ಕೊರೊನಾ ಆತಂಕ: ಬೆಂಗಳೂರಿಗರಿಗೆ ನೆಮ್ಮದಿಯ ಸುದ್ದಿಕೊಟ್ಟ ಸಚಿವ ಆರ್. ಅಶೋಕ್!
ಬೆಂಗಳೂರು, ಆ. 16: ಮಹಾಮಾರಿ ಅಂತಾನೆ ಈಗ ಕುಪ್ರಸಿದ್ಧವಾಗಿರುವ ಕೊರೊನಾ ವೈರಸ್ ಹಾವಳಿ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ನಮ್ಮ ದೇಶದಲ್ಲಿ ಮೂರನೇ ಅಲೆ ಆತಂಕ ಕಾಡುತ್ತಿದ್ದರೆ, ಅಮೆರಿಕ ಸೇರಿದಂತೆ ಮುಂದುವರೆದ ದೇಶಗಳಿಗೆ ಕೊರೊನಾ ನಾಲ್ಕನೆ ಅಲೆ ದಾಳಿಯಿಟ್ಟಿದೆ. ಹೀಗಾಗಿ ರಾಜ್ಯದಲ್ಲಿಯೂ ಕೂಡ ಡೆಲ್ಟಾ ವೈರಸ್ ಆತಂಕ ಸೇರಿದಂತೆ ಕೊರೊನಾ ಮೂರನೇ ಅಲೆಯ ಆತಂಕ ಬಿಡದಂತೆ ಜನರನ್ನು ಕಾಡುತ್ತಿದೆ. ಇದೇ ವೇಳೆಯಲ್ಲಿ ಕೊರೊನಾದೊಂದಿಗೆ ಬದುಕು ಎನ್ನುವಂತಹ ಅನಿವಾರ್ಯತೆ ಕೂಡ ಸೃಷ್ಟಿಯಾಗಿದೆ. ಹೀಗಾಗಿಯೇ ಶಾಲೆಗಳನ್ನೂ ಕೂಡ ಸರ್ಕಾರ ಆರಂಭಸಲು ಮುಂದಾಗಿದೆ.
ಈ ಆತಂಕದ ಸಂದರ್ಭದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಬೆಂಗಳೂರಿನ ಜನರಿಗೆ ನೆಮ್ಮದಿ ತರುವಂತಹ ಸುದ್ದಿ ಕೊಟ್ಟಿದ್ದಾರೆ. ಕೊರೊನಾ ಆರೋಗ್ಯ ಸಮಸ್ಯೆ ಎದುರಿಸಲು ಸರ್ಕಾರ ಹೊಸದೊಂದು ಕಾರ್ಯಕ್ರಮ ಹಮ್ಮಿಕೊಂಡಿದೆ. ಆ ಮೂಲಕ ಕೊರೊನಾದೊಂದಿಗೆ ಬದುಕು ಎಂಬುದನ್ನು ಜನರಿಗೆ ಮನಗಾಣಿಸಲು ಮುಂದಾಗಿದೆ.
ಕೊರೊನಾ ಮೊದಲ ಅಲೆಗಿಂತ ಕೊರೊನಾ ಎರಡನೇ ಅಲೆಯ ಭೀಕರತೆ ಹೆಚ್ಚಿತ್ತು. ಎರಡೂ ಅಲೆಗಳಿಂದ ಸಾಕಷ್ಟು ಅನುಭವ ಪಡೆದಿರುವ ಸರ್ಕಾರ ಜನರ ಆರೋಗ್ಯ ರಕ್ಷಣೆಗೆ ಹೊಸ ಕಾರ್ಯಕ್ರಮ ರೂಪಿಸಿದೆ. ರೋಗ ಬಂದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ ಆರಂಭದಲ್ಲಿಯೇ ಸೋಂಕು ಪತ್ತೆಗೆ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಜೊತೆಗೆ ಚಿಕಿತ್ಸೆ ಸಿಗದೇ ಜನರು ಬೀದಿಯಲ್ಲಿ ನರಳಾಡುತ್ತಿದ್ದನ್ನು ನೋಡಿದ್ದ ಸರ್ಕಾರ ಮುಂಜಾಗ್ರತೆ ವಹಿಸಿದೆ.
ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣ ಹಾಗೂ ಚಿಕಿತ್ಸೆಗೆ ಹೊಸ ಯೋಜನೆ ರೂಪಿಸಲಾಗಿದೆ. ನೂತನ ಯೋಜನೆ ಕುರಿತು ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ಕೊಟ್ಟಿದ್ದಾರೆ. ಹೀಗಾಗಿ ಇನ್ಮುಂದೆ ಕೊರೊನಾ ಚಿಕಿತ್ಸೆ ಪಡೆಯಲು ಅಲೆದಾಡಬೇಕಿಲ್ಲ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗೆ ಬಿಬಿಎಂಪಿಯಿಂದ ಮನೆಯಲ್ಲಿಯೇ ಚಿಕಿತ್ಸೆ ಸಿಗಲಿದೆ. ಅದನ್ನು ಪಡೆಯಲು ಏನು ಮಾಡಬೇಕು? ಮಾಹಿತಿ ಮುಂದಿದೆ!
