ಆನೇಕಲ್ನಲ್ಲಿ 'ಮೋದಿ ಕ್ಯಾಂಟೀನ್' ತೆರೆದ ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಂ
ಬೆಂಗಳೂರು, ಮೇ 9: ಮಾಜಿ ಸಿಎಂ ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿದ್ದ ವೇಳೆ ಬಡವರ ಪಾಲಿಗೆ ಅನ್ನದಾತ ಎನ್ನಿಸಿಕೊಂಡಿದ್ದರು. ಇದಕ್ಕೆ ಕಾರಣವಾಗಿದ್ದು ಅನ್ನಭಾಗ್ಯ ಮತ್ತು ಇಂದಿರಾ ಕ್ಯಾಂಟೀನ್ ಅನ್ನು ತೆರೆೆದಿದ್ದು. ಬೆಂಗಳೂರಿನ ಪ್ರತಿಯೊಂದು ವಾರ್ಡ್ನಲ್ಲೂ ತೀರ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟ ಸಿಗುವ ಇಂದಿರಾ ಕ್ಯಾಂಟೀನ್ ತೆರೆದು ಅನ್ನರಾಮಯ್ಯ ಎನಿಸಿಕೊಂಡು ಹೈಕಾಮಂಡ್ ಮೆಚ್ಚುಗೆಗೂ ಪಾತ್ರರಾಗಿದ್ದರು. ಇಂದಿರಾ ಕ್ಯಾಂಟೀನ್ ವಿರೋಧಿಸುತ್ತಿರೋ ಬಿಜೆಪಿ ಪಕ್ಷದವರೇ ಆದ ನಿವೃತ್ತ ಐಎಎಸ್ ಕೆ ಶಿವರಾಂ ಮೋದಿ ಕ್ಯಾಂಟೀನ್ ತೆರೆದಿದ್ದಾರೆ.
ಆನೇಕಲ್ನಲ್ಲಿ ಮೋದಿ ಕ್ಯಾಂಟೀನ್ ತೆರೆೆದ ಕೆ ಶಿವರಾಂ
ಜನ ಸೇವೆಯೇ ಜನಾರ್ಧನ ಸೇವೆ ಅನ್ನೋ ಮಾತೊಂದಿತ್ತು. ಜನ ಸೇವೆಯನ್ನು ಅಧಿಕಾರಕ್ಕಾಗಿ ಮಾಡಬೇಡ ಅನ್ನೋ ಮಾತೂ ಇದೆ. ಆದರೆ ಜನ ಸೇವೆ ಮಾಡಲು ಅಧಿಕಾರ ಪಡೆಯುವ ಹಂಬಲದಲ್ಲಿ ರಾಜಕಾರಣಿಗಳು ಒಂದಿಲ್ಲೊಂದು ಕಸರತ್ತು ಮಾಡ್ತಾರೆ. ತಮ್ಮ ನೆಚ್ಚಿನ ನಾಯಕನನ್ನು ಮನವೊಲಿಸಲು ಇನ್ನಿಲ್ಲದ ಕಸರತ್ತನ್ನು ಮಾಡುತ್ತಾರೆ. ಇದೀಗ ಆನೇಕಲ್ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಬಿಜೆಪಿಯ ನಿವೃತ್ತ ಐಎಎಸ್ ಅಧಿಕಾರಿ ಆನೇಕಲ್ ನಲ್ಲಿ ಮೋದಿ ಕ್ಯಾಂಟೀನ್ ತೆರೆದಿದ್ದಾರೆ.
ಆನೇಕಲ್ ತಾಲೂಕು ಕಚೇರಿ ಬಳಿ ಮೋದಿ ಕ್ಯಾಂಟೀನ್
ಆನೇಕಲ್ ತಾಲೂಕು ಕಚೇರಿಯ ಬಳಿಯಲ್ಲಿ ಮೋದಿ ಕ್ಯಾಂಟೀನ್ ತೆರೆದಿರುವ ಕೆ.ಶಿವರಾಂರವರು ಬಡ ಹಾಗೂ ಮಧ್ಯಮ ಕಾರ್ಮಿಕರು, ಜನಸಾಮಾನ್ಯರು, ಕೂಲಿ ಕಾರ್ಮಿಕರು, ಆಟೋ ಚಾಲಕರು, ರೈತರು, ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಮೋದಿ ಕ್ಯಾಂಟೀನ್ ನಲ್ಲಿ ಅತ್ಯಂತ ಕಡಿಮೆ ದರದಲ್ಲಿ ಊಟದ ವ್ಯವಸ್ಥೆ ಎಂದು ನಮೂದಿಸಿದ್ದಾರೆ. ಬೆಳಗ್ಗೆ , ಮಧ್ಯಾಹ್ನ, ರಾತ್ರಿಯಲ್ಲೂ ಊಟದ ವ್ಯವಸ್ಥೆಯನ್ನು ಮಾಡಿದ್ದು ಬೆಳಗ್ಗೆ 10ರೂಪಾಯಿ, ಮಧ್ಯಾಹ್ನ, ರಾತ್ರಿ15ರೂಪಾಯಿ, ಕಾಫಿ, ಟೀ 5ರೂಪಾಯಿ ಮೋದಿ ಕ್ಯಾಂಟೀನ್ ನಲ್ಲಿ ಸಿಗಲಿದೆ ಎಂದು ನಮೂದಿಸಲಾಗಿದೆ.
