ಬಿಜೆಪಿಯೊಂದಿಗೆ ಕೆ.ಶಿವರಾಂ 'ಮಧುಚಂದ್ರ' ಆರಂಭ
ಬೆಂಗಳೂರು, ಅಕ್ಟೋಬರ್, 14: "ಕಾಂಗ್ರೆಸ್ ನಿಂದಲೇ ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. 69 ವರ್ಷಗಳಿಂದ ದಲಿತ ಸಮುದಾಯವನ್ನು ಕಾಂಗ್ರೆಸ್ ನ ಓಟ್ ಬ್ಯಾಂಕ್ ಆಗಿ ಬಳಸಿಕೊಂಡಿದೆ" ಎಂದು ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇಂದು ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. [ದಲಿತ ನಾಯಕ ಕೆ.ಶಿವರಾಂಗೆ ಬಿಜೆಪಿ ರೆಡ್ ಕಾರ್ಪೆಟ್!]
ರತ್ನಪ್ರಭಾ ಅವರಿಗೆ ಮುಖ್ಯ ಕಾರ್ಯದರ್ಶಿ ಹುದ್ದೆ ನೀಡುವ ಬದಲು ಕೇಂದ್ರ ಅಧಿಕಾರಿಯೊಬ್ಬರಿಗೆ ಹುದ್ದೆ ನೀಡುವ ಮೂಲಕ ರಾಜ್ಯ ಸರ್ಕಾರ ದಲಿತ ವಿರೋಧಿ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಅವರು ಆರೋಪಿಸಿದರು.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪಕ್ಷದ ಧ್ವಜ ನೀಡಿ ಕೆ.ಶಿವರಾಂ ಅವರನ್ನು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡಿಸಿಕೊಂಡರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್ ಕುಮಾರ್ ಹಾಗೂ ಡಿವಿ ಸದಾನಂದ ಗೌಡ ಜತೆಗಿದ್ದರು.
ರಾಜನಾಥ್ ಸಿಂಗ್ ಅವರು ಮಾತನಾಡಿ "ಪ್ರಧಾನಿ ಮೋದಿ ಅವರು ಅಧಿಕಾರ ವಹಿಸಿಕೊಂಡ ದಿನದಂದೇ ದಲಿತರು ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದ್ದರು. ನಮ್ಮ ಪಕ್ಷ ದಲಿತರ ಮತ್ತು ಹಿಂದುಳಿದ ವರ್ಗಗಳ ಪರವಾಗಿದೆ ಎಂದು ಹೇಳಿದರು.
" ಹಿರಿಯ ರಾಜಕಾರಣಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿ ಕೆಲಸ ನಿರ್ವಹಿಸಿದ್ದ ಶ್ರೀನಿವಾಸ್ ಪ್ರಸಾದ್ ಅಂತಹ ನಾಯಕರನ್ನು ಸಚಿವ ಸ್ಧಾನ ವಂಚಿತರನ್ನಾಗಿ ಕಾಂಗ್ರೆಸ್ ದಲಿತ ವಿರೋಧಿ ಎಂದು ತೋರಿಸಿಕೊಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆರೋಪಿಸಿದರು.
"ರಾಜ್ಯದ ಉದ್ದಗಲಕ್ಕೂ ಬಿಜೆಪಿ ಬೆಳೆದು ನಿಂತಿದೆ. ಕಾಂಗ್ರೆಸ್ ಗೆ ಉಳಿಗಾಲವಿಲ್ಲ, ಅದು ಹೀನಾಯ ಸ್ಥಿತಿಗೆ ತಲುಪಿದೆ' ಎಂದು ಅವರು ಹೇಳಿದರು.
ಛಲವಾದಿ ಮಹಾಸಭಾ ಸಂಘಟನೆಯಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ಶಿವರಾಂ ಅವರು ಈ ಹಿಂದೆ ಪಕ್ಷದಲ್ಲಿದ್ದಾಗ ಗೃಹ ಸಚಿವ ಪರಮೇಶ್ವರ್ ಅವರ ಆಪ್ತ ವಲಯದಲ್ಲಿ ಪ್ರಮುಖರಾಗಿದ್ದರು.
ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕೂಗಿಗೆ ಶಿವರಾಂ ಅವರು ದನಿಯಾಗಿದ್ದರು. ಕಾಂಗ್ರೆಸ್ ನಿಂದ ಟಿಕೆಟ್ ಪಡೆದು ಬಿಜಿಪಿಯ ಪ್ರಕಾಶ್ ಹುಕ್ಕೇರಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು.
ಕೋರ್ ಕಮಿಟಿ ಸದಸ್ಯರ ಗೈರು:
ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಅವರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ಕೋರ್ ಕಮಿಟಿ ಸದಸ್ಯರ ಗೈರು ಹಾಜರಿ ಕಂಡುಬಂತು.ಕೋರ್ ಕಮಿಟಿ ಸದಸ್ಯರ ಪೈಕಿ ಯಡಿಯೂರಪ್ಪ ಅವರನ್ನು ಹೊರತು ಪಡಿಸಿ ಇತರರು ಯಾರು ಭಾಗವಹಿಸದಿರುವುದು ಪಕ್ಷದಲ್ಲಿನ ಭಿನ್ನಮತವನ್ನು ತೋರಿಸಿಕೊಟ್ಟಿದೆ.
ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ, ರಾಮದಾಸ್, ವಿ. ಸೋಮಣ್ಣ, ಬಿ.ಜೆ.ಪುಟ್ಟಸ್ವಾಮಿ ಸುರೇಶ್ ಕುಮಾರ್, ಸಂಸದ ಪಿ.ಸಿ.ಮೋಹನ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.