ಬೆಂಗಳೂರಿನಲ್ಲಿ ಇಂದು ಅನಿವಾಸಿ ಭಾರತೀಯರ ಬೆಳ್ಳಿಹಬ್ಬ
ಬೆಂಗಳೂರು, ಆಗಸ್ಟ್ 23 : ಹಲವಾರು ಕನಸುಗಳ ರೆಕ್ಕೆಗಳನ್ನು ಕಟ್ಟಿಕೊಂಡು ಭಾರತದಿಂದ ವಿದೇಶಕ್ಕೆ ಹಾರಿರುವ 'ಪ್ರತಿಭಾವಂತ' ಹಕ್ಕಿಗಳಿಗೆ ಲೆಕ್ಕವೇ ಇಲ್ಲ. ಆ ಹಕ್ಕಿ ಅಲ್ಲಿಯೇ ಗೂಡು ಕಟ್ಟಿಕೊಂಡು, ಮಕ್ಕಳು ಮರಿಗಳನ್ನು ಮಾಡಿಕೊಂಡು ಹಾಯಾಗಿ ಇದ್ದುಬಿಡುತ್ತದೆ.
ಎಲ್ಲೋ ಕೆಲವೊಂದು ಹಕ್ಕಿಗಳು ಅಲ್ಲಿ ಇದ್ದು ಬೇಸರವಾಗಿಯೋ ಅಥವಾ ಇಲ್ಲಿಯೇ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲದಿಂದಲೋ ತಾಯ್ನಾಡನ್ನು ಅರಸಿಕೊಂಡು ಬರುತ್ತವೆ. ಅವುಗಳ ಉದ್ದೇಶ ಒಂದೇ, ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ, ತಾಯ್ನಾಡಿನಲ್ಲೇ ಇದ್ದುಕೊಂಡು ತಾಯ್ನಾಡಿಗಾಗಿ ಏನಾದರೂ ಮಾಡಬೇಕೆಂಬುದು.
ಬಹ್ರೇನ್ ನಲ್ಲಿ ಬಿಲ್ಲವ ಸಮಾಜದಿಂದ ರಾಧಾ-ಕೃಷ್ಣ ವೇಷ ಸ್ಪರ್ಧೆ
ಅನಿವಾಸಿ ಭಾರತೀಯರಾಗಿದ್ದು ತಾಯ್ನಾಡ ಸೇವೆಗಾಗಿ ಭಾರತಕ್ಕೆ ಮರಳಿದ್ದ ಮಹಾತ್ಮಾ ಗಾಂಧಿ ಹಾಕಿಕೊಟ್ಟ ಹಾದಿಯಲ್ಲಿ ಹೆಜ್ಜೆಯಿಡುತ್ತ, ಅಮೆರಿಕ, ಯುರೋಪ್, ಆಸ್ಟ್ರೇಲಿಯಾ, ಯುಎಇ ಮುಂತಾದ ರಾಷ್ಟ್ರಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಭಾರತೀಯರು ಭಾರತಾಂಬೆಯ ಮಡಿಲಲ್ಲಿ ಕೈಲಾದ ಸೇವೆ ಮಾಡುತ್ತಿದ್ದಾರೆ.
ಹೀಗೆ, ವಿದೇಶದಲ್ಲಿ ಕಲರವ ಎಬ್ಬಿಸಿ, ತಾಯ್ನಾಡಿನ ಅದಮ್ಯ ಹಂಬಲದಿಂದ ಕರ್ನಾಟಕಕ್ಕೆ ವಾಪಸ್ ಬಂದು, ಇಲ್ಲಿನ ನಿರ್ಗತಿಕ ಬಡವರ ಉದ್ಧಾರದ ಮೂಲ ಉದ್ದೇಶದಿಂದ ಬೆಂಗಳೂರಿನಲ್ಲಿ ಹುಟ್ಟುಹಾಕಿದ್ದ ಅನಿವಾಸಿ ಭಾರತೀಯರ ಗುಂಪು ಬೆಳ್ಳಿ ಹಬ್ಬದ ಹೊಸ್ತಿಲಲ್ಲಿದೆ. ಇಂಥದೊಂದು ಐತಿಹಾಸಿಕ ಸಂದರ್ಭವನ್ನು ಆಚರಿಸದಿದ್ದರೆ ಹೇಗೆ?
ಬುದ್ಧಿಮತ್ತೆಯಲ್ಲಿ ಐನ್ ಸ್ಟೀನ್ ಮೀರಿಸಿದ ಬಾಲಕ ರಾಹುಲ್
ಹಿಂದಿರುಗಿರುವ ಅನಿವಾಸಿ ಭಾರತೀಯರ ಸಂಸ್ಥೆ, ಕರ್ನಾಟಕ ಸರಕಾರದ ಎನ್ಆರ್ಐ ಪೋರಂ ಮತ್ತು ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ಜೊತೆ ಜಂಟಿಯಾಗಿ ಆಗಸ್ಟ್ 28ರಂದು ಸಂಜೆ ಸಿಲ್ವರ್ ಜ್ಯುಬಿಲಿ ಆಚರಿಸುತ್ತಿದೆ. ಈ ಸಮಾರಂಭದಲ್ಲಿ ಎನ್ಆರ್ ನಾರಾಯಣಮೂರ್ತಿ ದಂಪತಿ ಸೇರಿದಂತೆ ಹಲವಾರು ದಿಗ್ಗಜರು ಭಾಗವಹಿಸುತ್ತಿದ್ದಾರೆ.
