ಬೆಂಗಳೂರಿನಲ್ಲಿ 3 ದಿನಗಳ ಕಾಲ ವೈಮಾನಿಕ ಜೈವಿಕ ಸೋಂಕು ನಿವಾರಕ ಸಿಂಪಡಣೆ
ಬೆಂಗಳೂರು, ಮೇ 29: ಬೆಂಗಳೂರು ನಗರದಲ್ಲಿ ಕೊರೊನಾ ಸಾಂಕ್ರಾಮಿಕ ರೋಗವನ್ನು ಹತೋಟಿಗೆ ತರುವ ಉದ್ದೇಶದಿಂದ ವಿಮಾನದ ಮೂಲಕ ಜೈವಿಕ ಸೋಂಕು ನಿವಾರಕ ಸಿಂಪಡಿಸುವ ಏರಿಯಲ್ವರ್ಕ್ಸ್ ಏರೋ ಎಲ್ಎಲ್ಪಿ ಸಂಸ್ಥೆಯ ಪ್ರಾಯೋಗಿಕ ಕಾರ್ಯಾಚರಣೆಗೆ ಶನಿವಾರ ಕಂದಾಯ ಸಚಿವ ಆರ್. ಅಶೋಕ್ ಚಾಲನೆ ನೀಡಿದರು.
ಬೆಂಗಳೂರಿನ ಜಕ್ಕೂರು ಏರೋಡ್ರೋಮ್ನಿಂದ ಚಾಲನೆ ನೀಡಲಾದ ಈ ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್, ಕ್ಯಾಪ್ಟನ್ ನಾಗೇಶ್ ಪಾಲ್ಗೊಂಡಿದ್ದರು.
ಸಿಎಂ ಬದಲಾವಣೆ ಚಟುವಟಿಕೆ ನಿಜ ಆದರೆ ನಾನು ಕೊರೊನಾ ಕಾರ್ಯದಲ್ಲಿ ನಿರತ- ಆರ್ ಅಶೋಕ್
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಕೊರೊನಾ ಸಾಂಕ್ರಾಮಿಕ ನಿಯಂತ್ರಣಕ್ಕೆ ರಾಜ್ಯ ಸರ್ಕಾರದ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೇ ಮೊದಲ ಬಾರಿಗೆ ವಿಮಾನದ ಮೂಲಕ ಜೈವಿಕ ಸೋಂಕು ನಿವಾರಕವನ್ನು ವಿಮಾನದ ಮೂಲಕ ಸಿಂಡಪಣೆ ಮಾಡುವ ಕಾರ್ಯಾಚರಣೆಯನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಏರಿಯಲ್ವರ್ಕ್ಸ್ ಏರೋ ಎಲ್ಎಲ್ಪಿ ಸಂಸ್ಥೆ ಮೂರು ದಿನಗಳ ಕಾಲ ಬೆಂಗಳೂರು ನಗರದ ಜನನಿಬಿಡ ಪ್ರದೇಶಗಳಲ್ಲಿ ವಿಮಾನದ ಮೂಲಕ ಸಿಂಪಡಣೆ ಮಾಡಲಿದೆ ಎಂದರು. ದೇಶದಲ್ಲೇ ಮೊದಲ ಬಾರಿಗೆ ಕೋವಿಡ್ ನಿಯಂತ್ರಣಕ್ಕೆ ವಿಮಾನದ ಮೂಲಕ ಸೋಂಕು ಸಿಂಪಡಣೆಯ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. ಮುಂದೆ ಓದಿ...
ನಗರದ ಜನನಿಬಿಡ ಪ್ರದೇಶಗಳಲ್ಲಿ ಸಿಂಪಡನೆ
ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ವಿಮಾನದ ಮೂಲಕ ಜೈವಿಕ ಸೋಂಕು ನಿವಾರಕ ಸಿಂಪಡನೆ ಮಾಡುವ ಕಾರ್ಯ ಸಫಲವಾದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರದೇಶಗಳಲ್ಲಿ ಈ ಕಾರ್ಯಾಚರಣೆ ಮುಂದುವರೆಸಲಾಗುವುದು. ಸೋಮವಾರದಿಂದ ಶಿವಾಜಿನಗರ, ಕೆ ಆರ್ ಮಾರುಕಟ್ಟೆ ಪ್ರದೇಶಗಳಲ್ಲಿ ಸಿಂಪಡನೆ ಮಾಡಲಾಗುವುದು ಎಂದು ತಿಳಿಸಿದರು.