ಯಾರು ಈ ಕೆ. ಶಿವರಾಂ..?
ಕೆ. ಶಿವರಾಂ ಮೂಲತಃ ರಾಮನಗರ ಜಿಲ್ಲೆಯವರಾಗಿದ್ದಾರೆ. ವಿವಿಪುರಂ ಸಂಜೆ ಕಾಲೇಜಿನಲ್ಲಿ ಪದವಿ ಪೂರೈಸಿದ ಕೆ. ಶಿವರಾಂ ಆ ಬಳಿಕ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಎಂಎ ಸ್ನಾತಕೋತ್ತರ ಪದವಿಯನ್ನು ಪೂರೈಸಿದರು. ಕನ್ನಡದಲ್ಲಿ ಐಎಎಸ್ ಪರೀಕ್ಷೆಯನ್ನು ಪೂರೈಸಿದ ಹೆಗ್ಗಳಿಕೆ ಕೆ ಶಿವರಾಂ ರವರಿಗೆ ಸಲ್ಲುತ್ತದೆ. ಆನೇಕಲ್ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟು ಮೋದಿ ಕ್ಯಾಂಟೀನ್ ತೆರೆದಿದ್ದಾರೆ ಎನ್ನಲಾಗುತ್ತಿದೆ. ಇನ್ನು ಬಿಜೆಪಿಯಲ್ಲಿ ಆನೇಕಲ್ ಟಿಕೆಟ್ ಗಾಗಿ ಪೈಪೋಟಿಗಳಿದ್ದು ಇನ್ನು ಕೆ ಶಿವರಾಂ ರವರಿಗೆ ಟಿಕೆಟ್ ಖಚಿತವಾಗಲ್ಲಿದ್ದರು ಈಗಾಗಲೇ ತಾವು ಬಿಜೆಪಿ ಅಭ್ಯರ್ಥಿ ಎಂಬುದನ್ನು ಮೋದಿ ಕ್ಯಾಂಟೀನ್ ಮೂಲಕ ಬಿಂಬಿಸಿಕೊಳ್ಳುತ್ತಿದ್ದಾರೆ.
ನಿವೃತ್ತ ಐಪಿಎಸ್ ರಾಜಕೀಯ ಹಿನ್ನೆಲೆ ಏನು..?
ಕೆ ಶಿವರಾಂರವರು 1986ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದರು. ಐಎಎಸ್ ಅಧಿಕಾರಿಯಾಗಿದ್ದಾಗಲೇ ಬಾ ನಲ್ಲೇ ಮಧುಚಂದ್ರಕೆ ಸೇರಿಂದಂತೆ 10ಕ್ಕೂ ಹೆಚ್ಚು ಸಿನಿಮಾ ನಟಿಸಿದ್ದರು. ಐಎಎಸ್ ನಿಂದ ಸ್ವಯಂನಿವೃತ್ತಿಯನ್ನು ತೆಗೆದುಕೊಂಡು ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಎಂಟ್ರಿಯಾಗಿದ್ದರು. ತಾವು ರಾಜಕೀಯ ಸೇರಿದ ಆರೇ ತಿಂಗಳಿಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷವನ್ನು ಸೇರಿ 2014 ಚುನಾವಣೆಗೆ ಸ್ಪರ್ಥಿಸಿ ಪರಾಜಯವನ್ನು ಕಂಡರು. 2016ರಲ್ಲಿ ಜೆಡಿಎಸ್ ಅನ್ನು ತೊರೆದು ಬಿಎಸ್ ಯಡಿಯೂರಪ್ಪ ಆಶೀರ್ವಾದದಿಂದ ಬಿಜೆಪಿಯನ್ನು ಸೇರ್ಪಡೆಗೊಂಡರು. ಆನೇಕಲ್ ನಾರಾಯಣಸ್ವಾಮಿ ಚಿತ್ರದುರ್ಗದ ಸಂಸದರಾದ ಬಳಿಕ ಆನೇಕಲ್ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಕೆ ಶಿವರಾಂರವರು ಚುನಾವಣೆಗೆ ಅಖಾಡವನ್ನುಅಣಿಗೊಳಿಸುತ್ತಿದ್ದಾರೆ. ಇದಕ್ಕೆಲ್ಲಾ ಮೊದಲ ಹೆಜ್ಜೆ ಎನ್ನುವಂತೆ ಮೋದಿ ಕ್ಯಾಂಟೀನ್ ತೆರೆದು ಜನರನ್ನು ತಮ್ಮತ್ತ ಸೆಳೆಯುವ ಯತ್ನವನ್ನು ಮಾಡುತ್ತಿದ್ದಾರೆ.
ಅದೇನಾದ್ರು ಜನ ಈಗಾಗಲೇ ಇಂದಿರಾ ಕ್ಯಾಂಟೀನ್, ಅಪ್ಪಾಜಿ ಕ್ಯಾಂಟೀನ್, ಅಮ್ಮಾ ಕ್ಯಾಂಟೀನ್ ಗಳ ರುಚಿಯನ್ನು ಸವೆದಿದ್ದಾರೆ. ಮೋದಿ ಕ್ಯಾಂಟೀನ್ ನಲ್ಲಿ ಹೇಗೆ ಊಟ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
Recommended Video