಚಿವರ ಹೇಳಿಕೆ ಬೆನ್ನಲ್ಲಿಯೇ ಕಂದಾಯ ಸಚಿವ ಆರ್. ಅಶೋಕ್ ಎಸ್ಡಿಪಿಐ ಸಂಘಟನೆ ನಿಷೇಧಕ್ಕೆ ಆಗ್ರಹಿಸಿದ್ದಾರೆ. ಅದಕ್ಕೆ ಅವರು 17 ಹತ್ಯೆ ಹಾಗೂ ಹಲ್ಲೆ ಪ್ರಕರಣಗಳ ಆರೋಪ ಮಾಡಿದ್ದಾರೆ. ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆಯಲ್ಲಿ ಎಸ್ಡಿಪಿಐ ನೇರ ಪಾತ್ರವಿದೆ. ಹಿಂದೆ ನಡೆದಿರುವ ಹಲವಾರು ಹಿಂದೂ ಕಾರ್ಯಕರ್ತರ ಹತ್ಯೆ ಹಾಗೂ ಹಲವಾರು ದೇಶದ್ರೋಹಿ ಚಟುವಟಿಕೆಗಳಲ್ಲಿ ಎಸ್ಡಿಪಿಐ ಪಾತ್ರವಿದೆ. ಹೀಗಾಗಿ ಎಸ್ಡಿಪಿಐ ಸಂಘಟನೆಯನ್ನು ನಿಷೇಧಿಸುವಂತೆ ಗೃಹಮಂತ್ರಿ ಬಸವರಾಜ್ ಬೊಮ್ಮಾಯಿ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್. ಅಶೋಕ್ ಟ್ವೀಟ್ ಮಾಡಿದ್ದಾರೆ.
ಪೊಲೀಸ್ ಹುದ್ದೆಗಳು ಬಿಕರಿಯಾದ ನಂತರ 'ಊರಿಗೆ ಬಿದ್ದ ಬೆಂಕಿ'ಯ ಕುರಿತು...!
ಅಶೋಕ್ ಆರೋಪಗಳು
ಮಾಜಿ ಗೃಹ ಸಚಿವ ಹಾಗೂ ಹಾಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಎಸ್ಡಿಪಿಐ ನಿಷೇಧಕ್ಕೆ ಹದಿನೇಳು ಆರೋಪಗಳನ್ನು ಮಾಡಿದ್ದಾರೆ. ಪಿಎಫ್ಐ, ಕೆಎಫ್ಡಿ ಹಾಗೂ ಎಸ್ಡಿಪಿಐ ಸಂಘಟನೆಗಳು ಆ ದುಷ್ಕೃತ್ಯಗಳನ್ನು ಮಾಡಿವೆ ಎಂದು ಅವರು ಆರೋಪಿಸಿದ್ದಾರೆ. ತಾವು ಮಾಡಿರುವ ಎಲ್ಲ ಆರೋಪಗಳನ್ನು ಉಲ್ಲೇಖಿಸಿ ಸಂಘಟನೆ ನಿಷೇಧಕ್ಕೆ ಆಗ್ರಹಿಸಿದ್ದಾರೆ. ಬಳಿಕ ಟ್ವೀಟ್ ಮೂಲಕ ಸಂಘಟನೆ ನಿಷೇಧಕ್ಕೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.
ಕಳೆದ 2008 ರಿಂದ 2019ರ ವರೆಗೆ ರಾಜ್ಯದಲ್ಲಿ ನಡೆದಿದ್ದ ಪ್ರಕರಣಗಳನ್ನು ಅವರು ಉಲ್ಲೇಖಿಸಿದರು. ಅವುಗಳಲ್ಲಿ ಎಸ್ಡಿಪಿಐ ಪಾತ್ರವಿದೆ ಎಂದಿದ್ದಾರೆ. ದಾಖಲೆಗಳನ್ನು ಕೇಳುವವರಿಗೆ ದಾಖಲೆಗಳನ್ನು ಕೊಡುತ್ತಿದ್ದೇನೆ ಎಂದು ಅಶೋಕ್ ಹೇಳಿದರು.
2008 ರಿಂದ 2011
ಹಿಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದಾಗ ನಡೆದಿರುವ ಘಟನೆಗಳನ್ನು ಕಂದಾಯ ಸಚಿವ ಆರ್. ಅಶೋಕ್ ಅವರು ಉಲ್ಲೇಖಿಸಿದ್ದಾರೆ. ಆಗಿನ ಬಿಜೆಪಿ ಆಡಳಿತದಲ್ಲಿ ಒಟ್ಟು 8 ಪ್ರಕರಣಗಳು ನಡೆದಿವೆ.