'ಬಿಬಿಎಂಪಿ ವೈದ್ಯರು ನಿಮ್ಮ ಮನೆ ಬಾಗಿಲಿಗೆ'
ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಕೊರೊನಾ ವೈರಸ್ ನಿಯಂತ್ರಿಸುವ ಗುರಿಯೊಂದಿಗೆ ದೇಶದಲ್ಲೇ ಮೊದಲ ಬಾರಿಗೆ 'ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ' ಎಂಬ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.
ಕಂದಾಯ ಸಚಿವ ಆರ್. ಅಶೋಕ್ ಈ ಯೋಜನೆಗೆ ಚಾಲನೆ ನೀಡಿದ್ದು, "ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಕೆಲ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ. ಹೀಗಾಗಿ ನನಗೆ ಈ ಕಾರ್ಯಕ್ರಮದ ಆಲೋಚನೆ ಹೊಳೆಯಿತು. ಪ್ರತಿ ಮನೆಯ ಸದಸ್ಯರನ್ನು ಪರೀಕ್ಷೆಗೊಳಪಡಿಸಿದರೆ ಖಂಡಿತಾ ನಿಯಂತ್ರಣದ ನಿಟ್ಟಿನಲ್ಲಿ ಮಹತ್ವದ ಯಶಸ್ಸು ಸಿಗಲಿದೆ ಎಂಬುದು ನನ್ನ ಅಭಿಪ್ರಾಯ. ಎಲ್ಲರಿಗೂ ಆಸ್ಪತ್ರೆಗೆ ಹೋಗುವುದು ಸಾಧ್ಯವಾಗುವುದಿಲ್ಲ. ಆದರೆ ಈ ಪ್ರಯತ್ನದ ಮೂಲಕ ಅವರೆಲ್ಲರನ್ನು ತಲುಪುವ ಕೆಲಸವಾಗಲಿದೆ. ಸಾರ್ವಜನಿಕರು ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕು" ಎಂದು ಮನವಿ ಮಾಡಿಕೊಂಡಿದ್ದಾರೆ.
ಬಿಬಿಎಂಪಿ ಪಡೆಯಲಿದೆ ನಿಮ್ಮ ಆರೋಗ್ಯ ಮಾಹಿತಿ!
ಈ ಯೋಜನೆಯಲ್ಲಿ ಬೆಂಗಳೂರಿನ ಪ್ರತಿ ಮನೆಯ ಆರೋಗ್ಯದ ವಿವರವನ್ನು ವೈದ್ಯರು ಸಂಗ್ರಹಿಸಲಿದ್ದಾರೆ. ಆ ವಿವರವು ಬಿಬಿಎಂಪಿಯಲ್ಲಿ ಸಂಗ್ರಹಗೊಳ್ಳುವುದಲ್ಲದೇ ಬೇಕಾದಾಗ ಉಪಯೋಗಿಸಿಕೊಳ್ಳಬಹುದಾಗಿದೆ. ಹೀಗಾಗಿ ಮೋದಲೇ ಬೇರೆ ಕಾಯಿಲೆಗಳಿದ್ದವರಿಗೆ ಬಿಬಿಎಂಪಿ ವತಿಯಿಂದ ಹೆಚ್ಚಿನ ಗಮನ ಕೊಡಲು ಸಾಧ್ಯವಾಗುತ್ತದೆ.
"ಈ ಕಾರ್ಯಕ್ರಮವು ಸಂಪೂರ್ಣವಾಗಿ ಪೇಪರ್ ಲೆಸ್ ಆಗಿದ್ದು, ತಂಡವು ಟ್ಯಾಬ್ನಲ್ಲಿ ಮನೆಯ ಸದಸ್ಯರ ವಿವರಗಳನ್ನ ದಾಖಲಿಸಲಿದ್ದಾರೆ. ಅದು ಬಿಬಿಎಂಪಿ ತಂತ್ರಾಂಶದಲ್ಲಿಯೂ ಅಪ್ಲೋಡ್ ಆಗಲಿದೆ. ಜನರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಏನೇನು ಕಠಿಣ ಕ್ರಮಗಳನ್ನ ತೆಗದುಕೊಳ್ಳಬಹುದೋ ಅದೆಲ್ಲವನ್ನು ಸರ್ಕಾರ ತೆಗೆದುಕೊಳ್ಳಲಿದೆ", ಎಂದು ಮಾಹಿತಿ ನೀಡಿದರು.
ಮೊದಲ ಹಂತದಲ್ಲಿ ಅರ್ಧ ಬೆಂಗಳೂರಿನಲ್ಲಿ ತಪಾಸಣೆ!
