ನೈಟ್ ಕರ್ಫ್ಯೂ ಸಮಯ ಪರಿಷ್ಕರಿಸುವಂತೆ ರೆಸ್ಟೊರೆಂಟ್ ಮಾಲೀಕರ ಮನವಿ
ಬೆಂಗಳೂರು, ಏಪ್ರಿಲ್ 10: ಬೆಂಗಳೂರು ಸೇರಿದಂತೆ ರಾಜ್ಯದ ಆರು ಜಿಲ್ಲೆಗಳಲ್ಲಿ ಶನಿವಾರ ರಾತ್ರಿಯಿಂದ ಏಪ್ರಿಲ್ 20ರವರೆಗೂ ನೈಟ್ ಕರ್ಪ್ಯೂ ಜಾರಿಗೆ ಬರಲಿದ್ದು, ಹಲವು ರೆಸ್ಟೊರೆಂಟ್ಗಳ ಮಾಲೀಕರು ರಾತ್ರಿ ಕರ್ಪ್ಯೂ ಸಮಯವನ್ನು ಪರಿಷ್ಕರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೊರೊನಾ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಏಪ್ರಿಲ್ 10ರಿಂದ ಏಪ್ರಿಲ್ 20ರವರೆಗೂ ರಾಜ್ಯದ ಏಳು ಜಿಲ್ಲೆಗಳ ಎಂಟು ನಗರಗಳಲ್ಲಿ ಕೊರೊನಾ ನೈಟ್ ಕರ್ಫ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ಕರ್ಫ್ಯೂ ಜಾರಿಯಲ್ಲಿರುವುದಾಗಿ ಆದೇಶಿಸಿತ್ತು.
ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ದೈನಂದಿನ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ
"ಕಳೆದ ಕೆಲವು ತಿಂಗಳಿನಿಂದಷ್ಟೇ ಸಂಜೆ ಹೊತ್ತು ಸ್ವಲ್ಪ ಜನರು ಬರಲು ಆರಂಭಿಸಿದ್ದರು. ಕರ್ಫ್ಯೂ ರಾತ್ರಿ ಹತ್ತು ಗಂಟೆಗೆ ಆರಂಭವಾದರೆ, 9.30ಕ್ಕೆ ನಾವು ರೆಸ್ಟೊರೆಂಟ್ ಬಾಗಿಲು ಮುಚ್ಚಬೇಕಾಗುತ್ತದೆ. ಏನೂ ವ್ಯಾಪಾರ ಆಗುವುದಿಲ್ಲ. ರಾತ್ರಿ ಕರ್ಫ್ಯೂ ಸಮಯವನ್ನು ಪರಿಷ್ಕರಿಸಬೇಕಾಗಿ ಮುಖ್ಯಮಂತ್ರಿಗಳಿಗೆ ಕೇಳಿಕೊಳ್ಳುತ್ತೇವೆ" ಎಂದು ರೆಸ್ಟೊರೆಂಟ್ ಮಾಲೀಕ ಮುಕೇಶ್ ತೊಲಾನಿ ಮನವಿ ಮಾಡಿದ್ದಾರೆ.
ಈ ಸಮಯವನ್ನು ಪರಿಷ್ಕರಣೆ ಮಾಡಿ ರಾತ್ರಿ 11ರವರೆಗೂ ಹೋಟೆಲ್ ರೆಸ್ಟೊರೆಂಟ್ ತೆರೆಯಲು ಅನುಮತಿ ನೀಡಿದರೆ ನಮ್ಮ ವ್ಯಾಪಾರಕ್ಕೂ ತೊಂದರೆಯಾಗುವುದಿಲ್ಲ ಎಂದಿದ್ದಾರೆ.
ಸದ್ಯಕ್ಕೆ ಜನರು ಸಂಜೆ ಹೊತ್ತು ಇಲ್ಲವೇ ರಾತ್ರಿ 9ಕ್ಕೆ ಹೋಟೆಲ್ಗಳಿಗೆ ಬರುತ್ತಾರೆ. ಈಗ 10 ಗಂಟೆಗೆ ಕರ್ಫ್ಯೂ ಹೇರಿರುವುದರಿಂದ ಯಾರೂ ಇತ್ತ ಮುಖ ಮಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿ ಗುರುವಾರ ಆದೇಶ ಹೊರಡಿಸಿದ್ದು, ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚು ದಾಖಲಾಗುತ್ತಿರುವ ಬೆಂಗಳೂರು, ಮೈಸೂರು, ಮಂಗಳೂರು, ಕಲಬುರಗಿ, ಬೀದರ್, ತುಮಕೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಿದೆ. ಕರ್ಫ್ಯೂಯಿಂದ ಅಗತ್ಯ ಸೇವೆಯು ಹೊರತಾಗಿದೆ ಎಂದು ತಿಳಿಸಿದ್ದಾರೆ.
ಏಪ್ರಿಲ್ 20ರವರೆಗೂ ಉತ್ಸವ, ಧಾರ್ಮಿಕ, ಸಾಮಾಜಿಕ ಸಭೆ ಸಮಾರಂಭಗಳ ಮೇಲೆಯೂ ನಿರ್ಬಂಧ ಹೇರಲಾಗಿದೆ.
Recommended Video