ಘಟನೆ 1: 2008-ಹುಣಸೂರಿನಲ್ಲಿ ಪಿಎಫ್ಐ ಸಂಘಟನೆಯಿಂದ ವಸಂತ ಕುಮಾರ್ ಪಿಳ್ಳೆ ಹತ್ಯೆ ನಡೆದಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಆರೋಪಿಸಿದ್ದಾರೆ.
ಘಟನೆ 2: 2008-ಮೈಸೂರಿನ ಉದಯಗಿರಿ ಸೂರ್ಯನಾರಾಯಣ ದೇವಸ್ಥಾನದ ಎದುರು ಪಿಎಫ್ಐ ಸಂಘಟನೆ ಕಾರ್ಯಕರ್ತರಿಂದ ಎಳನೀರು ವ್ಯಾಪಾರಿಯಾಗಿದ್ದ ವೆಂಕಟೇಶ್ ಹತ್ಯೆ ಆರೋಪ.
ಘಟನೆ 3: 2009-ಪಿಎಫ್ಐ, ಕೆಎಫ್ಡಿ ಕಾರ್ಯಕರ್ತರು ಆನಂದ್ ಪೈ ಮತ್ತು ರಮೇಶ್ ಎಂಬ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಹಲ್ಲೆಯಿಂದ ರಮೇಶ್ ಸಾವನ್ನಪ್ಪಿದರು, ಆನಂದ್ ಪೈ ತೀವ್ರ ಗಾಯಗಳಿಂದ ಅಂಗವಿಕಲನಾಗಿದ್ದಾನೆ ಎಂದು ಆರೋಪ.
ಘಟನೆ 4: 2009-ಪಿಎಫ್ಐ ಸಂಘಟನೆ ಕಾರ್ಯಕರ್ತರು ಸವಿತಾ ಸಮಾಜದ ಶಶಿಕುಮಾರ್ ಎಂಬ ಯುವಕನನ್ನು ಕೊಲೆ ಮಾಡಿದ್ದರು ಎಂಬ ಆರೋಪ.
ಘಟನೆ 5: 2009-ಮೈಸೂರು ನಗರ ಬಿಜೆಪಿ ಮೋರ್ಚಾ ಅಧ್ಯಕ್ಷ ಗಿರಿಧರ್ ಮೇಲೆ ಕೆಎಫ್ಡಿ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ಮಾಡಿದ್ದರು ಎಂಬ ಆರೋಪ.
ಘಟನೆ 6: 2009-ಮೈಸೂರಿನ ಅಶೋಕ ರಸ್ತೆಯ ಹರೀಶ್ ಬುಕ್ಸ್ಟಾಲ್ನ ಹರೀಶ್ ಎಂಬುವರನ್ನು ಕೆಎಫ್ಡಿ ಕಾರ್ಯಕರ್ತರು ಹತ್ಯೆ ಮಾಡಿದ ಆರೋಪ.
ಘಟನೆ 7: 2010- ಮೈಸೂರಿನಲ್ಲಿ ಕೆಎಫ್ಡಿ ಕಾರ್ಯಕರ್ತರಿಂದ ಪರೇಶ್ ಮೆಹ್ತ ಹತ್ಯೆ ಮಾಡಿದ್ದರು ಎಂಬ ಆರೋಪ.
ಘಟನೆ 8: 2011-ಹುಣಸೂರಿನ 14 ಹಾಗೂ 15 ವರ್ಷಗಳ ವಿದ್ಯಾರ್ಥಿಗಳನ್ನು ಅಪಹರಿಸಿ ಪಿಎಫ್ಐ ಸಂಘಟನೆ ಕಾರ್ಯಕರ್ತರು ಕೊಲೆ ಮಾಡಿದ್ದರು ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಆರೋಪಿಸಿದ್ದಾರೆ. ಈ ಎಲ್ಲ ಪ್ರಕರಣಗಳು ಹಿಂದೆ ಬಿಜೆಪಿ ಸರ್ಕಾರ ಅಧಿಕಾರಿದಲ್ಲಿದ್ದಾಗ ನಡೆದಿವೆ ಎಂಬುದು ಗಮನಿಸಬೇಕಾದ ಅಂಶ.