ಅಮೆರಿಕಾ ಹಾಗೂ ಆಫ್ರಿಕಾಗಳಲ್ಲಿ ವೈಮಾನಿಕ ಜೈವಿಕ ಸೋಂಕು ನಿವಾರಣೆ ಸಿಂಪಡಣಾ ಕಾರ್ಯದಲ್ಲಿ ವಿಶೇಷ ಪರಿಣತಿ ಹೊಂದಿರುವ ತಂಡ ಬೆಂಗಳೂರು ನಗರದಲ್ಲಿ ಈ ಕಾರ್ಯಾಚರಣೆ ನಡೆಸಲಿದೆ. ಗಾಳಿಯಲ್ಲಿರುವ ಕೋವಿಡ್ ವೈರಾಣುವನ್ನು ಸಾಯಿಸುವಷ್ಟು ಸಮಯ ಗಾಳಿಯಲ್ಲಿ ಸೋಂಕು ನಿವಾರಣ ದ್ರಾವಣ ಸಿಂಪಡಿಸುವಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಸಂಸ್ಥೆ ಸಿದ್ಧಗೊಳಿಸಿದೆ. ದ್ರಾವಣ ಗಾಳಿಯಲ್ಲಿ ತೇಲಾಡುತ್ತಿರುವ ಬ್ಯಾಕ್ಟೀರಿಯಾ ಹಾಗೂ ವೈರಾಣುಗಳನ್ನು ಕೊಲ್ಲಲಿವೆ ಎಂದು ಏರಿಯಲ್ವರ್ಕ್ಸ್ ಏರೋ ಎಲ್ಎಲ್ಪಿ ಸಂಸ್ಥೆಯ ಮುಖ್ಯಸ್ಥ ಕ್ಯಾಪ್ಟನ್ ಮುರಳಿ ರಾಮಕೃಷ್ಣನ್ ತಿಳಿಸಿದರು.ಒಂದು ಗಂಟೆಯಲ್ಲಿ 300 ಹೆಕ್ಟೇರ್ ಪ್ರದೇಶದಲ್ಲಿ ಸಿಂಪಡಣೆ
300 ಲೀಟರ್ಗಳಷ್ಟು ಸೋಂಕು ನಿವಾರಣಾ ದ್ರಾವಣವನ್ನು ಹೊತ್ತೊಯ್ಯಬಲ್ಲ ಅಮೇರಿಕನ್ ಚಾಂಪಿಯನ್ ಸ್ಕೌಟ್ ವಿಮಾನ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿ ಒಂದು ಗಂಟೆಯಲ್ಲಿ 300 ಹೆಕ್ಟೇರ್ನಷ್ಟು ಪ್ರದೇಶದಲ್ಲಿ ಸಿಂಪಡಣೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ಕಾರ್ಯಕ್ಕಾಗಿ ಅದು ಯುಎಲ್ವಿ (ULV) ಸ್ಪ್ರೇಯರ್ ಮೂಲಕ ಸಿಪಿ ನೋಜಲ್ (CP Nozzles) ಗಳನ್ನು ಬಳಸಿ 100 (Below 100 Microns) ಮೈಕ್ರಾನ್ಗಳಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಸಿಂಪಡಣೆ ಮಾಡಲಿದೆ ಎಂದು ಮಾಹಿತಿ ನೀಡಿದರು.
ಎರಡು ರೀತಿಯ ದ್ರಾವಣ ಬಳಕೆ
ಈ ಸಿಂಪಡಣಾ ಕಾರ್ಯದಲ್ಲಿ ಎರಡು ರೀತಿಯ ಜೈವಿಕ ಸೋಂಕು ನಿವಾರಕ ದ್ರಾವಣಗಳನ್ನು ಬಳಸಲಾಗುವುದು. ಮೊದಲನೆಯದಾಗಿ ಏರ್ಲೆನ್ಸ್ ಮೈನಸ್ ಕೊರೊನಾ (Airlens Minus Corona): ಇದು ರಾಸಾಯನಿಕ ರಹಿತ ಮಾನವ ಸ್ನೇಹೀ ಹಾಗೂ ಪರಿಣಾಮಕಾರಿ ಸ್ಯಾನಿಟೈಸೇಷನ್ ಸಿಸ್ಟಮ್ ಆಗಿದೆ. ಕೇವಲ ನಲ್ಲಿಯ ನೀರು ಮತ್ತು ವಿದ್ಯುತ್ಶಕ್ತಿ ಬಳಸಿಕೊಂಡು ತಯಾರಿಸಲಾಗುವ ಸೋಂಕು ನಿವಾರಣಾ ದ್ರಾವಣವನ್ನು ಸಾರ್ವಜನಿಕ ಸ್ಥಳಗಳು, ಕಚೇರಿಗಳು, ಆಸ್ಪತ್ರೆಗಳು ಮತ್ತು ಮನೆಗಳಲ್ಲಿ ಬಳಸಬಹುದಾಗಿದೆ. ಪೆರ್ಸಾಪಿಎನ್ ಇನ್ನೊವೇಷನ್ಸ್(PerSapien Innovations) ಸಂಸ್ಥೆಯಿಂದ ಕಂಡುಹಿಡಿಯಲಾಗಿರುವ ಈ ನೂತನ ತಂತ್ರಜ್ಞಾನವನ್ನು, ಸ್ಟಾನ್ಫೋರ್ಡ್ ಯೂನಿವರ್ಸಿಟಿ, ಐಐಟಿ ಮತ್ತು ಎಐಐಎಂಎಸ್ (IITS & AIIMS) ನಿಂದ ಇಂಜಿನಿಯರ್ಗಳು ಮತ್ತು ವಿಜ್ಞಾನಿಗಳ ತಂಡ ಪರೀಕ್ಷಿಸಿದ್ದು ಐಸಿಎಂಆರ್ (ICMR) ನಿಂದ ದೃಢೀಕೃತಗೊಳಿಸಲ್ಪಟ್ಟಿದೆ. ಈ ನೂತನ ತಂತ್ರಜ್ಞಾನ ವೈರಾಣುಗಳು, ಬ್ಯಾಕ್ಟೀರಿಯಾ ಮತ್ತು ಇನ್ನಿತರ ಪ್ಯಾಥೋಜೀನ್ಸ್ಗಳ ವಿರುದ್ಧ ಬಹಳ ಸುರಕ್ಷಿತ, ಒಳ್ಳೆಯ ಮತ್ತು ಅತ್ಯಂತ ಪರಿಣಾಮಕಾರಿಯಾಗಿದೆ.
