ರಾಯಿಟರ್ಸ್ ಪತ್ರಕರ್ತೆ ಶೃತಿ ಬೆಂಗಳೂರಿನಲ್ಲಿ ಸಾವು: ಕೊಲೆ ಶಂಕೆ
ಬೆಂಗಳೂರು, ಮಾ. 24: ರಾಯಿಟರ್ಸ್ ಸುದ್ದಿ ಸಂಸ್ಥೆಯ ಪತ್ರಕರ್ತೆ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಬೆಂಗಳೂರಿನಲ್ಲಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ರಾಯಿಟರ್ಸ್ ಸುದ್ದಿ ಸಂಸ್ಥೆಯ ಶೃತಿ (35) ಸಾವನ್ನಪ್ಪಿದ್ದರು. ಶೃತಿ ಪತಿ ಅನೀಶ್ ಕೊಯಾಡನ್ ಕೊಲೆ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿ ಶೃತಿ ಸಹೋದರ ನಿಶಾಂತ್ ನಾರಾಯಣನ್ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
2017 ರಲ್ಲಿ ಸೃತಿ ಹಾಗೂ ಅನೀಶ್ ಮದುವೆಯಾಗಿತ್ತು. ಬೆಂಗಳೂರಿಗೆ ಮರಳಿದ್ದ ದಂಪತಿ ವೈಟ್ ಫೀಲ್ಡ್ ಸಮೀಪದ ನಲ್ಲೂರಹಳ್ಳಿ ರಸ್ತೆಯಲ್ಲಿರುವ ಎಸ್. ವಿ. ಮೈಪೇರ್ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದರು. ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅನೀಶ್ ಹಾಗೂ ಶೃತಿ ಇತ್ತೀಚೆಗೆ ಜಗಳ ಮಾಡಿಕೊಳ್ಳುತ್ತಿದ್ದರು. ಶೃತಿಗೆ ಅನೀಶ್ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಸಂಬಳದ ಹಣವನ್ನು ತವರು ಮನೆಗೆ ನೀಡುತ್ತೀಯ ಎಂದು ನಿಂದನೆ ಮಾಡಿ ಶೃತಿ ಮೇಲೆ ಹಲ್ಲೆ ನಡೆಸಿ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದ ಎಂದು ಮೃತ ಶೃತಿ ಸಹೋದರ ನಿಶಾಂತ್ ನಾರಾಯಣನ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತನ್ನ ಸಹೋದರಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಮನೆಯಲ್ಲಿ ಹಿಡನ್ ಕ್ಯಾಮರಾ ಇಟ್ಟು ಆಕೆಯ ಚಲನ ವಲನ ಬಗ್ಗೆ ನಿಗಾ ಇಡುತ್ತಿದ್ದ. ಆಕೆ ಮಾತನಾಡುತ್ತಿದ್ದನ್ನು ರೆಕಾರ್ಡ್ ಮಾಡುತ್ತಿದ್ದ. ವಾರಂತ್ಯದಲ್ಲಿ ಪ್ರವಾಸದ ಹೆಸರಿನಲ್ಲಿ ಕರೆದುಕೊಂಡು ಹೋಗಿ ಚಿತ್ರ ಹಿಂಸೆ ಕೊಡುತ್ತಿದ್ದ ಅನೀಶ್ ಈ ವರ್ಷ ಜನವರಿಯಲ್ಲಿ ಒಮ್ಮೆ ನನ್ನ ಸಹೋದರಿಯ ಹತ್ಯೆಗೆ ಯತ್ನಿಸಿದ್ದ. ಆಕೆಯ ಚೀರಾಟ ಕೇಳಿ ಭದ್ರತಾ ಸಿಬ್ಬಂದಿ ನನ್ನ ಸಹೋದರಿಯ ಜೀವ ಕಾಪಾಡಿದ್ದರು ಎಂದು ಹಿಂದಿನ ಘಟನೆಯನ್ನು ಉಲ್ಲೇಖಿಸಿದ್ದಾರೆ.
ನನ್ನ ಪತ್ನಿ ಇದೇ ಮಾ. 20 ರಂದು ನನ್ನ ಸಹೋದರಿ ಶೃತಿಗೆ ಕರೆ ಮಾಡಿದಾಗ ಆಕೆ ಕರೆ ಸ್ವೀಕರಿಸಿರಲಿಲ್ಲ. ಮರು ದಿನ ಕರೆ ಮಾಡಿದರೂ ಪೋನ್ ಸ್ವೀಕರಿಸಿರಲಿಲ್ಲ. ಹೀಗಾಗಿ ಮಾ. 22 ರಂದು ಬೆಳಿಗ್ಗೆ ಬೆಂಗಳೂರಿಗೆ ಬಂದು ನೋಡಿದಾಗ ಅಪಾರ್ಟ್ ಮೆಂಟ್ ನ ಮನೆಯೊಳಗೆ ಯಾರೂ ಕಾಣಲಿಲ್ಲ. ಭದ್ರತಾ ಸಿಬ್ಬಂದಿಯ ನೆರವಿನಿಂದ ಬಾಲ್ಕನಿ ಬಾಗಿಲು ಮುರಿದು ಒಳಗೆ ನೋಡಿದಾಗ ಶೃತಿ ನೇಣು ಬಿಗಿದ ಸ್ಥಿತಿಯಲ್ಲಿ ಬಿದ್ದಿದ್ದಳು. ಆಕೆಯ ಗಂಡನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತಳ ಸಹೋದರ ನಿಶಾಂತ್ ದೂರಿನಲ್ಲಿ ವಿವರಿಸಿದ್ದಾರೆ.