'ಎನ್ಆರ್ಐ ಹೀರೋ'ಗಳಿಗೆ ಸನ್ಮಾನ
ಈ ಸಂದರ್ಭದಲ್ಲಿ ತಮ್ತಮ್ಮ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ, ಮತ್ತು ಸಮಾಜದಲ್ಲಿ ಬದಲಾವಣೆಯ ಹರಿಕಾರರಾಗಿರುವ 'ಎನ್ಆರ್ಐ ಹೀರೋ'ಗಳನ್ನು ಬೆಂಗಳೂರಿನ ಪ್ಯಾಲೇಸ್ ರಸ್ತೆಯಲ್ಲಿರುವ ಹೋಟೆಲ್ ಶಾಂಗ್ರಿ ಲಾದಲ್ಲಿ, ಆಗಸ್ಟ್ 28, ಸೋಮವಾರ, ಸಂಜೆ ಸೂರ್ಯ ರಂಗೇರುವ ಹೊತ್ತಿನಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಗುತ್ತಿದೆ.
ಸಮ್ಮಾನಿತರಾಗಲಿರುವವ ಸಾಧಕರು
ಜೀವಮಾನದ ಸಾಧನೆಗಾಗಿ ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ, ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸ್ (ನೈಸ್) ಸ್ಥಾಪಕ ಅಶೋಕ್ ಖೇಣಿ, ಗ್ರಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕಿ ಕೇಜ್, Accel India ಸಂಸ್ಥೆಯ ಸಹಭಾಗಿ ಪ್ರಶಾಂತ್ ಪ್ರಕಾಶ್, ಸ್ಪರ್ಶ್ ಆಸ್ಪತ್ರೆಯ ಸಂಸ್ಥಾಪಕ ಡಾ. ಶರಣ್ ಪಾಟೀಲ.
ಸಿದ್ದರಾಮಯ್ಯನವರಿಂದ ಬೆಳ್ಳಿಹಬ್ಬದ ಉದ್ಘಾಟನೆ
ಸಂಜೆ 6ಕ್ಕೆ ಆರಂಭವಾಗಲಿರುವ ಅನಿವಾಸಿ ಭಾರತೀಯರ ಈ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಕೇಂದ್ರ ರಸಗೊಬ್ಬರ ಸಚಿವ ಅನಂತ್ ಕುಮಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ವಡೆಯರ್ ಮನೆತನದ ಯದುವೀರ್ ಅವರು 'Back-To-Serve' ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎನ್ಆರ್ಐ ಫೋರಂನ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ಮುಖ್ಯ ಅತಿಥಿಯಾಗಿದ್ದರೆ, ಇನ್ಫೋಸಿಸ್ ಫೌಂಡೇಷನ್ ನ ಮುಖ್ಯಸ್ಥೆ ಸುಧಾ ಮೂರ್ತಿ ಅವರು ಕೂಡ ಗೌರವ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.
ದೇವದಾಸಿಯರ ಬಗ್ಗೆ ಸುಧಾಮೂರ್ತಿ ಮಾತು
ವಾಪಸ್ ಬಂದಿರುವ ಅನಿವಾಸಿ ಭಾರತೀಯರ ಸಂಸ್ಥೆಯ ಅಧ್ಯಕ್ಷರಾಗಿರುವ ಮಂಜುನಾಥ್ ಬಿಜ್ಜಹಳ್ಳಿಯವರು ಸಂಸ್ಥೆ ನಡೆದುಬಂದ ಹಾದಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಸುಧಾ ಮೂರ್ತಿ ಅವರು ಇತ್ತೀಚೆಗೆ ಬಿಡುಗಡೆಯಾಗಿರುವ ಅವರ ಪುಸ್ತಕ 'ಥ್ರೀ ಥೌಸಂಡ್ ಸ್ಟಿಚಸ್'ನಲ್ಲಿ ದೇವದಾಸಿಯರ ಜೀವನ ಸುಧಾರಣೆಗಾಗಿ ತಾವು ಕೈಗೊಂಡಿರುವ ಕ್ರಮಗಳ ಬಗ್ಗೆ ಅನಿಸಿಕೆ ಹಂಚಿಕೊಳ್ಳಲಿದ್ದಾರೆ.
'ಕ್ಲಾತ್' ನೋಡಿ 'ಕ್ಲಾಸ್' ಅಳೆಯುವ ಮನಸ್ಥಿತಿ ಬದಲಾಗಬೇಕಿದೆ: ಸುಧಾಮೂರ್ತಿ
ರಿಕಿ ಕೇಜ್ ಸಂಗೀತ ಸಂಜೆ
ಸಂಜೆ 9 ಗಂಟೆಯ ನಂತರ ಗ್ರಾಮಿ ಪ್ರಶಸ್ತಿ ವಿಜೇತ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ರಿಕಿ ಕೇಜ್ ಮತ್ತು ಅವರ ತಂಡ ಅನಿವಾಸಿ ಭಾರತೀಯರು, ಸನ್ಮಾನಿತರು, ಗೌರವ ಆಹ್ವಾನಿತರು ಮತ್ತಿತರರನ್ನು ಲೈವ್ ಸಂಗೀತ ಕಾರ್ಯಕ್ರಮ ನಡೆಸುವ ಮೂಲಕ ರಂಜಿಸಲಿದ್ದಾರೆ.