"ಮೊದಲ ಹಂತದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿನ 54 ವಾರ್ಡ್ಗಳಲ್ಲಿ ಈ ಕಾರ್ಯಕ್ರಮ ಲಭ್ಯವಾಗಲಿದೆ. ವೈದ್ಯರ ತಂಡವು ಪ್ರತಿನಿತ್ಯ 50 ಮನೆಗಳಿಗೆ ಭೇಟಿ ನೀಡಿ, ಆ ಕುಟುಂಬ ಸದಸ್ಯರ ಸಂಪೂರ್ಣ ಆರೋಗ್ಯದ ವಿವರಗಳನ್ನು ಪಡೆಯಲಿದ್ದಾರೆ. ಈ ವೇಳೆ ಬಿಪಿ, ಡಯಾಬಿಟಿಸ್ ಸೇರಿದಂತೆ ಕೆಲ ಸಾಮಾನ್ಯ ಕಾಯಿಲೆ ಹಾಗೂ ಗಂಭೀರ ಕಾಯಿಲೆಗಳ ಕುರಿತಂತೆಯೂ ಮಾಹಿತಿ ಸಂಗ್ರಹ ಮಾಡಲಿದ್ದಾರೆ.
ಜೊತೆಗೆ ಪ್ರತಿ ಮನೆಯ ಸದಸ್ಯರು ಲಸಿಕೆ ಪಡೆದ ಬಗ್ಗೆ ಮಾಹಿತಿ ತೆಗೆದುಕೊಳ್ಳಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಆ ಮನೆಯಲ್ಲಿ ಭೇಟಿಯ ಸಮಯದಲ್ಲಿ ಕೋವಿಡ್ ಸೋಂಕಿತರು ಪತ್ತೆಯಾದಲ್ಲಿ ಅವರಿಗೆ ಹೋಮ್ ಐಸೋಲೇಷನ್ ಕಿಟ್ ಕೊಡಲಾಗುತ್ತದೆ" ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ. ಜೊತೆಗೆ ಈ ಯೋಜನೆಯನ್ನು ಹೇಗೆ ಜಾರಿಗೆ ತರಲಾಗುತ್ತದೆ ಎಂಬುದರ ವಿವರ ಹೀಗಿದೆ.
Recommended Video
ಒಬ್ಬ ವೈದ್ಯಾಧಿಕಾರಿ ಸೇರಿದಂತೆ ಐವರ ಹಲವು ತಂಡಗಳು!
ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಐವರು ಸದಸ್ಯರ ತಂಡ ರಚಿಸಲಾಗಿದೆ. ಅದರಲ್ಲಿ ಒಬ್ಬ ವೈದ್ಯಾಧಿಕಾರಿ (ಎಂಬಿಬಿಎಸ್/ಬಿಡಿಎಸ್/ಆಯುಷ್) ಹಾಗೂ ಉಳಿದಂತೆ ನರ್ಸ್, ಆಶಾಕಾರ್ಯಕರ್ತೆಯರು ಸೇರಿದಂತೆ ಅರೆ ವೈದ್ಯಕೀಯ ಸಿಬ್ಬಂದಿಗಳಿರುತ್ತಾರೆ. ಪ್ರತಿ ತಂಡದ ವೈದ್ಯಾಧಿಕಾರಿಗಳು 'ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ. ನಿಮ್ಮ ಆರೋಗ್ಯವೇ ನಮ್ಮ ಭಾಗ್ಯ' ಎಂಬ ಘೋಷಣೆಯನ್ನೊಳಗೊಂಡ ಬಿಳಿ ಬಣ್ಣದ ಏಪ್ರಾನ್ ಧರಿಸಿರುತ್ತಾರೆ.
ಜೊತೆಗೆ ಪ್ರತಿಯೊಂದು ತಂಡವು ಪ್ರತಿದಿನ ಕನಿಷ್ಠ 50 50 ಮನೆಗಳ ಸಮೀಕ್ಷೆ ನಡೆಸುತ್ತದೆ. ಪ್ರತೀ ವಾರ್ಡ್ಗೆ 5 ವೈದ್ಯರ ತಂಡಗಳನ್ನು ರಚಿಸಲಾಗಿದ್ದು, ಅಗತ್ಯಕ್ಕ ತಕ್ಕಂತೆ ಹೆಚ್ಚಿನ ತಂಡಗಳನ್ನು ನಿಯೋಜಿಸಿಕೊಳ್ಳಲಾಗುವುದು. ಮನೆ-ಮನೆಗೆ ತಂಡಗಳು ಭೇಟಿ ನಿಡುವ ಸಲುವಾಗಿ ವಾಹನಗಳ ನಿಯೋಜನೆ ಮಾಡಲಾಗಿದೆ. ಪ್ರಮುಖವಾಗಿ ಸಮೀಕ್ಷಾ ಕಾರ್ಯದಲ್ಲಿ ಪಡೆದ ಮಾಹಿತಿಯನ್ನು ಪ್ರತೀ ದಿನ ಬಿಬಿಎಂಪಿ ನಿಗದಿತ ಸಾಫ್ಟವೇರ್ನಲ್ಲಿ ದಾಖಲಿಸಲು ವೈಸ್ಯರ ತಂಡಕ್ಕೆ ಸೂಚಿಸಲಾಗಿದೆ.