ಡಾ. ಕಾರ್ತಿಕ್ ನಾರಾಯಣ್ ರೂಪಿಸಿರುವ ದ್ರಾವಣ
ಎರಡನೆಯದಾಗಿ, ಶುಗಾರಧಾನ ಜೈವಿಕ ಆಂಟಿಮೈಕ್ರೋಬಿಯಲ್ ಕಾನ್ಸನ್ಟ್ರೇಟ್(Sugaradhana Organic Antimicrobial concentrate): ಈ ಸೋಂಕು ನಿವಾರಕ ದ್ರಾವಣವನ್ನು ನಮ್ಮ ಪ್ರಾಚೀನ ಆರೋಗ್ಯ ಪದ್ಧತಿ ಆಯುರ್ವೇದದ ಅಂಶಗಳನ್ನು ಬಳಸಿಕೊಂಡು ತಯಾರಿಸಲಾಗಿದೆ. ಇದು ಲ್ಯಾಬ್ಗಳಲ್ಲಿ ಮತ್ತು ಹೊರಾಂಗಣಗಳಲ್ಲಿ ಬ್ಯಾಕ್ಟೀರಿಯಾ, ಫಂಗಸ್ ಮತ್ತು ವೈರಾಣುಗಳ ವಿರುದ್ಧ ಪರಿಣಾಮಕಾರಿ ಫಲಿತಾಂಶ ನೀಡುತ್ತದೆ. ಈ ಜೈವಿಕ ಸೋಂಕು ನಿವಾರಣಾ ದ್ರಾವಣ ಚರ್ಮದ ಮೇಲೆ ಯಾವುದೇ ದುಷ್ಪರಿಣಾಮ ಬೀರದೆ 100% ಸುರಕ್ಷಿತವಾದದ್ದು. ಇದು ಗಾಳಿಯಲ್ಲಿ ಮಾಲಿನ್ಯ ಹರಡುವುದನ್ನು ಕಡಿಮೆ ಮಾಡುತ್ತದೆ. ಈ ದ್ರಾವಣ ಸಿಂಪಡಣೆ ಮಾಡಿರುವ ಪ್ರದೇಶದಲ್ಲಿ ಕೊರೊನಾ ವೈರಾಣುವನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ದ್ರಾವಣವನ್ನು ಡಾ ಕಾರ್ತಿಕ್ ನಾರಾಯಣನ್ ರೂಪಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಮಾಲಿನ್ಯ ನಿಯಂತ್ರಣ ಮಂಡಳಿ ಮೇಲುಸ್ತುವಾರಿ
ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ತಾಂತ್ರಿಕ ತಂಡ ಈ ಪ್ರಾಯೋಗಿಕ ಯೋಜನೆಯ ಕಾರ್ಯದ ಮೇಲುಸ್ತುವಾರಿ ವಹಿಸಲಿದೆ. ಮೂರು ದಿನಗಳ ಪ್ರಾಯೋಗಿಕ ಕಾರ್ಯಾಚರಣೆಯ ನಂತರ ಅದರಿಂದಾದ ಪ್ರಯೋಜನ ಹಾಗೂ ಪರಿಣಾಮಗಳನ್ನು ತಿಳಿಸಲಿದೆ ಎಂದು ಏರಿಯಲ್ ವರ್ಕ್ಸ್ ಏರೋ ಎಲ್ಎಲ್ಪಿಯ ಮುಖ್ಯಸ್ಥರಾದ ಮುರಳಿ ರಾಮಕೃಷ್ಣ ತಿಳಿಸಿದ್ದಾರೆ.
Recommended Video