2012 ರಿಂದ 2016
ಘಟನೆ 9: 2012-ಮಂಗಳೂರಿನಲ್ಲಿ ಶರತ್ ಮಡಿವಾಳರ್ ಎಂಬ ಯುವಕನನ್ನು ಪಿಎಫ್ಐ ಕಾರ್ಯಕರ್ತರು ಹತ್ಯೆ ಮಾಡಿದ. ಪ್ರಕರಣದಲ್ಲಿ ಮೊದಲ ಆರೋಪಿ ಈಗ ಚಾಮರಾಜನಗರ ಪುರಸಭೆಯ ಸದಸ್ಯನಾಗಿದ್ದಾರೆ ಎಂದು ಆರೋಪ.
ಘಟನೆ 10: 2015-ಟಿಪ್ಪು ಜಯಂತಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕುಟ್ಟಪ್ಪ ಎಂಬುವನನ್ನು ಕೆಎಫ್ಡಿ ಕಾರ್ಯಕರ್ತರು ಮಡಿಕೇರಿಯಲ್ಲಿ ಹತ್ಯೆ ಆರೋಪ.
ಘಟನೆ 11: 2015- ಮೂಡುಬಿದರಿಯಲ್ಲಿ ಪಿಎಫ್ಐ ಕಾರ್ಯಕರ್ತರಿಂದ ಪ್ರಶಾಂತ ಪೂಜಾರಿ ಹತ್ಯೆ ಆರೋಪ.
ಘಟನೆ 12: 2015- ಸುರತ್ಕಲ್ನಲ್ಲಿ ಪಿಎಫ್ಐ ಕಾರ್ಯಕರ್ತರಿಂದ ದೀಪಕ್ ರಾವ್ ಹತ್ಯೆ ಆರೋಪ.
ಘಟನೆ 13: 2015-ಶಿವಮೊಗ್ಗದಲ್ಲಿ ಮೆರವಣಿಗೆ ಹೋಗುತ್ತಿದ್ದ ಪಿಎಫ್ಐ ಕಾರ್ಯಕರ್ತರು ವಿಶ್ವನಾಥ್ ಎಂಬುರವನ್ನು ಹತ್ಯೆ ಮಾಡಿದ್ದ ಆರೋಪ.
ಘಟನೆ 14: 2016-ಹುಣಸೂರಿನ ಇಬ್ಬರು ವಿದ್ಯಾರ್ಥಿಗಳ ಹತ್ಯಾ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ರಾಜು ಎಂಬ ಹಿಂದೂಪರ ಕಾರ್ಯಕರ್ತನನ್ನು ಪಿಎಫ್ಐ ಕಾರ್ಯಕರ್ತರು ಕ್ಯಾತಮಾರನಹಳ್ಳಿಯಲ್ಲಿ ಹತ್ಯೆ ಆರೋಪ.
ಘಟನೆ 15: 2016-ಕುಶಾಲನಗರದಲ್ಲಿ ಪ್ರವೀಣ್ ಪೂಜಾರಿ ಹತ್ಯೆಯಲ್ಲಿನ 10 ಜನರು ಪಿಎಫ್ಐ ಕಾರ್ಯಕರ್ತರು ಎಂದು ಅಶೋಕ್ ಆರೋಪಿಸಿದ್ದಾರೆ.
ಘಟನೆ 16: 2016-ಬೆಂಗಳೂರಿನ ಶಿವಾಜಿನಗರದಲ್ಲಿ ಎಸ್ಡಿಪಿಐ ಹಾಗೂ ಕೆಎಫ್ಡಿ ಕಾರ್ಯರ್ತರಿಂದ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಆರೋಪ.
2017 ರಿಂದ 2020
ಘಟನೆ 17: 2019- ಬೆಂಗಳೂರಿನ ಪುರಭವನದ ಎದುರು ಸಿಎಎ ಪರ ಪ್ರತಿಭಟನೆ ನಡೆಸುತ್ತಿದ್ದ ಹಿಂದೂ ಪರ ಸಂಘಟನೆ ಕಾರ್ಯಕರ್ತರ ಮೇಲೆ ಎಸ್ಡಿಪಿಐ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವರುಣ್ ಎಂಬುವರ ಮೇಲೆ ಮಾರಣಾಂಕಿತ ಹಲ್ಲೆ ನಡೆಸಿದ ಆರೋಪವನ್ನು ಕಂದಾಯ ಸಚಿವ ಆರ್. ಅಶೋಕ್ ಮಾಡಿದ್ದಾರೆ.